ಮಂಗಳೂರು: ಮಂಗಳೂರು ನಗರದ ಬಂದರು ವ್ಯಾಪ್ತಿಯ ಉದ್ಯಮಿಗೆ ದುಷ್ಕರ್ಮಿಗಳ ತಂಡವೊಂದು ಜೀವ ಬೆದರಿಕೆಯೊಡ್ಡಿದ್ದು ಈ ಸಂಬಂಧ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂದರು ಪ್ರದೇಶದ ಪಟಾಕಿ ಅಂಗಡಿ ಮಾಲಕ ಮುರಳೀಧರ ಪೈಗೆ ರವಿವಾರ ಸಂಜೆ 6:30ಕ್ಕೆ ಕರೆ ಮಾಡಿದ ವ್ಯಕ್ತಿಯೊಬ್ಬ 5 ಲಕ್ಷ ರೂ. ಮೌಲ್ಯದ ಪಟಾಕಿ ಬೇಕಾಗಿದ್ದು, ನಗರದ – ಹೋಟೆಲ್ ಒಂದಕ್ಕೆ ಬರಬೇಕೆಂದು ಸೂಚಿಸಿದ್ದ ಎನ್ನಲಾಗಿದೆ. ಆದರೆ ಅಲ್ಲಿಗೆ ಬರಲು ಸಾಧ್ಯವಿಲ್ಲ ಎಂದು ಮುರಳೀಧರ ಪೈ ತಿಳಿಸಿದ್ದರು ಎಂದು ಹೇಳಲಾಗಿದೆ.
ಸೋಮವಾರ ಮಧ್ಯಾಹ್ನ 2ಕ್ಕೆ ಮುರಳೀಧರ ಪೈ ತನ್ನ ಅಂಗಡಿಯಲ್ಲಿದ್ದಾಗ ತನ್ನ ಪರಿಚಯಸ್ಥರೇ ಆದ ದಿನೇಶ್ ಶೆಟ್ಟಿ ಹಾಗೂ ಇತರ 4 ಮಂದಿ ಏಕಾಏಕಿ ಅಂಗಡಿಗೆ ನುಗ್ಗಿ 5 ಲಕ್ಷ ರು. ಹಣ ಕೊಡಬೇಕು, ಇಲ್ಲವಾದರೆ ಶೂಟ್ ಮಾಡಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಕೆನ್ನೆಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ ದೂರಿನಲ್ಲಿ ತಿಳಿಸಲಾಗಿದೆ.
ಈ ಕೃತ್ಯದ ಹಿಂದೆ ಭೂಗತ ಲೋಕದ ಪಾತಕಿಯೊಬ್ಬನ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.