ಜೂನ್ 29 ರಂದು ಸರಳ ರೀತಿಯಲ್ಲಿ ಬ್ರಹ್ಮಕಲಶ ಸಮಾರಂಭ.. ನಮ್ಮ ಕುಡ್ಲ ವಾಹಿನಿಯಲ್ಲಿ ನೇರ ಪ್ರಸಾರ…
ಮಂಗಳೂರು: ಬೋಳಾರ ಮಾರಿಯಮ್ಮನ ಬ್ರಹ್ಮಕಲಶ ಪ್ರಸಾದ ಪಾಯಸ ದ್ರವ್ಯದ ಕಿಟ್ ಗಳನ್ನು ಬೋಳಾರ ಪರಿಸರದ 5000 ಭಕ್ತರ ಮನೆಗಳಿಗೆ ವಿತರಿಸಲಾಗುವುದು ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಚ ತಾರಾನಾಥ ಶೆಟ್ಟಿ ಬೋಳಾರ ಅವರು ತಿಳಿಸಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ಅವರ ಮಾರ್ಗದರ್ಶನದಲ್ಲಿ, ಕದ್ರಿ ನವನೀತ ಶೆಟ್ಟಿ ಅವರ ಅಧ್ಯಕ್ಷತೆಯ ಜೀರ್ಣೊದ್ದಾರ ಸಮಿತಿಯು ಈಗಾಗಲೇ ಸುಮಾರು ಒಂದು ಕೋಟಿ ಯ ಕಾಮಗಾರಿ ಕಾರ್ಯಗಳನ್ನು ನಡೆಸಲಾಗಿದೆ.
ನೂರಾರು ಕರಸೇವಕರು ,ಮಾತೆಯರು ಕರಸೇವೆಯಲ್ಲಿ ಪಾಲ್ಗೊಂಡಿದ್ದಾರೆ. ಶಿಲಾಮಯ ಮಾತಂಗಿ ಕಟ್ಟೆ, ಮೈರಾಣಿ ಕಟ್ಟೆ, ರಾಶಿ ಕಟ್ಟೆ ಗಳನ್ನು ಪುನರ್ ನಿರ್ಮಿಸಲಾಗಿದೆ.
ನೆಲ ಹಾಸು, ಮೇಲ್ಛಾವಣಿ, ಹಿತ್ತಾಳೆ ದರಿ, ಪ್ರವೇಶ ಮಂಟಪ ಕಾಮಗಾರಿ ನಡೆಸಲಾಗಿದೆ. ಎಪ್ರೀಲ್ 17 ಕ್ಕೆ ಬ್ರಹ್ಮಕಲಶ ನಡೆಸಲು ಸತೀಶ್ ಬೋಳಾರ, ಪ್ರವೀಣ್ ಶೇಟ್ ಅವರ ಅಧ್ಯಕ್ಷತೆಯ ಸಮಿತಿಯು ಕಾರ್ಯೊನ್ಮುಖವಾಗಿತ್ತು.
ಕೋವಿಡ್ ಮಾರಿಯಿಂದಾಗಿ ನಿಯೋಜಿತ ಅದ್ದೂರಿ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳನ್ನು ರದ್ದುಪಡಿಸಿ ಜೂನ್ 29 ರಂದು ಸರಳ ರೀತಿಯಲ್ಲಿ ಬ್ರಹ್ಮಕಲಶ ನಡೆಸಲಾಗುವುದು.
ಸರಕಾರಿ ನಿಯಮಾವಳಿಯಂತೆ ಕೋವಿಡ್ ಮುನ್ನೆಚ್ಚರಿಕೆಯ ಕ್ರಮದಂತೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಸಲಾಗುವುದಿಲ್ಲ.
ನಿಗದಿತ ಸಂಖ್ಯೆಯ ಭಕ್ತರಿಗೆ, ಸರದಿ ಸಾಲಿನಲ್ಲಿ ದೇವರ ದರ್ಶನಕ್ಕೆ ಸಾಮಾಜಿಕ ಅಂತರ ಕಾಯ್ದುಕೊಂಡು ಅವಕಾಶ ನೀಡಲಾಗುವುದು.
‘ನಮ್ಮ ಕುಡ್ಲ’ ಟಿ.ವಿ. ನೇರ ಪ್ರಸಾರ ಮೂಲಕ ಭಕ್ತಾದಿಗಳು ಮನೆಯಲ್ಲಿ ಕುಳಿತು ದಾರು ಬಿಂಬ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕವನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.
ಬೋಳಾರ, ಹೊಯಿಗೆ ಬಜಾರ್, ಬೆಂಗ್ರೆ, ಜಪ್ಪುಪಟ್ನ ನಾಲ್ಕು ಗ್ರಾಮ ಹಾಗೂ ಪರಿಸರದ ಸುಮಾರು 5000 ಭಕ್ತರ ಮನೆಗೆ ಪ್ರಸಾದ ಪಾಯಸ ದ್ರವ್ಯದ ಪೊಟ್ಟಣವನ್ನು ತಲಪಿಸಲಾಗುವುದು.
ಭಕ್ತರು ತಮ್ಮ ತಮ್ಮ ಮನೆಯಲ್ಲಿ ಈ ದ್ರವ್ಯಗಳನ್ನು ಉಪಯೋಗಿಸಿ ಪಾಯಸ ಮಾಡಿ ಅದನ್ನೇ ಮಾರಿಯಮ್ಮನ ಪ್ರಸಾದ ಎಂದು ಸ್ವೀಕರಿಸಬೇಕು ಎನ್ನುವ ವಿನಂತಿ ಪತ್ರವನ್ನೂ ಜೊತೆಗಿರಿಸಲಾಗುವುದು.
ಹೊರಕಾಣಿಕೆ ಸಮಿತಿಯ ಮುಖ್ಯಸ್ಥ ನಾಗರಾಜ ಆಚಾರ್ಯ ತಂಡದವರು ಪರಿಸರದ ಕಾರ್ಪೊರೇಟರ್ ಗಳ ಹಾಗೂ ಕರಸೇವಕರ ಮೂಲಕ ಕಿಟ್ ವಿತರಣೆ ಮಾಡಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಬೋಳಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.