LATEST NEWS
ಕೋರ್ಟ್ನಲ್ಲಿ ಗಲಾಟೆ ಪ್ರಕರಣ: ವಕೀಲ ಕೆ.ಎನ್. ಜಗದೀಶ್ಗೆ ಜಾಮೀನು ಮಂಜೂರು
ಬೆಂಗಳೂರು: ನಗರದ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಕೊಲೆಯತ್ನ ಕೇಸ್ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ವಕೀಲ ಜಗದೀಶ್ಗೆ ಸೆಷನ್ಸ್ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷ್ಯಗಳನ್ನು ನಾಶಪಡಿಸಬಾರದು ಅಥವಾ ಅವುಗಳ ಮೇಲೆ ಪ್ರಭಾವ ಬೀರಬಾರದು.
ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿ ಕೋರ್ಟ್ ಜಾಮೀನು ನೀಡಿದೆ.
ಸದ್ಯ ಹಲಸೂರು ಗೇಟ್ ಠಾಣೆ ಪೊಲೀಸರು ದಾಖಲಿಸಿರುವ ಕೊಲೆ ಯತ್ನ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದು, ಕೊಡಿಗೇಹಳ್ಳಿ ಠಾಣೆ ಪೊಲೀಸರು ದಾಖಲಿಸಿರುವ ಜಾತಿ ನಿಂದನೆ ಪ್ರಕರಣದಲ್ಲಿ ಜಾಮೀನು ಸಿಗಬೇಕಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ವಾದ ಮಂಡನೆ ಮುಕ್ತಾಯವಾಗಿದ್ದು, ಕೋರ್ಟ್ ಆದೇಶವನ್ನು ಸೋಮವಾರಕ್ಕೆ (ಮಾ.7) ಮುಂದೂಡಿದೆ.
ಹೀಗಾಗಿ, ಜಗದೀಶ್ ಬಿಡುಗಡೆಗೊಳ್ಳಲು ಮತ್ತೊಂದು ಪ್ರಕರಣದಲ್ಲಿಯೂ ಜಾಮೀನು ಸಿಗಬೇಕಿದೆ. ಅರ್ಜಿದಾರ ಜಗದೀಶ್ ಪರ ವಕೀಲರಾದ ಹರೀಶ್ ಪ್ರಭು ಹಾಗೂ ಬಾಲನ್ ವಾದ ಮಂಡಿಸಿದ್ದರು.
DAKSHINA KANNADA
ಮಂಗಳೂರಿನಲ್ಲಿ ಬೆಳಕಿಗೆ ಬಂತು ಬಹುದೊಡ್ಡ ಆನ್ಲೈನ್ ವಂಚನೆ ಪ್ರಕರಣ; ಕೋಟಿಗಟ್ಟಲೆ ಕಳೆದುಕೊಂಡ ನಿವೃತ್ತ ಇಂಜಿನಿಯರ್
ಮಂಗಳೂರು : ಇತ್ತೀಚೆಗೆ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗಿದೆ. ವಿದ್ಯಾವಂತರೇ ಈ ಮೋಸದ ಜಾಲಕ್ಕೆ ಬೀಳುತ್ತಿರೋದು ವಿಪರ್ಯಾಸ. ಇದೀಗ ಮಂಗಳೂರಿನಲ್ಲಿ ಮತ್ತೊಂದು ಪ್ರಕರಣ ನಡೆದಿದೆ. ಇಲ್ಲಿ 72 ವರ್ಷದ ನಿವೃತ್ತ ಇಂಜಿನಿಯರ್ ಒಬ್ಬರು ಸಾವಿರ ಅಲ್ಲ, ಲಕ್ಷ ಅಲ್ಲ ಬರೋಬ್ಬರಿ 1.60 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಮುಂಬೈ ಕ್ರೈಂ ಬ್ರಾಂಚ್ ಹೆಸರಲ್ಲಿ ವಂಚನೆ:
ಮುಂಬೈ ಕ್ರೈಂ ಬ್ರಾಂಚ್ ಮತ್ತು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಆನ್ಲೈನ್ ವಂಚಕರು ನಿವೃತ್ತ ಇಂಜಿನಿಯರ್ ಗೆ ಬೆದರಿಕೆ ಒಡ್ಡಿದ್ದಾರೆ. ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್ಗೆ ಕಳುಹಿಸಲಾದ ಪಾರ್ಸೆಲ್ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿದ್ದಾರೆ.
ಫೋನ್ ಮಾಡಿದ ಅಪರಿಚಿತ ವ್ಯಕ್ತಿ ತನ್ನ ಹೆಸರು ರಾಜೇಶ್ ಕುಮಾರ್ ಮತ್ತು ಫೆಡೆಕ್ಸ್ ಕಂಪನಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ನೀವು ಥೈಲ್ಯಾಂಡ್ಗೆ ಕಳುಹಿಸಿದ್ದ ಪಾರ್ಸೆಲ್ ನ್ನು ಕಸ್ಟಮ್ಸ್ ವಶಪಡಿಸಿಕೊಂಡಿದೆ. ಇದು ಅಫ್ಘಾನಿಸ್ತಾನ ಮತ್ತು ಕೀನ್ಯಾದ ಐದು ಪಾಸ್ಪೋರ್ಟ್ಗಳನ್ನು, ಮೂರು ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿದೆ. 140 ಗ್ರಾಂ ಎಂಡಿಎಂಎ ಔಷಧ, ನಾಲ್ಕು ಕಿಲೋ ಬಟ್ಟೆ ಮತ್ತು ಲ್ಯಾಪ್ಟಾಪ್ ಹೊಂದಿದೆ. ಮುಂಬೈ ಅಪರಾಧ ವಿಭಾಗವು ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಖತರ್ನಾಕ್ ವಂಚಕ ಹೆದರಿಸಿದ್ದಾನೆ.
ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿ ಎಂದು ಹೇಳಿಕೊಂಡ ಇನ್ನೊಬ್ಬ ವ್ಯಕ್ತಿ ಸಿಬಿಐ ಅಧಿಕಾರಿ ರುದ್ರ ರಾಥೋಡ್ ಹೆಚ್ಚುವರಿ ಮಾಹಿತಿಯನ್ನು ನೀಡಲಿದ್ದಾರೆ ಮತ್ತು ಇ-ಮೇಲ್ ಮೂಲಕ rathoreb@21 ಗೆ ಸಂಪರ್ಕಿಸಲು ನಿವೃತ್ತ ಎಂಜಿನಿಯರ್ಗೆ ಸೂಚಿಸಿದ್ದಾರೆ. ನಂತರ ರುದ್ರ ರಾಥೋಡ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿ ಹಲವು ಮಕ್ಕಳನ್ನು ಹತ್ಯೆಗೈದ ತಂಡ ಈ ಪ್ರಕರಣದಲ್ಲಿ ಶಾಮೀಲಾಗಿದೆ ಎಂದು ತಿಳಿಸಿದ್ದಾನೆ. ಜತೆಗೆ, ನೀವು ತನಿಖೆಗೆ ಸಹಕರಿಸದಿದ್ದರೆ ನಿಮ್ಮ ಮಗ ಮತ್ತು ಮಗಳನ್ನು ಇಂಟರ್ಪೋಲ್ ಮೂಲಕ ಬಂಧಿಸಬೇಕಾಗುತ್ತದೆ ಎಂದು ಬೆದರಿಸಿದ್ದಾನೆ.
ಖದೀಮರ ಫೋನ್ ಕರೆಗೆ ನಿವೃತ್ತ ಎಂಜಿನಿಯರ್ ಭಯಭೀತರಾಗಿದ್ದಾರೆ. ಇದು ಮೋಸದ ಕರೆ ಎಂಬುದೂ ಭೀತಿಯಲ್ಲಿ ಅವರಿಗೆ ಅರಿವಾಗಿರಲಿಲ್ಲ. ವಂಚಕರು ಸ್ಕೈಪ್ ಖಾತೆ ತೆರೆಯುವಂತೆ ಒತ್ತಾಯಿಸಿದ್ದಾರೆ. ಸ್ಕೈಪ್ ಅಪ್ಲಿಕೇಶನ್ನಲ್ಲಿ ಸಿಬಿಐ ಅಧಿಕಾರಿಗಳಂತೆ ಪೋಸ್ ನೀಡಿ ಹಲವಾರು ನೋಟಿಸ್ಗಳನ್ನು ಕಳುಹಿಸಿದ್ದಾರೆ. ಬಂಧನದಿಂದ ಬಚಾವಾಗಬೇಕಾದರೆ ಬಾಂಡ್ಗಳ ರೂಪದಲ್ಲಿ ಹಣವನ್ನು ಕಳುಹಿಸುವಂತೆ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಮೊತ್ತವನ್ನು ಹಿಂದಿರುಗಿಸುವುದಾಗಿ ನಿವೃತ್ತ ಎಂಜಿನಿಯರ್ಗೆ ಭರವಸೆ ನೀಡಿದ್ದರು. ತನಗೆ ಮತ್ತು ಮಕ್ಕಳಿಗೆ ಹಾನಿ ಮಾಡಬೇಡಿ ಎಂದು ಮನವಿ ಮಾಡಿದ ಎಂಜಿನಿಯರ್, ಐಸಿಐಸಿಐ ಬ್ಯಾಂಕ್ ಖಾತೆಯಿಂದ ಮೇ 2 ರಂದು 1.1 ಕೋಟಿ ರೂ. ಮತ್ತು ಮೇ 6 ರಂದು 50 ಲಕ್ಷ ರೂ. ಗಳನ್ನು ಹಣ ವರ್ಗಾವಣೆ ಮಾಡಿದ್ದರು.
ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತಲೆಮರಿಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್
ಮರುದಿನ ಅಪರಿಚಿತರಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಅವರು ತನ್ನ ಮಗಳಿಗೆ ಮಾಹಿತಿ ನೀಡಿದ್ದು, ತಾವು ವಂಚನೆಗೊಳಗಾಗಿರುವುದು ಅವರಿಗೆ ಅರಿವಾಗಿದೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪುತ್ತೂರು ವಂಚನೆ ಪ್ರಕರಣ ನೆನಪಿಸಿದ ಕೇಸ್:
ಈಗಾಗಲೇ ಹಲವಾರು ಆನ್ ಲೈನ್ ವಂಚನೆ ಪ್ರಕರಣ ನಡೆಯುತ್ತಿವೆ. ಮಾರ್ಚ್ ತಿಂಗಳಲ್ಲಿ ವೈದ್ಯರೊಬ್ಬರು ವಂಚನೆಗೊಗಾಗಿದ್ದರು. ಪುತ್ತೂರು ನಗರದ ಬೊಳ್ವಾರು ನಿವಾಸಿ ಡಾ. ಚಿದಂಬರ ಅಡಿಗ ವಂಚನೆಗೊಳಗಾಗಿದ್ದರು. ಮಾ.28 ರಂದು ಬೆಳಗ್ಗೆ, ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಮಾಡಿ ದೆಹಲಿ ಪೊಲೀಸ್ ಎಂಬುದಾಗಿ ನಂಬಿಸಿದ್ದಾನೆ. ನಿಮ್ಮ ಮೇಲೆ ದೆಹಲಿಯಲ್ಲಿ ಮಾದಕ ವಸ್ತುವಿಗೆ ಸಂಬಂಧಿಸಿದಂತೆ ಹಾಗೂ ಅಕ್ರಮ ಹಣ ಹೊಂದಿರುವ ಬಗ್ಗೆ ಮತ್ತು ಮಾನವ ಕಳ್ಳ ಸಾಗಾಣಿಕ ಪ್ರಕರಣ ದಾಖಲಾಗಿ, ಅರೆಸ್ಟ್ ಮಾಡಲು ಕೋರ್ಟ್ ನಿಂದ ವಾರಂಟ್ ಎಂದು ಹೇಳಿ, ನೀವು ದೆಹಲಿಯ ಸಿಬಿಐ ಕೋರ್ಟ್ ಗೆ ಹಾಜರಾಗಬೇಕು. ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್ಸೆನ್ ಮೂಲಕ ಕೋರ್ಟ್ ನ ಕೇಸ್ ನಡೆಸುತ್ತೇವೆ. ನೀವು ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣವನ್ನು ನಾನು ಹೇಳುವ ಅಕೌಂಟ್ ನಂಬರ್ ಗೆ ವರ್ಗಾವಣೆ ಮಾಡಬೇಕು.
ನಿಮ್ಮ ಕೋರ್ಟ್ ಕೆಲಸ ಮುಗಿದ ಮೇಲೆ ನಿಮಗೆ ನಿಮ್ಮ ಹಣ ವಾಪಾಸು ಸಿಗುತ್ತದೆ, ಇಲ್ಲದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂಬುದಾಗಿ ತಿಳಿಸಿದ್ದಾರೆ. ದೂರುದಾರರ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವೊಂದು ದಾಖಲೆಗಳನ್ನು ಅಡಿಗ ರವರ ಮೊಬೈಲ್ ಫೋನ್ ನ ವಾಟ್ಸ್ ಆಪ್ ಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : ಆನ್ಲೈನ್ ಮೋಸದ ಜಾಲಕ್ಕೆ ಬಿದ್ದು ಲಕ್ಷಗಟ್ಟಲೆ ಹಣ ಕಳೆದುಕೊಂಡ ಪುತ್ತೂರಿನ ವೈದ್ಯ..! ಕೇಸ್ಗೆ ಭಯಬಿದ್ರಾ ವೈದ್ಯ..!!
ಅಪರಿಚಿತನ ಮಾತನ್ನು ನಂಬಿ, ಗಾಬರಿಗೊಂಡು ಅಡಿಗ ತಮ್ಮ ಬ್ಯಾಂಕ್ ಖಾತೆಯಿಂದ, RTGS ಮೂಲಕ ಸದರಿ ಅಪರಿಚಿತ ತಿಳಿಸಿದ ಬ್ಯಾಂಕ್ ಖಾತೆಗೆ ರೂ 16,50,000/- ಹಣವನ್ನು ವರ್ಗಾವಣೆ ಮಾಡಿ ಮೋಸ ಹೋಗಿದ್ದರು.
DAKSHINA KANNADA
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತಲೆಮರಿಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್
ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನ ಬಂಧನವಾಗಿದೆ. ಆರೋಪಿ ಮಹಮ್ಮದ್ ಮುಸ್ತಾಫಾನನ್ನು ಎನ್ಐಎ ಅಧಿಕಾರಿಗಳು ಹಾಸನದ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ಬಂಧಿಸಿದ್ದಾರೆ. ಆರೋಪಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೈಚಾರು ಗ್ರಾಮದ ಶಾಂತಿನಗರ ನಿವಾಸಿ.
2022 ರ ಜುಲೈ 26 ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆ ನಡೆಸಲಾಗಿತ್ತು. ಕೋಳಿ ಅಂಗಡಿ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು ಅಂಗಡಿ ಬಂದ್ ಮಾಡುತ್ತಿದ್ದ ವೇಳೆ ಬೈಕ್ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದರು.
ಮುಂದೆ ಓದಿ..; ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತ ಚಲಾವಣೆ.!! ವಿವಾದಕ್ಕೆ ಕಾರಣವಾದ ವೀಡಿಯೋ
ಬಾರಿ ಸದ್ದು ಮಾಡಿದ್ದ ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣದಲ್ಲಿ ಪಿಎಫ್ಐ ಕೈವಾಡ ಇದೆ ಎಂದು ಆರೋಪಿಸಿ ಅಂದಿನ ಸರ್ಕಾರ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿತ್ತು. ತನಿಖೆ ನಡೆಸಿದ ಎನ್ಐಎ ತಂಡ ಕರ್ನಾಟಕ ಹಾಗೂ ಕೇರಳದಲ್ಲಿ ಜಾಲಾಡಿ ಹಲವು ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿತ್ತು. ಗೌಪ್ಯ ಸಭೆ ನಡೆಸಿದ ಸಭಾಂಗಾಣ, ಪಿಎಫ್ಐ ಹಾಗೂ ಎಸ್ಡಿಪಿಐ ಕಛೇರಿಗಳಿಗೆ ಭೀಗ ಜಡಿದಿತ್ತು. ಆದ್ರೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಮಾಹಿತಿ ನೀಡಿದವರಿಗೆ ಎನ್ಐಎ ಬಹುಮಾನದ ಘೋಷಣೆ ಮಾಡಿತ್ತು. ಇಷ್ಟೇ ಅಲ್ಲದೆ ಆರೋಪಿಗಳ ಆಸ್ತಿಮುಟ್ಟುಗೋಲು ಹಾಕುವ ಬಗ್ಗೆಯೂ ನೋಟಿಸು ಜಾರಿ ಮಾಡಿತ್ತು.
ಇದೀಗ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಎನ್ಐಎ ತಂಡ ಆರೋಪಿಗೆ ಆಶ್ರಯ ನೀಡಿದವನ ಸಹಿತ ಮೂವರನ್ನು ಬಂಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಂಧಿತರಲ್ಲಿ ಓರ್ವ ಆರೋಪಿ ಮಹಮ್ಮದ್ ಮುಸ್ತಾಫಾ ಅನ್ನೋದು ಸ್ಪಷ್ಟವಾಗಿದ್ದು ಮತ್ತೋರ್ವ ಯಾರು ಅನ್ನೋದು ಇನ್ನೂ ಮಾಹಿತಿ ಲಭ್ಯವಾಗಬೇಕಾಗಿದೆ. ಇನ್ನು ಆರೋಪಿ ಮುಸ್ತಫಾ ಪೈಚಾರ್ ಪತ್ತೆಗಾಗಿ 5 ಲಕ್ಷ ರೂ ಬಹುಮಾನವನ್ನು ಎನ್.ಐ.ಎ.ವಿಶೇಷ ನ್ಯಾಯಾಲಯ ಘೋಷಣೆ ಮಾಡಿತ್ತು.
ಆರೋಪಿಗಳ ಪತ್ತೆಗೆ ಬಹುಮಾನ ಘೋಷಿಸಿದ ಎನ್ಐಎ:
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೊಡಾಜೆಯ ಕೊಡಾಜೆ ಅದ್ದ ಎಂಬವರ ಮಗ ಮೊಹಮ್ಮದ್ ಷರೀಫ್(53)- 5 ಲಕ್ಷ ಹಾಗೂ ನೆಕ್ಕಿಲಾಡಿಯ ಅಗ್ನಾಡಿ ಹೌಸ್ ನ ಅಬೂಬಕರ್ ಮಗ ಮಸೂದ್ ಕೆ.ಎ (40)-5 ಲಕ್ಷ ಒಟ್ಟು 10 ಲಕ್ಷ ಬಹುಮಾನವನ್ನು ಎನ್ಐಎ ಘೋಷಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪಡಂಗಡಿ ಗ್ರಾಮದ ನೌಷದ್ (32 ವರ್ಷ), ಕೊಡಗು ಜಿಲ್ಲೆ ಸೋಮವಾರಪೇಟೆಯ ಚೌಡ್ಲಿ ನಿವಾಸಿ ಅಬ್ದುಲ್ ನಾಸಿರ್ (41 ವರ್ಷ), ಸೋಮವಾರಪೇಟೆಯ ಹನಗಲ್ ಕಲಂದಕೂರ್ ನಿವಾಸಿ, ಅಬ್ದುಲ್ ರಹಿಮಾನ್ (36 ವರ್ಷ)ಈ ಮೂವರ ಬಗ್ಗೆ ಸುಳಿವು ನೀಡಿದವರಿಗೆ ತಲಾ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್ಐಎ ತಿಳಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಸ್ತಫಾ ಪೈಚಾರ್ ಮತ್ತು ಅಬುಬಕ್ಕರ್ ಸಿದ್ಧೀಕ್ ಅವರು ತಲೆಮರೆಸಿಕೊಂಡಿದ್ದು, ಇವರು ಬೆಳ್ಳಾರೆ ಗ್ರಾಮದವರಾಗಿದ್ದಾರೆ. ಇವರನ್ನು ಹುಡುಕಿಕೊಟ್ಟಲ್ಲಿ ತಲಾ 5 ಲಕ್ಷ ಮತ್ತು 2 ಲಕ್ಷ ರೂ ಬಹುಮಾನವನ್ನು ಎನ್.ಐ.ಎ.ವಿಶೇಷ ನ್ಯಾಯಾಲಯ ಘೋಷಣೆ ಮಾಡಿತ್ತು.
LATEST NEWS
ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತ ಚಲಾವಣೆ.!! ವಿವಾದಕ್ಕೆ ಕಾರಣವಾದ ವೀಡಿಯೋ
ಮಧ್ಯ ಪ್ರದೇಶದ/ಮಂಗಳೂರು: ಮಧ್ಯಪ್ರದೇಶ ಬಿಜೆಪಿ ನಾಯಕನ ಪುತ್ರ ಅಪ್ರಾಪ್ತ ಬಾಲಕ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದ್ದಾನೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವೀಡಿಯೋ ಬಾರಿ ವಿವಾದಕ್ಕೆ ಕಾರಣವಾಗಿದೆ.
ಮಂಗಳೂರು: ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ; ಪೊಲೀಸ್ ಅಧಿಕಾರಿಗಳ ಜೊತೆಯಲ್ಲೇ ಅನುಚಿತ ವರ್ತನೆ
ಮಧ್ಯ ಪ್ರದೇಶದ ಬೆರಾಸಿಯಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಂಚಾಯತ್ ನಾಯಕ ವಿನಯ್ ಮೆಹ್ರಾ ಚುನಾವಣೆ ವೇಳೆ ಮಗನನ್ನು ಮತಗಟ್ಟೆಗೆ ಕರೆದುಕೊಂಡು ಹೋಗಿದ್ದಾರೆ. ಮಗನಿಂದಲೇ ಬಿಜೆಪಿ ಚಿಹ್ನೆಯನ್ನು ಒತ್ತಿಸಿದ್ದಾರೆ. ಅಲ್ಲದೇ ಅದನ್ನು ವೀಡಿಯೋ ಮಾಡಿ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಈ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದು ಇದೀಗ ವಿವಾದಕ್ಕೆ ಎಡೆಮಾಡಿದೆ.