ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣ- ಕ್ರಷರ್ ಮಾಲೀಕ ನಾಗರಾಜು ರೆಡ್ಡಿ ಅರೆಸ್ಟ್
ಚಿಕ್ಕಬಳ್ಳಾಪುರ: ಹಿರೇನಾಗವಲ್ಲಿ ಜಿಲೇಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಷರ್ ಮಾಲೀಕ, ಬಿಜೆಪಿ ಮುಖಂಡ ನಾಗರಾಜು ರೆಡ್ಡಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಫೋಟದ ಬಳಿಕ ನಾಗರಾಜು ರೆಡ್ಡಿ ತಲೆಮರೆಸಿಕೊಂಡಿದ್ದನು. ನಾಗರಾಜು ರೆಡ್ಡಿಗೆ ಸ್ಫೋಟಕಗಳನ್ನ ಪೂರೈಸುತ್ತಿದ್ದ ಗಣೇಶ್ ಎಂಬಾತನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಿನ್ನೆ ಎ2 ಆರೋಪಿ, ಕ್ರಷರ್ ಮಾಲಿಕ ರಾಘವೇಂದ್ರ ರೆಡ್ಡಿಯನ್ನು ಬಂಧಿಸಲಾಗಿತ್ತು. ದುರಂತ ಸಂಬಂಧ ಕರ್ತವ್ಯಲೋಪದ ಆರೋಪದ ಮೇಲೆ ಗುಡಿಬಂಡೆ ಎಸ್ಐ ಗೋಪಾಲ್ ರೆಡ್ಡಿ, ಇನ್ಸ್ಪೆಕ್ಟರ್ ಮಂಜುನಾಥ್ರನ್ನು ಅಮಾನತು ಮಾಡಲಾಗಿದೆ.
ಶಿವಮೊಗ್ಗ ಸ್ಫೋಟದ ಬಳಿಕ ಬ್ಲಾಸ್ಟಿಂಗ್ ನಿಲ್ಲಿಸಿದ್ದ ಕಾರಣ, ಹಿರೇನಾಗವಲ್ಲಿಯಲ್ಲಿ ಸಂಗ್ರಹಿಸಿದ್ದ ಸ್ಫೋಟಕಗಳನ್ನು ಉಮಾಮಹೇಶ್ ನಾಶ ಮಾಡಲು ಮುಂದಾಗಿದ್ದ.
ಆದರೆ ಅದಾಗಲೇ ಸ್ಥಳದಲ್ಲಿ ಕೆಲವರು ಬೆಂಕಿ ಹಾಕಿಕೊಂಡು ಚಳಿ ಕಾಯಿಸ್ತಿದ್ದರು. ಈ ವೇಳೆ ಸ್ಫೋಟಕಗಳನ್ನು ನೀರಿಗೆ ಹಾಕುವ ಬದಲು ಬೆಂಕಿಗೆ ಹಾಕಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಈ ಮಧ್ಯೆ ಹಿರೇನಾಗವಲ್ಲಿ ದುರಂತದಿಂದ ಆತಂಕಗೊಂಡಿರುವ ಬಾಗೆಪಲ್ಲಿಯ ಪುಟ್ಟಪರ್ತಿ ಗ್ರಾಮಸ್ಥರು, ಸ್ಫೋಟಕಗಳ ಗೋದಾಮು ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟಿಸಿದ್ದಾರೆ.