ಉದ್ಧವ್ ಠಾಕ್ರೆಯಿಂದ ಸೌಹಾರ್ಧ ಕದಡುವ ಉದ್ಧಟತನ ಪ್ರದರ್ಶನ: ಸಿಎಂ ಯಡಿಯೂರಪ್ಪ ಕಿಡಿ..!
ಉಡುಪಿ: ಉಡುಪಿಯ ಕರಂಬಳ್ಳಿ ದೇವಾಲಯದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಯಡಿಯೂರಪ್ಪ ಗೋಪೂಜೆ ನಡೆಸುವ ಮೂಲಕ ಗೋಹತ್ಯೆ ನಿಷೇಧ ಕಾನೂನಿಗೆ ಚಾಲನೆ ನೀಡಿದ್ರು. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬಿಎಸ್ ವೈ, ಮಹಾತ್ಮ ಗಾಂಧೀಜಿಯವರ ಕನಸು ನನಸಾಗುತ್ತಿದೆ. ಸ್ವಾತಂತ್ರ್ಯ ಸಿಕ್ಕಿದ ತಕ್ಷಣ ಗೋಹತ್ಯೆ ನಿಷೇಧವಾಗಬೇಕೆಂದು ಅವರು ಬಯಸಿದ್ದರು.
ಕರ್ನಾಟಕದಲ್ಲಿ ಇಂದಿನಿಂದ ಗೋಹತ್ಯೆ ನಿಷೇಧ ಜಾರಿಯಾಗುತ್ತಿದೆ. ಇದೊಂದು ಐತಿಹಾಸಿಕ ನಿರ್ಣಯ. ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗೋಹತ್ಯೆಗೆ ಅವಕಾಶವಿಲ್ಲ.
ರಾಜ್ಯದ ಜನರ ಅಪೇಕ್ಷೆಯಂತೆ ಗೋಹತ್ಯೆ ನಿಷೇಧ ಜಾರಿ ಮಾಡಿದ್ದೇವೆ. ಇಂದಿನಿಂದ ರಾಜ್ಯದಲ್ಲಿ ಎಲ್ಲೂ ಗೋಹತ್ಯೆ ನಡೆಯುವಂತಿಲ್ಲ. ಈ ಕಾನೂನಿಗೆ ಜನರು ಸಹಕರಿಸಬೇಕು ಎಂದು ಮನವಿ ಮಾಡಿದ್ರು.
ಇಂದು ಕುಂಭಾಶಿ ಗಣಪತಿ, ಉಚ್ಚಿಲ ಮಹಾಲಕ್ಷ್ಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕುಂಭಾಶಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಯಡಿಯೂರಪ್ಪ ಆಪ್ತರಾದ ಹಾಸನ ಮೂಲದ ಜೆ.ಪಿ.ರಾಘವೇಂದ್ರ ರಾವ್ ಕುಟುಂಬದವರು ನಡೆಸುವ 1008 ಗಣಯಾಗದಲ್ಲಿ ಸಿ.ಎಂ ಭಾಗವಹಿಸಿದ್ದರು.
ಇನ್ನು ಈ ಕುರಿತು ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಮಾಧಾನ, ನೆಮ್ಮದಿ, ತೃಪ್ತಿಗಾಗಿ ದೇವರ ದರ್ಶನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಏತನ್ಮಧ್ಯೆಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡಿರುವುದು ಅವರ ಉದ್ಧಟತನದ ಪ್ರದರ್ಶನವಾಗಿದೆ ಎಂದು ಹೇಳಿದ್ದಲ್ಲದೆಇದು ಭಾರತೀಯ ಒಕ್ಕೂಟ ತತ್ವದ ವಿರುದ್ಧ ನಿಲುವು. ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರೂ ಬಲ್ಲ ಸತ್ಯ. ಹೀಗಿರುವಾಗ ಪ್ರಾದೇಶಿಕತೆ ಪ್ರದರ್ಶನ ಮತ್ತು ಭಾಷಾಂಧತೆಯ ಮಾತುಗಳು ದೇಶದ ಏಕತೆಗೆ ಮಾರಕವಾಗಿದ್ದು ಇದನ್ನು ಖಂಡಿಸುವುದಾಗಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ, ಅದೇ ರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ.
ಈ ಸೌಹಾರ್ದಯುತ ವಾತಾವರಣವನ್ನು ಕದಡುವ ಪ್ರಯತ್ನ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಂದ ಆಗುತ್ತಿರುವುದು ನೋವಿನ ಸಂಗತಿ. ಒಬ್ಬ ಭಾರತೀಯನಾಗಿ ಉದ್ಧವ್ ಠಾಕ್ರೆ ಒಕ್ಕೂಟ ತತ್ವವನ್ನು ಗೌರವಿಸುವ ಬದ್ಧತೆಯನ್ನು ತೋರಲಿ ಎಂದು ಬಿಎಸ್ ಯಡಿಯೂರಪ್ಪ ಸಲಹೆ ನೀಡಿದ್ದಾರೆ.