ಜೂ.14ರಿಂದ ಭಕ್ತರಿಗೆ ಪ್ರವೇಶ, ಉತ್ಸವ ಮುಂದಿನ ಉತ್ತರಾಯಣ ಪರ್ವ ಜನನ ಕಾಲದ ಶುಭ ಮುಹೂರ್ತಕ್ಕೆ ಮುಂದೂಡಿಕೆ….
ಸುರತ್ಕಲ್: ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನ ಇದೀಗ ಜೀರ್ಣೋದ್ದಾರಗೊಂಡು ನಳನಳಿಸುತ್ತಿದೆ.
ಸುರತ್ಕಲ್ ಸಮೀಪದ ಗಣೇಶಪುರದಲ್ಲಿರುವ ಈ ದೇವಸ್ಥಾನ ಅಂದಾಜು ಮೂರುವರೆ ಕೋಟಿ ರೂ.ವೆಚ್ಚದಲ್ಲಿ ಜೀರ್ಣೋದ್ದಾರಗೊಂಡಿದೆ.
ಪ್ರವೇಶ ರಾಜಗೋಪುರ, ಮೇಲ್ಛಾವಣಿ, ದೇವಸ್ಥಾನದ ಗರ್ಭಗುಡಿಗೆ ಅಂದದ ಮರದ ಕೆತ್ತನೆಯ ವಿನ್ಯಾಸ, ದೇವಸ್ಥಾನದ ಪ್ರಮುಖ ಭಾಗದಲ್ಲಿ ಹಿತ್ತಾಳೆ ಹೊದಿಕೆ ಹಾಸಲಾಗಿದೆ.
ದೇವಸ್ಥಾನದ ಎದುರು ಭಾಗದ ಗೋಡೆಗಳಲ್ಲಿ ದೇವರ ವಿಗ್ರಹ ಆಕರ್ಷಿಸುತ್ತದೆ.
ಹೊಸ ರೂಪದಲ್ಲಿ ಕ್ಷೇತ್ರವು ಜೀರ್ಣೋದ್ದಾರಗೊಂಡಿದ್ದು, 14ರ ಮಕರ ಸಂಕ್ರಮಣದಿಂದ ಭಕ್ತರಿಗೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.
ಜೀರ್ಣೋದ್ಧಾರಗೊಂಡ ಗರ್ಭಗುಡಿಯೊಳಗೆ ಮಹಾಗಣಪತಿ ದೇವರು ವಿರಾಜಮಾನರಾಗಿದ್ದು, ತಂತ್ರಿ ವೇಣ್ಯರಾದ ಶಿವಪ್ರಸಾದ ತಂತ್ರಿಯವರ ನೇತೃತ್ವದಲ್ಲಿ,
ಧಾರ್ಮಿಕ ವಿಧಿ-ವಿಧಾನಗಳಿಗನುಸಾರವಾಗಿ ಅಷ್ಟಬಂಧ ಸಾನಿಧ್ಯ ಕಲಶಾಭಿಷೇಕವನ್ನು ಸರಳ ರೀತಿಯಲ್ಲಿ ಪ್ರಮುಖರ ಸಮ್ಮುಖ ಮಾಡಲಾಗುತ್ತಿದೆ.
ಜೂ.11ರಿಂದ ಜೂ.14ರ ವರೆಗೆ ವಿವಿಧ ಕಾರ್ಯಕ್ರಮ ಜರಗಲಿದೆ. ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ನಾಗಮಂಡಲ ಹಾಗೂ ಪ್ರಮುಖ ಕಾರ್ಯಕ್ರಮಗಳನ್ನು ಮುಂದಿನ ಉತ್ತರಾಯಣ ಪರ್ವ ಕಾಲದಲ್ಲಿ ಮಾಡಲು ನಿರ್ಧರಿಸಲಾಗಿದೆ.
ಕ್ಷೇತ್ರದ ತಂತ್ರಿಯವರಾದ ದೇರೆಬೈಲ್ ಶಿವಪ್ರಸಾದ್ ತಂತ್ರಿವೇರಣ್ಯರು ಮಾಹಿತಿ ನೀಡಿದರು.
ಕಳೆದ ಒಂದು ವರ್ಷದಿಂದ ಜೀರ್ಣೋದ್ಧಾರ ಕಾರ್ಯ ಆರಂಭವಾಗಿ ಇದೀಗ ಸಂಪೂರ್ಣಗೊಂಡಿದೆ.
ಕಾಷ್ಟ ವೈಭವದಿಂದ ಇದು ಕೂಡಿದ್ದು ಸುಂದರವಾಗಿ ರೂಪುಗೊಳಿಸಲಾಗಿದೆ. ರಾಜಗೋಪುರ, ವಸಂತ ಮಂಟಪ, ನಾಗದೇವರು, ಚಾಮುಂಡಿಯ ಗುಡಿಗಳ ಕೆಲಸವಾಗಿದೆ.
ಇದರ ಸಮರ್ಪಣೆ ಮಾರ್ಚ್ ತಿಂಗಳಲ್ಲಿ ಆಗಬೇಕಿತ್ತು. ಆದರೆ ವಿಶ್ವವ್ಯಾಪಿ ಪಸರಿಸಿರುವ ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಘೋಷಿಸಿದ ಬಳಿಕ ಕಾರ್ಯಕ್ರಮ ಮುಂದೂಡಲಾಯಿತು.
ಅಗತ್ಯ ಧಾರ್ಮಿಕ ವಿಧಿ ವಿಧಾನಗಳು ಮಾಡುತ್ತಿದ್ದೇವೆ ಎಂದರು. ಕ್ಷೇತ್ರದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಅವರು ಮಾತನಾಡಿ ಕೋವಿಡ್ 19 ಸಮಸ್ಯೆಯಿಂದಾಗಿ ವೈಭವ, ಉತ್ಸವ ಮುಂದಿನ ವರ್ಷಕ್ಕೆ ಮುಂದೂಡಿದ್ದೇವೆ.
ಜೀರ್ಣೋದ್ಧಾರ ಕಾರ್ಯ 3.5 ಕೋಟಿ ರೂ ವೆಚ್ಚದಲ್ಲಿ ಪೂರ್ಣಗೊಳಿಸಿದ್ದೇವೆ. ಟೀಕ್ ವುಡ್ ಬಳಸಿ ಗರ್ಭಗುಡಿ, ಹಿತ್ತಾಳೆ ಕವಚ, ವ್ಯವಸ್ಥಿತ ಕಚೇರಿ ಕಟ್ಟಡ ಸಹಿತ ಎಲ್ಲಾ ಕೆಲಸ ಮಾಡಿ ಮುಗಿಸಿದ ಸಂತೃಪ್ತಿ ನಮಗಿದೆ ಎಂದರು.
ಇದು ಎಲ್ಲಾ ಭಕ್ತರ, ದಾನಿಗಳ ಸಹಕಾರದಿಂದ ಸಾಧ್ಯವಾಗಿದೆ. ಇದೀಗ ದೇವಸ್ಥಾನ ಜೂ.14ರ ಮಕರ ಸಂಕ್ರಮಣದಿಂದ ಭಕ್ತರ ಪ್ರವೇಶಕ್ಕೆ ಅವಕಾಶವಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದರು. ಭಕ್ತರು ಸಹಕರಿಸಿ ದೇವರ ದರ್ಶನ ಪಡೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯ ನಿರಂಜನ್ ಕೃಷ್ಣಾಪುರ, ಚೇಳಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಮಧ್ಯ ಉಪಸ್ಥಿತರಿದ್ದರು.