ಜುಲೈ 1 ರಿಂದ ಶಾಲೆ ಅನುಮಾನ: ಪೋಷಕರೊಂದಿಗೆ ಚರ್ಚಿಸಿದ ನಂತರ ನಿರ್ಧಾರವೆಂದ ಸಚಿವ ಸುರೇಶ್..!
ಬಾಗಲಕೋಟೆ: ಜುಲೈ 1ಕ್ಕೆ ಶಾಲೆ ಆರಂಭ ಎನ್ನುವುದು ಸರ್ಕಾರದ ನಿರ್ಧಾರಿತ ದಿನಾಂಕ ಅಲ್ಲ. ಪಾಲಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕವೇ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಶಾಲೆಗಳ ಆರಂಭಕ್ಕೆ ಮುನ್ನ ಪಾಲಕರ ಅಭಿಪ್ರಾಯ ಕ್ರೋಢೀಕರಣಕ್ಕೆ ನಿರ್ಧರಿಸಲಾಗಿದೆ.
ಮೊದಲು ಪಾಲಕರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸುತ್ತೇವೆ. ಈ ಸಂಬಂಧ ಮೇ 31ರಂದು ಕೇಂದ್ರದಿಂದ ಪತ್ರ ಬಂದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಜೂನ್ 10, 11, 12ರಂದು ಪಾಲಕರ ಸಭೆ ನಡೆಸಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಜುಲೈ 1ಕ್ಕೆ ಶಾಲೆ ಆರಂಭ ಎನ್ನುವುದು ಸರ್ಕಾರ ನಿರ್ಧರಿಸಿದ್ದಲ್ಲ. ಶಿಕ್ಷಣ ಇಲಾಖೆ ಯೋಚಿಸಿರುವ ದಿನಾಂಕ ಅಷ್ಟೆ.
ರಾಜ್ಯಗಳಲ್ಲಿ ಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೋಷಕರ ಜತೆ ಸಂವಾದ ನಡೆಸಬೇಕು.
ಜೂನ್ 15ರೊಳಗಾಗಿ ಪಾಲಕರು, ಪೋಷಕರು, ಎಸ್ಡಿಎಂಸಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಶಾಲೆ ಆರಂಭಿಸಿದರೆ ಹೇಗೆ ಮಾಡಬೇಕು, ಮುಂದಿನ ತರಗತಿಗಳು, ಮಕ್ಕಳ ಆಟ, ವ್ಯಾಯಾಮ ಹೇಗೆ?..
ಇವುಗಳ ಕುರಿತು ಪಾಲಕರ ಅಭಿಪ್ರಾಯ ಪಡೆಯಲಾಗುವುದು. ಫ್ರೀ ಪ್ರೈಮರಿ ಆರಂಭ ಬೇಡ ಎನ್ನುವ ಅಭಿಪ್ರಾಯ ಇದೆ.
ಕೇಂದ್ರದಿಂದ ಸಲಹೆ ಬಂದ ಬಳಿಕ ಶಾಲೆ ಯಾವಾಗ ಆರಂಭಿಸಬೇಕು ಎಂಬುದರ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
ಇನ್ನು ಎಸ್ಎಸ್ಎಲ್ ಸಿ ಪರೀಕ್ಷೆಯ ವೇಳೆ ಮಕ್ಕಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳನ್ನೆ ಶಾಲೆಗಳು ಪುನರಾರಂಭ ಆದಗಲೂ ಮುಂದುವರೆಸಲಾಗುವುದು ಎಂದರು.
ಈ ಬಾರಿ ಶಾಲೆಗಳು ವಿಳಂಬವಾಗಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಿಗುವ ಶೈಕ್ಷಣಿಕ ದಿನಗಳಿಗೆ ಅನುಗುಣವಾಗಿ ಪಠ್ಯಕ್ರಮ ಕಡಿತಗೊಳಿಸಲು ಚಿಂತಿಸಲಾಗಿದೆ.
ಆ ಬಗ್ಗೆ ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ನಿರ್ದೇಶನಾಲಯದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.