ಕಟೀಲು, ಸುಬ್ರಹ್ಮಣ್ಯ, ಧರ್ಮಸ್ಥಳದಲ್ಲಿ ದರ್ಶನಕ್ಕೆ ಸಿದ್ಧತೆ.. ಮಾಸ್ಕ್.. ಸಾಮಾಜಿಕ ಅಂತರ ಕಡ್ಡಾಯ
ಮಂಗಳೂರು: ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಕಳೆದ ಹಲವು ದಿನಗಳಿಂದ ಬಂದ್ ಆಗಿದ್ದ ಧಾರ್ಮಿಕ ಕ್ಷೇತ್ರಗಳು ಜೂನ್ 8ರ, ಸೋಮವಾರದಿಂದ ತೆರೆಯಲಿದ್ದು, ಭಕ್ತರಿಗೆ ದೇವರ ದರ್ಶನ ಮಾಡುವ ಅವಕಾಶ ಸಿಗಲಿದೆ.
ಅಂತೆಯೇ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವೂ ಸೋಮವಾರದಿಂದ ತೆರೆಯಲಿದ್ದು, ಅದಕ್ಕಾಗಿ ಪೂರ್ವ ಸಿದ್ದತೆ ಮಾಡಲಾಗುತ್ತಿದೆ.
ದೇವಳದ ಒಳಬಾಗ ಪ್ರವೇಶಿಸುವ ಸಂದರ್ಭ ಸ್ಯಾನಿಟೈಸರ್ ಮತ್ತು ಧರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ.
ದೇವಳದಿಂದ ಒಳ ಪ್ರವೇಶಿಸುವಲ್ಲಿಂದ ದೇವಳದ ಒಳ ಭಾಗದವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಲ್ಲಲ್ಲಿ ಪೇಯಿಂಟ್ ಮೂಲಕ ಬಾಕ್ಸ್ ಹಾಕಲಾಗಿದೆ.
ದೇವಳದ ಒಳಬಾಗದಲ್ಲಿ ಭಕ್ತರಿಗೆ ಸುತ್ತು ಬರುವ ಅವಕಾಶವಿಲ್ಲ ಒಂದು ಬಾಗಿಲಿನಿಂದ ಒಳಪ್ರವೇಶಿಸಿ ಇನ್ನೊಂದು ಬಾಗಿಲು ಮೂಲಕ ಹೊರ ಬರಬೇಕಾಗುತ್ತದೆ.
ಒಬ್ಬ ಭಕ್ತರಿಗೆ ದೇವಳದ ಒಳಗೆ ಸುಮಾರು 5 ರಿಂದ 6 ಸೆಕೆಂಡಿನಷ್ಟು ಸಮಯಾವಕಾಶ ಸಿಗಲಿದೆ. ದೇವಳದಲ್ಲಿ ತೀರ್ಥ ಪ್ರಸಾದ ಮತ್ತು ಅನ್ನಪ್ರಸಾದದ ವ್ಯವಸ್ಥೆ ಇಲ್ಲ.
ಅಲ್ಲದೆ ದೇವರ ದರ್ಶನ ಬಿಟ್ಟು ಯಾವ ಸೇವೆಯನ್ನು ಮಾಡಲಾಗುವುದಿಲ್ಲ. ಬರುವ ಭಕ್ತರು ದೇವಳದ ಸಮೀಪ ತಮ್ಮ ಚಪ್ಪಲಿಯಲ್ಲಿ ಧರಿಸಿಕೊಂಡು ಬರುವಂತಿಲ್ಲ.
ತಮ್ಮ ವಾಹನದ ಬಳಿಯೇ ಚಪ್ಪಲಿಯನ್ನು ಬಿಡಬೇಕಾಗುತ್ತದೆ. ದೇವಳಕ್ಕೆ ಬರುವ ಭಕ್ತರಿಗೆ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಕಡ್ದಾಯವಾಗಿದ್ದು ದೇವಳಕ್ಕೆ ಭೇಟಿ ನೀಡುವ ಪ್ರತೀ ಭಕ್ತರ ಮಾಹಿತಿಯ ದಾಖಲೀಕರಿಸಲಾಗುತ್ತದೆ.
ದೇವಳದ ಒಳ ನೌಕರರು ಮತ್ತು ಭಕ್ತರು ಮಾಸ್ಕ್ ಇದ್ದರೆ ಮಾತ್ರ ದೇವಳಕ್ಕೆ ಪ್ರವೇಶವಿದ್ದು, 18 ವರ್ಷದ ಕೆಳಗಿನವರು, 60 ವರ್ಷದ ಮೇಲ್ಪಟ್ಟವರು, ಮತ್ತು ಗರ್ಭಿಣಿ ಮಹಿಳೆಯರಿಗೆ ದೇವಳದ ಒಳಗೆ ಪ್ರವೇಶವಿಲ್ಲ.
ಆಧಾರ್ ಅಥವಾ ಯಾವುದೇ ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ.
ಬೆಳಿಗ್ಗೆ 5.30 ರಿಂದ ರಾತ್ರಿ 8 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿದ್ದು ಪೂಜಾ ಸಂದರ್ಭ ಯಾವುದೇ ಭಕ್ತರಿಗೆ ಅವಕಾಶವಿಲ್ಲ.
ಇನ್ನು ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ದೇವರ ದರ್ಶನಕ್ಕಾಗಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ.
ಸರಕಾರ ಸೂಚಿಸಿದ ಎಲ್ಲಾ ಮಾರ್ಗಸೂಚಿಗಳನ್ನೂ ಕಟ್ಟುನಿಟ್ಟಾಗಿ ಪಾಲಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹೊರಾಂಗಣದಲ್ಲಿ ಭಕ್ತರು ಸಾಮಾಜಿಲ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತೀ ಒಂದು ಮೀಟರ್ ಅಂತರವನ್ನು ನಿಗದಿ ಮಾಡಲಾಗಿದೆ.
ಪೇಂಟ್ ನಿಂದ ಅಂತರದ ಚೌಕಟ್ಟುಗಳನ್ನೂ ರಚಿಸಲಾಗಿದ್ದು, ದೇವಸ್ಥಾನದ ಒಳಗೆ ಬರುವ ಎಲ್ಲಾ ಭಕ್ತರೂ ಕಡ್ಡಾಯವಾಗಿ,
ತಮ್ಮ ಕೈ-ಕಾಲುಗಳನ್ನು ಶುಚಿಗೊಳಿಸಿದ ಬಳಕ ದೇವಸ್ಥಾನದ ಮುಖ್ಯ ಧ್ವಾರದ ಬಳಿ ಇಡಲಾಗುವ ಸ್ಯಾನಿಟೈಸರ್ ಬಳಸಬೇಕಿದೆ.
ಅಲ್ಲದೆ ಕ್ಷೇತ್ರದ ಒಳಗೆ ಪ್ರವೇಶಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆಯೂ ಸೂಚಿಸಲಾಗಿದೆ.
ಆದಿ ಸುಬ್ರಹ್ಮಣ್ಯದಲ್ಲೂ ಇದೇ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಅಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆಯೂ ನೋಡಿಕೊಳ್ಳಲಾಗುತ್ತದೆ.
ಆದರೆ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ತೀರ್ಥ ಪ್ರಸಾದಗಳನ್ನು ನೀಡುವ ವ್ಯವಸ್ಥೆಯನ್ನು ಕೈ ಬಿಡಲಾಗಿದ್ದು,
ಕೊರೊನಾ ಮರೆಯಾದ ಬಳಿಕ ಕ್ಷೇತ್ರದಲ್ಲಿ ಮತ್ತೆ ಹಿಂದಿನದೇ ವ್ಯವಸ್ಥೆ ಪುನರಾರಂಭಗೊಳ್ಳಲಿದೆ.
ಇದು ಕರಾವಳಿಯ ಮತ್ತೊಂದು ಪ್ರಸಿದ್ಧ ಶ್ರೀಮಂತ ಕ್ಷೇತ್ರ ಧರ್ಮಸ್ಥಳಕ್ಕೂ ಹೊರತಾಗಿಲ್ಲ…
ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ದೇವಸ್ಥಾನದ ದರ್ಶನ ನಿಯಮದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದ್ದು,
ಕೇಂದ್ರ ಸರಕಾರ ಸೂಚಿಸಿದ ಎಲ್ಲಾ ಮಾರ್ಗದರ್ಶಿಗಳನ್ನು ಪಾಲಿಸಲು ದೇವಸ್ಥಾನ ಆಡಳಿತ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ದೇವಸ್ಥಾನಕ್ಕೆ ಪ್ರವೇಶಿಸುವ ಎಲ್ಲಾ ಭಕ್ತರು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಮಾಡಬೇಕೆಂದು ಸೂಚಿಸಲಾಗಿದೆ.
ದೇವಸ್ಥಾನದ ಅನ್ನಛತ್ರದಲ್ಲೂ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡೇ ಅನ್ನ ಸಂತರ್ಪಣೆ ನೆರವೇರಿಸಲೂ ತೀರ್ಮಾನಿಸಲಾಗಿದೆ.