ಇಂದಿನಿಂದ ದರ್ಶನ ನೀಡಲು ಸಜ್ಜಾದ ಕಟೀಲು ಶ್ರೀ ದುರ್ಗೆ… ಇ-ಟಿಕೆಟ್ ಇದ್ದರೆ ಮಾತ್ರ ದರ್ಶನ ಭಾಗ್ಯ…
ಮಂಗಳೂರು: ಇಂದಿನಿಂದ (ಜೂನ್ 14) ಕರಾವಳಿಯ ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭಕ್ತಾದಿಗಳಿಗೆ, ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಲಾಕ್ ಡೌನ್ ಸಡಿಲಿಕೆ ನಂತರ ಮೊದಲ ಬಾರಿಗೆ ಇಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರು ಆಗಮಿಸುತ್ತಿದ್ದಾರೆ.
ಎಲ್ಲಾ ದೇವಾಲಯಗಳು ತೆರೆದಿರುವಾಗ ಜೂನ್ 8 ರಂದು ಕಟೀಲು ದೇಗುಲ ಭಕ್ತರ ಸರತಿ ಸಾಲಿನ ವ್ಯವಸ್ಥೆಯ ಕೊರತೆಯಿಂದ ಭಕ್ತರ ದರ್ಶನಕ್ಕೆ ತೆರೆದಿರಲಿಲ್ಲ.
ಇದೀಗ ಇಂದಿನಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು, ಒಳಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗ್ತಿದೆ.
ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಲು ದೇಗುಲದ ವಠಾರದಲ್ಲಿ ಬಿಳಿ ಬಣ್ಣದ ಬಾಕ್ಸ್ ಹಾಕಲಾಗಿದೆ.
ಬೆಳಿಗ್ಗೆ 6ರಿಂದ 7.30ರವರೆಗೆ ದೇವರ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ. ದೇಗುಲದಲ್ಲಿ ಅನ್ನಪ್ರಸಾದ ಸೇರಿದಂತೆ ಯಾವುದೇ ಸೇವೆಗಳಿಗೆ ಅವಕಾಶ ಇಲ್ಲ.
ಇನ್ನು ದೇವರ ದರ್ಶನಕ್ಕೆ ಇ-ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ದೇವಸ್ಥಾನದ ವೆಬ್ಸೈಟ್ ಮೂಲಕ ಉಚಿತವಾಗಿ ಭಕ್ತರು ಟಿಕೆಟ್ ಪಡೆಯಬಹುದು.
ಸ್ಥಳೀಯ ಭಕ್ತರಿಗೆ ಪಾಸ್ ಇಲ್ಲದೆ ಬೆಳಿಗ್ಗೆ 6 ರಿಂದ 7.30ರವರೆಗೆ ದರ್ಶನ ಭಾಗ್ಯ ಲಭಿಸಲಿದೆ.