ಖಾಸಗಿ ಬಸ್ಸು ನೌಕರರಿಗೆ ನ್ಯಾಯಯುತ ಪರಿಹಾರ ಒದಗಿಸಲು ಉಸ್ತುವಾರಿ ಸಚಿವರಿಗೆ ಮುನೀರ್ ಕಾಟಿಪಳ್ಳ ಮನವಿ…
ಮಂಗಳೂರು: ಲಾಕ್ ಡೌನ್ ಸಮಯದಿಂದ ಸಂಕಷ್ಟಕ್ಕೆ ಒಳಗಾದ ಖಾಸಗಿ ಬಸ್ ಗಳ ನಿರ್ವಾಹಕರು ಹಾಗೂ ಕ್ಲೀನರ್ ಗಳಿಗೆ ವೇತನ ನೀಡಿ ಕಷ್ಟಕ್ಕೆ ಸಾಥ್ ನೀಡಬೇಕು ಎಂದು,
ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ, ಡಿ.ವೈ.ಎಫ್.ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಖಾಸಗಿ ಬಸ್ ಕೆಲಸಗಾರರ ಪರವಾಗಿ ಮನವಿ ಸಲ್ಲಿಸಿದರು.
ಲಾಕ್ ಡೌನ್ ಆರಂಭಗೊಂಡ ನಂತರದಿಂದ ಸುಮಾರು 70 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಬಸ್ಸುಗಳ ಸಂಚಾರ ಪೂರ್ಣವಾಗಿ ಸ್ಥಗಿತಗೊಂಡಿತ್ತು.
ಇದರಿಂದ ಒಂದು ಸಾವಿರದಷ್ಟಿರುವ ಖಾಸಗಿ ಬಸ್ಸುಗಳ, ಸುಮಾರು ಏಳೆಂಟು ಸಾವಿರ ಚಾಲಕ, ನಿರ್ವಾಹಕ ಹಾಗೂ ಕ್ಲೀನರ್ ಗಳು ಉದ್ಯೋಗ ಇಲ್ಲದೆ ಮನೆಗಳಲ್ಲಿ ಉಳಿಯುವಂತಾಯಿತು.
ಮಾಲಕರ ಸಂಘಗಳಾಗಲಿ, ಸರಕಾರವಾಗಲಿ ಯಾವುದೇ ನೆರವು ನೀಡದಿರುವುದರಿಂದ ಕುಟುಂಬದ ದೈನಂದಿನ ಖರ್ಚುವೆಚ್ಚಗಳನ್ನೂ ಭರಿಸಲಾಗದೆ ಬಸ್ ನೌಕರರು ಸಂಕಷ್ಟಕ್ಕೊಳಗಾಗಿದ್ದಾರೆ.
ಲಾಕ್ ಡೌನ್ ಸಂದರ್ಭ ಕಾರ್ಮಿಕರಿಗೆ, ನೌಕರರಿಗೆ ಪೂರ್ಣ ವೇತನ ನೀಡಬೇಕು ಎಂದು ಸರಕಾರದ ಆದೇಶ ಇದ್ದರೂ ಬಸ್ಸು ಸಿಬ್ಬಂದಿಗಳಿಗೆ ವೇತನವನ್ನು ಪೂರ್ಣವಾಗಿ ನಿರಾಕರಿಸಲಾಗಿದೆ.
ಇದರಿಂದ ಬಸ್ಸು ಕಾರ್ಮಿಕರ ಕಟುಂಬಗಳು ದಯನೀಯ ಸ್ಥಿತಿಗೆ ತಲುಪಿದೆ. ಸರಕಾರದ ವತಿಯಿಂದಲೂ ಯಾವುದೇ ಪರಿಹಾರಗಳು ಸಿಕ್ಕಿಲ್ಲ.
ಲಾಕ್ ಡೌನ್ ಅವಧಿಯ ತಾತ್ಕಾಲಿಕ ಪರಿಹಾರವಾಗಿ ಬಸ್ಸು ಮಾಲಕರ ಸಂಘಗಳು ತಿಂಗಳಿಗೆ ಐದು ಸಾವಿರ ರೂಪಾಯಿಯಂತೆ ತಲಾ ಹತ್ತು ಸಾವಿರ ರೂಪಾಯಿ ತಕ್ಷಣ ಒದಗಿಸಬೇಕಿದೆ.
ಹಾಗೆಯೆ ಜೂನ್ ಒಂದರಿಂದ ಖಾಸಗಿ ಬಸ್ ಸಂಚಾರ ಆರಂಭಗೊಂಡಿದೆ. ಬಸ್ ಮಾಲಕರ ಸಂಘ ಶೇಕಡಾ ಇಪ್ಪತ್ತರಷ್ಟು ಬಸ್ಸುಗಳನ್ನಷ್ಟೇ ರಸ್ತೆಗಿಳಿಸಿವೆ.
ಕರ್ತವ್ಯಕ್ಕೆ ತೆರಳಿರುವ ನೌಕರರಿಗೆ ಅರ್ಧ ವೇತನ ಮಾತ್ರ ದೊರೆಯುತ್ತಿದೆ. ಉಳಿದವರು ಯಾವುದೇ ವೇತನ ಇಲ್ಲದೆ ಅಸಹಾಯಕರಾಗಿದ್ದಾರೆ.
ಹಾಗಿರುವಾಗ ಉಳಿದ ಬಸ್ ನೌಕರರಿಗೆ ಉದ್ಯೋಗ, ವೇತನದ ಸ್ಥಿತಿಯ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ರಸ್ತೆಗೆ ಇಳಿಯದ ಬಸ್ ಗಳ ನೌಕರರಿಗೆ ವೇತನದ ಅರ್ಧ ಭಾಗ,
ಉದ್ಯೋಗಕ್ಕೆ ತೆರಳುವ ನೌಕರರಿಗೆ ವೇತನದಲ್ಲಿ ಯಾವುದೇ ಕಡಿತ ಆಗದಂತೆ ಕ್ರಮ ಕೈಗೊಳ್ಳಬೇಕಿದೆ.
ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ದಿನ ನಿತ್ಯ ನೂರಾರು ಜನರ ಸಂಪರ್ಕಕ್ಕೆ ಬರುವ ಬಸ್ಸು ಸಿಬ್ಬಂದಿಗಳು ಸೋಂಕಿಗೆ ಒಳಗಾಗುವ ಸಾಧ್ಯತೆ ದಟ್ಟವಾಗಿದೆ.
ಮುನ್ನೆಚ್ಚರಿಕೆಯ ಭಾಗವಾಗಿ ಪ್ರತಿಯೊಂದು ಬಸ್ಸು ತಂಗುದಾಣಗಳಲ್ಲಿ ಸ್ಯಾನಿಟೈಜ್ ವ್ಯವಸ್ಥೆ ಕಡ್ಡಾಯವಾಗಿ ಇರುವಂತೆ ಕ್ರಮ ಕೈಗೊಳ್ಳಬೇಕಿದೆ.
ಸೇವಾ ಕ್ಷೇತ್ರದಲ್ಲಿ ಪ್ರಸಕ್ತ ಸಂದರ್ಭ ಅತಿ ಅಪಾಯಕಾರಿಯಾಗಿ ದುಡಿಯುವ ಬಸ್ಸು ನೌಕರರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ,
ಸೋಂಕು ಪೀಡಿತರಾದರೆ ಅವರಿಗೆ ಕೊರೊನಾ ವಾರಿಯರ್ಸ್ ಗೆ ದೊರಕುವ ಎಲ್ಲಾ ಸೌಲಭ್ಯ, ಪರಿಹಾರ ದೊರಕುವಂತೆ ಕ್ರಮ ವಹಿಸಬೇಕು ಎಂದು ವಿನಂತಿಸುತ್ತಿದ್ದೇವೆ.
ಹಾಗೆಯೆ ಆಟೋ, ಟ್ಯಾಕ್ಸಿ ಚಾಲಕರಿಗೆ ಒದಗಿಸಿದಂತೆ ಬಸ್ಸು ನೌಕರರಿಗೂ ರಾಜ್ಯ ಸರಕಾರ ಪರಿಹಾರ ಧನ ಒದಗಿಸಬೇಕಿದೆ.
ಖಾಸಗಿ ಬಸ್ಸು ಓಡಾಟಕ್ಕೆ ಸಂಬಂಧಿಸಿ ಜಿಲ್ಲಾಡಳಿತ ಸತತ ಸಭೆಗಳನ್ನು ಮಾಲಕರ ಸಂಘದ ಜೊತೆಗೆ ನಡೆಸುತ್ತಿದೆ.
ಆದರೆ ಬಸ್ಸುಗಳನ್ನು ಬೀದಿಯಲ್ಲಿ ಮುನ್ನಡೆಸಬೇಕಾದ ನೌಕರರ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸದಿರುವುದು ಖೇದಕರ.
ಮುಂದಿನ ದಿನಗಳಲ್ಲಿ ನೌಕರರ ಸಂಘದ ಪ್ರತಿನಿಧಿಗಳನ್ನೂ ಸಭೆಗೆ ಆಹ್ವಾನಿಸಬೇಕು ಎಂದು ಒತ್ತಾಯಿಸುತ್ತೇವೆ.
ಮುಂಗಳೂರು ಪೂರ್ವ ವಲಯದಲ್ಲಿ ನೂರಾ ಇಪ್ಪತ್ತೈದು ಬಸ್ಸುಗಳಿದ್ದು, ಸುಮಾರು ಐನೂರಕ್ಕೂ ಹೆಚ್ಚು ಬಸ್ಸು ನೌಕರರರಿದ್ದಾರೆ.
ನಾವು ಸಭೆ ನಡೆಸಿ, ಲಭ್ಯ ಇರುವ ನೌಕರರ ಸಹಿಗಳನ್ನು ಸಂಗ್ರಹಿಸಿ ಡಿ.ವೈ.ಎಫ್.ಐ ಸಂಘಟನೆಯ ಮೂಲಕ ಈ ಮನವಿ ಪತ್ರವನ್ನು ತಮಗೆ ನೀಡುತ್ತಿದ್ದು,
ನಮ್ಮ ನ್ಯಾಯಯುತ ಬೇಡಿಕೆಗಳನ್ನು ಆದ್ಯತೆಯಲ್ಲಿ ಈಡೇರಿಸಬೇಕು, ಈ ಕುರಿತು ವಿಶೇಷ ಸಭೆ ಕರೆಯಬೇಕು ಎಂದು ಡಿ.ವೈ.ಎಫ್.ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.