ಅರೆ.. ಮುಂಗಾರು ಆಗಮನಕ್ಕೆ ಮೊದಲೇ ಕಾವಳಕಟ್ಟೆಗೆ ಆಗಮಿಸಿದ ಅಪರೂಪದ ಅತಿಥಿ..!
ಬಂಟ್ವಾಳ: ಮಳೆಗಾಲ ಶುರುವಾದಾಗ ಸಾಮಾನ್ಯವಾಗಿ ಹಾವುಗಳು ಅಲ್ಲಲ್ಲಿ ಮನೆಯೊಳಗೆ ನುಗ್ಗೋದು ಸಾಮಾನ್ಯ ಸಂಗತಿ.
ಆದ್ರೆ ಇಲ್ಲೊಂದು ಅಪರೂಪದ ಬಿಳಿ ಬಣ್ಣದ ಹೆಬ್ಬಾವು ಕಾಣಸಿಕ್ಕಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಹೌದು ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಮನೆಯೊಂದಕ್ಕೆ ಗುರುವಾರ (ಜೂನ್ 4) ಬಿಳಿ ಬಣ್ಣದ ಅಪರೂಪದ ಹೆಬ್ಬಾವೊಂದು ಬಂದಿದೆ.
ಇದನ್ನು ಉರಗತಜ್ಞ ಸ್ನೇಕ್ ಕಿರಣ್ ನೇತೃತ್ವದ ಉರಗಪ್ರೇಮಿಗಳ ತಂಡ ಹಿಡಿದು ವಲಯ ಅರಣ್ಯಾಧಿಕಾರಿಗಳ ನಿರ್ದೇಶನದಂತೆ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಅಪರೂಪದ ಬಿಳಿ ಬಣ್ಣದ ಈ ಹೆಬ್ಬಾವು ಕಾವಳಕಟ್ಟೆ ನಿವಾಸಿ ನೌಶಾದ್ ಎಂಬವರ ಮನೆಯಲ್ಲಿ ಕಂಡು ಬಂದಿದ್ದು, ಈ ವಿಚಾರವನ್ನು ಸ್ನೇಕ್ ಕಿರಣ್ ಅವರ ಗಮನಕ್ಕೆ ತರಲಾಯಿತು.
ಕೂಡಲೇ ಅವರು ಸ್ಥಳಕ್ಕೆ ಭೇಟಿ ನೀಡಿ ಛಾಯಾಗ್ರಾಹಕರಾದ ಪ್ರಸಾದ್ ಹಾಗೂ ನಿತ್ಯಪ್ರಕಾಶ್ ಬಂಟ್ವಾಳ ಅವರ ಸಹಕಾರದಿಂದ ಬಿಳಿ ಹೆಬ್ಬಾವನ್ನು ಯಶಸ್ವಿಯಾಗಿ ಹಿಡಿದಿದ್ದಾರೆ.
ಉರಗ ತಜ್ಞ ಸ್ನೇಕ್ ಕಿರಣ್ ಹೇಳುವ ಪ್ರಕಾರ, ಬಿಳಿ ಬಣ್ಣದ ಇಂತಹ ಹೆಬ್ಬಾವು ಕಾಣ ಸಿಗೋದೇ ಬಹಳ ಅಪರೂಪವಾಗಿದ್ದು, 2ನೇ ಬಾರಿಗೆ ಇಂತಹ ಹೆಬ್ಬಾವನ್ನು ಕಂಡಿದ್ದೇವೆ.
ಇದು ಹುಟ್ಟುವಾಗ ಚರ್ಮದ ವರ್ಣದ್ರವ್ಯದ ಕೊರತೆಯ ಹಿನ್ನಲೆಯಲ್ಲಿ ಹೀಗಾಗುತ್ತವೆ. ಹೀಗಾಗಿ ಅದನ್ನು ಆಲ್ಬಿನೊ ಎನ್ನಲಾಗುತ್ತದೆ.
ಜೊತೆಗೆ ಇಂತಹ ಹಾವನ್ನು ಇತರ ಹಾವುಗಳು ಹೆಚ್ಚು ಸಮಯ ಬದುಕಲು ಬಿಡುವುದಿಲ್ಲ ಎಂದಿದ್ದಾರೆ.