ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ…
ಮಂಗಳೂರು: ಕಳೆದ 75 ದಿನಗಳಿಂದ ಕೊರೊನಾ ಸೋಂಕಿನ ಹಿನ್ನಲೆ ಲಾಕ್ ಆಗಿದ್ದ ಪರಿಣಾಮ ಬಾಗಿಲು ಮುಚ್ಚಿದ ರಾಜ್ಯದ ದೇವಾಲಯಗಳು ಇಂದಿನಿಂದ ಭಕ್ತರಿಗಾಗಿ ತೆರೆದಿವೆ.
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲೂ ಇಂದು (ಜೂನ್ 8) ದೇವಸ್ಥಾನಗಳು ತೆರೆದಿದ್ದು, ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನವೂ ಓಪನ್ ಆಗಿದ್ದು, ಭಕ್ತರು ದೇವಸ್ಥಾನದತ್ತ ಮುಖ ಮಾಡಿದ್ದಾರೆ.
ಎರಡೂವರೆ ತಿಂಗಳ ಬಳಿಕ ಕದ್ರಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದಾರೆ.
ಇನ್ನು ಶರವು ಗಣಪತಿ ದೇವಸ್ಥಾನ, ಶ್ರೀ ಧರ್ಮಸ್ಥಳ ಮಂಜುನಾಥ ದೇವಾಲಯ, ಮಂಗಳಾದೇವಿ ದೇವಸ್ಥಾನದಲ್ಲಿಯೂ ಬೆಳಗ್ಗೆ 6 ಗಂಟೆಯಿಂದಲೇ ಭಕ್ತರು ಆಗಮಿಸುತ್ತಿದ್ದು, ದೇವರ ದರ್ಶನ ಮಾಡುತ್ತಿದ್ದಾರೆ.
ಸೋಂಕಿನ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ದೇವಾಲಯಗಳಿಗೆ ಆಗಮಿಸುವ ಭಕ್ತರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ, ಸ್ಯಾನಿಟೈಸರ್, ಥರ್ಮಲ್ ಸ್ರೀನಿಂಗ್ ಗಳಿಗೆ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನ ಇಂದಿನಿಂದ ಆರಂಭಕ್ಕೆ ಸರಕಾರ ಸೂಚಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಇಂದಿನಿಂದ ಭಕ್ತರಿಗೆ ಅವಕಾಶ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಕದ್ರಿ ಮಂಜುನಾಥ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು.
ದೇವಾಲಯ ಪ್ರವೇಸಿಸುವ ಮುನ್ನ ನಿಯಮದಂತೆ ತಾಪಮಾನ ತಪಾಸಣೆ ನಡೆಸಿ ಸ್ಯಾನಿಟೈಸರ್ ಬಳಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ ಮತ್ತು ಮತ್ತಿತರರು ಜೊತೆಗಿದ್ದರು.