ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮನೆಗೆ ಹಾಲಿ ಶಾಸಕ ರಘುಪತಿ ಭಟ್ ಭೇಟಿ ನೀಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಘಟನೆ ನಡೆದಿದೆ.
ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಹಡಿಲುಬಿದ್ದ ಕೃಷಿಭೂಮಿಗೆ ಕಾಯಕಲ್ಪ ನೀಡುವ ಕೆಲಸ ನಡೆಯುತ್ತಿದೆ. ಹಡಿಲು ಭೂಮಿಯಲ್ಲಿ ಬೆಳೆ ಬೆಳೆಸುವ ಕೇದಾರೋತ್ಥಾನ ಅಭಿಯಾನದ ಹೆಸರಲ್ಲಿ ಸುಮಾರು 2000 ಎಕರೆಗಳಷ್ಟು ಹೆಚ್ಚಿನ ಭತ್ತದ ಕೃಷಿ ನಡೆಯುತ್ತಿದೆ.
ಲಾಕ್ಡೌನ್ ಕಾಲಘಟ್ಟದಲ್ಲಿ ಶಾಸಕರು ಪಾಳುಬಿದ್ದ ಗದ್ದೆಗಳನ್ನು ಮರುಜೀವ ಗಳಿಸುವುದರಲ್ಲಿ ನಿರತರಾಗಿದ್ದು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದರೂ ವಿರೋಧಪಕ್ಷಗಳು ಪರೋಕ್ಷ ಟೀಕೆಗೂ ಗುರಿಯಾಗಿತ್ತು. ಕೆಲ ದಿನಗಳ ಹಿಂದೆ ಮಾಜಿ ಸಚಿವ ಕಾಂಗ್ರೆಸ್ನ ಪ್ರಮೋದ್ ಮಧ್ವರಾಜ್ ಇತರ ಹಡಿಲು ಬಿದ್ದ ಅಭಿವೃದ್ಧಿ ಕಾರ್ಯಗಳ ಕಡೆ ಗಮನಹರಿಸುವಂತೆ ಶಾಸಕರನ್ನು ಕುಟುಕಿದ್ದರು.
ಈ ವಿಚಾರ ಇಬ್ಬರನ್ನೂ ಇದೀಗ ಒಂದು ಮಾಡಿದೆ. ಪ್ರಮೋದ್ ಮಧ್ವರಾಜ್ ಅರಮನೆಯ ಗೋಶಾಲೆಯಲ್ಲಿ ಬಾಲ್ಯದಲ್ಲಿ ಕ್ಲಾಸ್ ಮೇಟ್ಸ್ ಜೊತೆ ಕಾಲಕಳೆದರು.ರಾಜಕೀಯದಲ್ಲಿ ಸದಾಕಾಲ ಟೀಕಿಸುತ್ತಲೇ ಇರುವ ಇಬ್ಬರ ಗೆಳೆತನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಚುನಾವಣೆಗೋಸ್ಕರ ಜಾತಿ ಧರ್ಮದ ಹೆಸರಿನಲ್ಲಿ ನಮ್ಮನ್ನು ವಿಭಜಿಸಿ ನೀವು ಜೊತೆಯಾಗಿ ಕಾಲ ಕಳೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬರುತ್ತಾರೆ ಎಂದು ಸುದ್ದಿಯಾಗಿತ್ತು.