ಒಮನ್ ಮಸ್ಕತ್ ನಲ್ಲಿ ಪ್ರಪ್ರಥಮ ಬಾರಿಗೆ ತುಳು ನಾಡಿನ ಕಾರಣೀಕ ದೈವ ಕೊರಗಜ್ಜನ ಚರಿತ್ರೆ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರದರ್ಶನಗೊಂಡಿದೆ.
ಮಸ್ಕತ್ : ಒಮನ್ ಮಸ್ಕತ್ ನಲ್ಲಿ ಪ್ರಪ್ರಥಮ ಬಾರಿಗೆ ತುಳು ನಾಡಿನ ಕಾರಣೀಕ ದೈವ ಕೊರಗಜ್ಜನ ಚರಿತ್ರೆ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರದರ್ಶನಗೊಂಡಿದೆ.
ಶ್ರೀ ಶನೀಶ್ವರ ಭಕ್ತ ವೃಂದ, ಪಕ್ಷಿಕೆರೆ ತಂಡ ದವರು ಹರೀಶ್ ಶೆಟ್ಟಿ ಸೂಡ ವಿರಚಿತ “ಸ್ವಾಮಿ ಕೊರಗಜ್ಜ ” ಪ್ರಸಂಗ ವನ್ನು ಕಾಲಮಿತಿಯಲ್ಲಿ ಪ್ರಸ್ತುತಿ ಮಾಡಿದರು.
ಬಿರುವ ಜವನೆರ್ ಮಸ್ಕತ್ ವಾಟ್ಸಾಪ್ ಬಳಗ ದ ಸೇವಾ ಸಂಘಟನೆಯು ಸಂಯೋಜಿಸಿದ ಈ ಕಾರ್ಯಕ್ರಮ ಸಾವಿರಾರು ತುಳುವ ಯಕ್ಷಗಾನ ಅಭಿಮಾನಿಗಳ ಹಾಗೂ ಕೊರಗಜ್ಜ ಭಕ್ತರ ಮನ ಗೆದ್ದಿತು.
ಹನುಮಗಿರಿ ಮೇಳ ದಲ್ಲಿ ಕಲಾ ವ್ಯವಸಾಯ ಮಾಡುತ್ತಿರುವ ಖ್ಯಾತ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರು ಭಾಗವತಿಕೆ , ಪಕ್ಷಿಕೆರೆ ಪದ್ಮನಾಭ ಶೆಟ್ಟಿಗಾರ್, ಭಾಸ್ಕರ ಭಟ್ ಕಟೀಲು ಅವರು ಚೆಂಡೆ ಮದ್ದಳೆ ಹಿಮ್ಮೆಳ ದಲ್ಲಿ ಸಹಕರಿಸಿದರು.
ಶಿವಯೋಗಿ ಯಾಗಿ ಕದ್ರಿ ನವನೀತ ಶೆಟ್ಟಿ, ಕೊರಗಜ್ಜನಾಗಿ ಸದಾಶಿವ ಆಳ್ವ ತಲಪಾಡಿ, ಮೈರಕ್ಕೆ ಪಾತ್ರದಲ್ಲಿ ರಾಮಚಂದ್ರ ಮುಕ್ಕ, ಮೈಸಂದಾಯನಾಗಿ ಕಾವಲಕಟ್ಟೆ ದಿನೇಶ್ ಶೆಟ್ಟಿ, ಪಂಜಂದಾಯ ದೈವ ವಾಗಿ ದಯಾನಂದ ಜಿ. ಕತ್ತಲ್ಸಾರ್ , ಹಾಗೂ ಪುಷ್ಪರಾಜ್ ಕುಕ್ಕಾಜೆ ಅವರು ಅರಸು ದೈವ ಪಾತ್ರ ದಲ್ಲಿ ಅರ್ಥಗಾರಿಕೆ ಮೆರೆಸಿದರು.
ತುಳು ಸಂದಿ, ಪಾರ್ದನ, ಗಾದೆ, ನುಡಿಕಟ್ಟುಗಳ ಬಳಕೆಯೊಂದಿಗೆ ಗ್ರಾಮ್ಯ ತುಳು ಭಾಷೆಯ ಸೊಗಡನ್ನು ಅನಾವರಣ ಗೊಳಿಸಲಾಯಿತು.
ಕಾರ್ಯಕ್ರಮದ ಪೋಷಕ ಮಸ್ಕತ್ ಫಾರ್ಮಸಿ ಯ ಆಡಳಿತ ನಿರ್ದೇಶಕ ಬಕುಲ್ ಭಾಯ್ ಮೆಹತಾ ಅವರನ್ನು ಸನ್ಮಾನಿಸಲಾಯಿತು.
ಬಿರುವ ಜವನೆರ್ ಮಸ್ಕತ್ ನ ಸ್ಥಾಪಕ ಸಂಚಾಲಕ ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಸ್ವಾಗತಿಸಿದರು.
ಶ್ವೇತಾ ಸುವರ್ಣ ನಿರೂಪಿಸಿದರು. ಮಸ್ಕತ್ ಧಾರ್ ಸೈಟ್ ಶ್ರೀ ಕೃಷ್ಣ ದೇವಸ್ಥಾನ ದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ, ಚೆಂಡೆ ಬಳಗ ದೊಂದಿಗೆ ಕಲಾವಿದರನ್ನು ವೇದಿಕೆಗೆ ಬರಮಾಡಿ ಕೊಳ್ಳಲಾಯಿತು.
ಶಂಕರ್ ಉಪ್ಪುರ್ ದಂಪತಿಗಳು ದೀಪ ಪ್ರಜ್ವಲನ ಮಾಡಿದರು. ಮಕ್ಕಳು, ಮಹಿಳೆಯರು ಸೇರಿ ಹೆಚ್ಚಿನ ಪ್ರೇಕ್ಷಕರು ಚಾಪೆ ಯಲ್ಲಿ ಕುಳಿತು ಕೊರಗಜ್ಜನ ಕತೆಯನ್ನು ಉತ್ಸಾಹದಿಂದ ಆಸ್ವಾದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ನಡೆದ “ತುಳುವರ ಕೂಟ”ದಲ್ಲಿ ಕದ್ರಿ ನವನೀತ ಶೆಟ್ಟಿ ಕಲಾವಿದರ ಪರಿಚಯ ಮಾಡಿದರು.
ವಿವಿಧ ಸಮುದಾಯಗಳ ಪ್ರಮುಖರಾದ ಶಶಿಧರ ಶೆಟ್ಟಿ ಮಲ್ಲಾರ್, ನ್ಯಾಷನಲ್ ಬ್ಯಾಂಕ್ ಒಫ್ ಓಮನ್ ನ ರಾಮ್ಕಿ ಜಿ.ವಿ , ಲಕ್ಷ್ಮೀ ನಾರಾಯಣ ಆಚಾರ್, ಮಂಜುನಾಥ್ ನಾಯಕ್, ಪದ್ಮಾಕರ ಮೆಂಡನ್, ಡಾ. ಸಿ. ಕೆ. ಅಂಚನ್, ರತ್ನಾಕರ ಆಚಾರ್ಯ, ರಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು .
ದಯಾನಂದ ಜಿ. ಕತ್ತಲ್ಸಾರ್ ಅವರು “ಕೂಟದ ಬಿನ್ನೆ ” ನೆಲೆಯಲ್ಲಿ ತುಳು ಯಕ್ಷಗಾನದ ಮೂಲಕ ಕೊರಗಜ್ಜ ನ ಕಥೆಯನ್ನು ತುಳುವರಿಗೆ ಪರಿಚಯಿಸಿದ ಸಂಘಟಕರನ್ನು ಅಭಿನಂದಿಸಿದರು