ಹೊಸದಿಲ್ಲಿ: ತೆಲಂಗಾಣದ ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಅಮಾನುಷ ಹತ್ಯೆ ಹಾಗೂ ಅದರ ಬಳಿಕ ನಡೆದಿದ್ದ ಆರೋಪಿಗಳ ಎನ್ಕೌಂಟರ್ ‘ಪೊಲೀಸರ ಸೃಷ್ಟಿ’ ಎಂದು ಮಾನವ ಹಕ್ಕುಗಳ ಆಯೋಗ ವರದಿಯಲ್ಲಿ ಉಲ್ಲೇಖಿಸಿದೆ.
ಎನ್ಕೌಂಟ್ ಘಟನೆಯ ತನಿಖೆ ನಡೆಸಲು ಸುಪ್ರೀಂಕೋರ್ಟ್ ನೇಮಿಸಿದ ಆಯೋಗವು ತನ್ನ ವರದಿ ಸಲ್ಲಿಸಿದ್ದು,
ಈ ಎನ್ಕೌಂಟರ್ ಪೊಲೀಸರ ಸೃಷ್ಟಿ ಎಂದು ತಿಳಿಸಿದೆ. ಆರೋಪಿಗಳನ್ನು ಸಾಯಿಸುವ ಬಯಕೆಯಿಂದಲೇ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಲಾಗಿತ್ತು” ಎಂದು ವರದಿ ಉಲ್ಲೇಖಿಸಿದೆ.
2019ರ ನವೆಂಬರ್ನಲ್ಲಿ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ (ದಿಶಾ ಪ್ರಕರಣ) ಸಂಬಂಧಿಸಿದಂತೆ ಮೊಹಮದ್ ಆರಿಫ್, ಜೋಲು ಶಿವ, ಜೋಲು ನವೀನ್ ಮತ್ತು ಚಿಂತಕುಂಟ ಚೆನ್ನಕೇಶವುಲು ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಅದರ ಬೆನ್ನಲ್ಲೇ ಅವರ ಎನ್ಕೌಂಟರ್ ಕೂಡ ನಡೆದಿತ್ತು.
ಘಟನೆಯ ಮರು ಸೃಷ್ಟಿ ಕಾರ್ಯಕ್ಕೆ ಕರೆದೊಯ್ದಿದ್ದಾಗ ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು.
ಅದಕ್ಕಾಗಿ ಅವರ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದರು.
ಹತ್ಯೆಯಾದ ನಾಲ್ವರು ಆರೋಪಿಗಳಲ್ಲಿ ಮೂವರು ಅಪ್ರಾಪ್ತ ವಯಸ್ಸಿನವರು ಎಂದು ವರದಿ ಹೇಳಿದೆ. ಈ ಪ್ರಕರಣದ ತನಿಖೆಯಲ್ಲಿ ಸಾಕಷ್ಟು ಲೋಪಗಳಿವೆ ಎಂದು ತೋರಿಸಿರುವ ಆಯೋಗ,
ಕೊಲೆ ಆರೋಪದಲ್ಲಿ 10 ಮಂದಿ ಪೊಲೀಸರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಶಿಫಾರಸು ಮಾಡಿದೆ.