ಐಪಿಎಸ್ ಅಧಿಕಾರಿ ಎಂಬುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದ ನಕಲಿ ಪೊಲೀಸ್ ಅಧಿಕಾರಿಯನ್ನು ಅಸಲಿ ಪೊಲೀಸ್ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬೆಂಗಳೂರು: ಐಪಿಎಸ್ ಅಧಿಕಾರಿ ಎಂಬುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದ ನಕಲಿ ಪೊಲೀಸ್ ಅಧಿಕಾರಿಯನ್ನು ಅಸಲಿ ಪೊಲೀಸ್ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಆರ್. ಶ್ರೀನಿವಾಸ್ (34) ಬಂಧಿತ ಆರೋಪಿಯಾಗಿದ್ದು 36.20 ಲಕ್ಷ ನಗದು ಜಪ್ತಿ ಮಾಡಿದ್ದಾರೆ.
‘ಚಂದ್ರಾ ಲೇಔಟ್ ಮಾರುತಿನಗರದ ಶ್ರೀನಿವಾಸ್, ವೆಂಕಟನಾರಾಯಣ್ ಎಂಬುವವರಿಂದ ₹ 2.50 ಕೋಟಿ ಪಡೆದು ವಂಚಿಸಿದ್ದ.
ಈ ಬಗ್ಗೆ ದಾಖಲಾಗಿದ್ದ ಪ್ರಕರಣದಲ್ಲಿ ಶ್ರೀನಿವಾಸ್ನನ್ನು ಇತ್ತೀಚೆಗೆ ಬಂಧಿಸಲಾಗಿತ್ತು.
ಈತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಮತ್ತಷ್ಟು ಪ್ರಕರಣಗಳು ಪತ್ತೆಯಾಗಿವೆ’ ಎಂದು ತನಿಖೆ ನಡೆಸುತ್ತಿರುವ ತಲಘಟ್ಟಪುರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
‘ಬಿಎಂಡಬ್ಲ್ಯು, ರಾಯಲ್ ಎನ್ಫೀಲ್ಡ್ ಸೇರಿದಂತೆ ನಾಲ್ಕು ಬೈಕ್, ಇನ್ನೋವಾ ಕಾರು ಹಾಗೂ 2 ಐಫೋನ್ ಜಪ್ತಿ ಮಾಡಲಾಗಿದೆ.
ಆಟಿಕೆ ಪಿಸ್ತೂಲ್, 4 ವಾಕಿಟಾಕಿ ಹಾಗೂ ನಕಲಿ ಗುರುತಿನ ಚೀಟಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.
‘ಸಿನಿಮಾದಲ್ಲಿ ಬರುತ್ತಿದ್ದ ಪೊಲೀಸ್ ಪಾತ್ರಗಳನ್ನು ಗಮನಿಸುತ್ತಿದ್ದ ಆರೋಪಿ, ಅದರಂತೆ ಸಮವಸ್ತ್ರ ಖರೀದಿಸಿದ್ದ.
ಐಪಿಎಸ್ ಅಧಿಕಾರಿ, ಕೇಂದ್ರ ಗುಪ್ತದಳದ ಅಧಿಕಾರಿ, ರೈಲ್ವೆ ಇಲಾಖೆ ಅಧಿಕಾರಿ ಹಾಗೂ ಸೇನೆ ಅಧಿಕಾರಿ ಎಂಬುದಾಗಿ ಹೇಳಿಕೊಂಡು ಓಡಾಡುತ್ತಿದ್ದ.
ಜನರಿಗೆ ಹಲವು ಆಮಿಷವೊಡ್ಡಿ ಹಣ ಪಡೆದು ವಂಚಿಸುತ್ತಿದ್ದನೆಂಬುದು ಗೊತ್ತಾಗಿದೆ. ಈತನ ವಿರುದ್ಧ ಮತ್ತಷ್ಟು ಮಂದಿ ದೂರು ನೀಡುವ ಸಾಧ್ಯತೆ ಇದ್ದು, ತನಿಖೆ ಮುಂದುವರಿಸಲಾಗಿದೆ’
ಆರೋಪಿ ಮಾತು ನಂಬಿದ್ದ ಹಲವರು ಆತನ ಜೊತೆ ಫೋಟೊ ತೆಗೆಸಿಕೊಂಡಿದ್ದರು. ಮನೆ ಹಾಗೂ ಕಾರ್ಯಕ್ರಮಗಳಿಗೆ ಕರೆದು ಸನ್ಮಾನಿಸಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.