Connect with us

LATEST NEWS

ವಿವಾಹಿತ ಮಹಿಳೆಯನ್ನು ಕೋಣೆಯಲ್ಲಿ ಕೂಡಿ ಹಾಕಿ 3 ತಿಂಗಳು ಗಂಡನಿಂದಲೇ ದಿಗ್ಭಂಧನ..!

Published

on

ಪುತ್ತೂರು: ವಿವಾಹಿತ ಮಹಿಳೆಯೋರ್ವರನ್ನು ಮೂರು ತಿಂಗಳುಗಳಿಂದ ಕೋಣೆಯಲ್ಲಿ ಕೂಡಿ ಹಾಕಿ ದಿಗ್ಭಂಧನದಲ್ಲಿ ಇರಿಸಿ ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆಯೊಂದು ಸುಶಿಕ್ಷಿತರ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಮಹಿಳೆಯನ್ನು ದಿಗ್ಭಂಧನ ಮುಕ್ತಗೊಳಿಸಿ ಚಿಕಿತ್ಸೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಇಡಬೆಟ್ಟು ಸಮೀಪದ ಕರೆಜ್ಜ ನಿವಾಸಿ ಆಶಾಲತಾ ಅವರು ದಿಗ್ಭಂಧನದಲ್ಲಿದ್ದ ಮಹಿಳೆ. ಶ್ರೀಪತಿ ಹೆಬ್ಬಾರ್ ಎಂಬವರ ಪತ್ನಿ ಆಶಾಲತಾ ಅವರನ್ನು ಮನೆಯ ಪಕ್ಕದ ಸಿಮೆಂಟ್ ಶೀಟ್ ಅಳವಡಿಸಿದ ಕಿಟಕಿ, ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲದ ಕೋಣೆಯಲ್ಲಿ ಕಳೆದ ಮೂರು ತಿಂಗಳುಗಳಿಂದ ದಿಗ್ಬಂಧನದಲ್ಲಿ ಇರಿಸಲಾಗಿದೆ ಎಂದು ಬಂದ ಅನಾಮಧೇಯ ಕರೆಯ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮಹಿಳೆ ಎದ್ದು ನಡೆಯಲಾರದ ಮತ್ತು ಸರಿಯಾಗಿ ಮಾತನಾಡಲಾಗದ ಸ್ಥಿತಿಯಲ್ಲಿದ್ದರು. ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದಾಗ ನಿರಾಕರಿಸಿದ್ದರು. ಬಳಿಕ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಆಕೆಯನ್ನು ದಿಗ್ಬಂಧನದಿಂದ ರಕ್ಷಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಧಿಕಾರಿಗಳು ಶ್ರೀಪತಿ ಹೆಬ್ಬಾರ್ ಅವರ ಮನೆಯಲ್ಲಿದ್ದ ಅವರ ಸಹೋದರಿಯನ್ನು ವಿಚಾರಿಸಿದಾಗ ಆಶಾಲತಾ ಅವರು ಪ್ರೇತ ಮೈಮೇಲೆ ಬಂದಂತೆ ವರ್ತಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಆಕೆಯನ್ನು ದಿಗ್ಭಂಧನದಲ್ಲಿ ಇರಿಸಿರುವುದಾಗಿ ತಿಳಿಸಿದ್ದರು. ಅಧಿಕಾರಿಗಳು ಶ್ರೀಪತಿ ಹೆಬ್ಬಾರ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದರೂ, ಅವರು ಕರೆ ಸ್ವೀಕರಿಸಿಲ್ಲ ಎಂಬ ಮಾಹಿತಿ ಲಭಿಸಿದೆ. ದಿಗ್ಭಂಧನದಲ್ಲಿದ್ದ ಮಹಿಳೆಯ ಗಂಡ ಮತ್ತು ಆತನ ಸಹೋದರಿ ಇದೇ ಮನೆಯಲ್ಲಿ ವಾಸವಾಗಿದ್ದು, ಮಹಿಳೆಯನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡಿ ಹಾಕಿ ದಿಗ್ಬಂಧನಕ್ಕೆ ಒಳಪಡಿಸಿರುವುದಕ್ಕೆ ನೈಜ ಕಾರಣ ಏನು ಎನ್ನುವುದು ಇನ್ನಷ್ಟೇ ತಿಳಿದು ಬರ ಬೇಕಾಗಿದೆ.

ಕೂಲಂಕುಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಡುಗೆ ವೃತ್ತಿ ಮಾಡುತ್ತಿರುವ ಶ್ರೀಪತಿ ಹೆಬ್ಬಾರ್ ಅವರು ಬಂಟ್ವಾಳ ತಾಲೂಕಿನ ವಿಟ್ಲ ಭಾಗದ ವಿಶ್ವಕರ್ಮ ಸಮಾಜದ ಆಶಾಲತಾ ಎಂಬವರನ್ನು ಅಂತರ್ಜಾತಿ ವಿವಾಹವಾಗಿದ್ದರು. ಅವರಿಗೆ ಈಗ 9 ವರ್ಷ ಪ್ರಾಯದ ಪುತ್ರಿ ಇದ್ದಾಳೆ. ಆಶಾಲತಾ ಅವರ ಮೈಮೇಲೆ ಪ್ರೇತ ಬರುತ್ತದೆ ಎಂಬ ಕಾರಣದ ಹಿನ್ನಲೆಯಲ್ಲಿ ಆಕೆಯನ್ನು ಮನೆಯ ಪಕ್ಕದ ಗೂಡಿನಂತಿರುವ ಕೊಠಡಿಯಲ್ಲಿ ಕೂಡಿ ಹಾಕಿ ದಿನವೊಂದಕ್ಕೆ ಒಂದು ಬಾರಿ ಮಾತ್ರ ಹಾಲು ಬಳಸದ ಚಹಾ ಮತ್ತು ಬಿಸ್ಕೇಟ್ ಮಾತ್ರ ನೀಡಲಾಗುತ್ತಿತ್ತು. ಕಳೆದ ಮೂರು ತಿಂಗಳಿನಿಂದ ಈ ರೀತಿ ದಿಗ್ಭಂಧನದಲ್ಲಿರಿಸಿ ಚಿತ್ರಹಿಂಸೆ ನೀಡಲಾಗುತ್ತಿತ್ತು, ಸುದೀರ್ಘ ಕಾಲದಿಂದ ಸ್ನಾನ ಮಾಡದಿರುವುದರಿಂದ ಸ್ವಚ್ಚತೆಯ ಸಮಸ್ಯೆಯೂ ಎದುರಾಗಿತ್ತು ಮಾತ್ರವಲ್ಲದೆ ತೀರಾ ಅಶಕ್ತರಾಗಿದ್ದರು ಎಂಬ ಮಾಹಿತಿ ಅಧಿಕಾರಿಗಳಿಗೆ ವಿಚಾರಣೆಯ ವೇಳೆ ಲಭಿಸಿದೆ. ಆಶಾಲತಾ ಅವರ 9 ವರ್ಷದ ಪುತ್ರಿಯನ್ನು ಶಾಲೆಗೆ ಕಳುಹಿಸುತ್ತಿದ್ದು, ಆಕೆಯನ್ನು ಶ್ರೀಪತಿ ಹೆಬ್ಬಾರ್ ಮತ್ತು ಅವರ ಸಹೋದರಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂಬ ಅಂಶವೂ ವಿಚಾರಣೆಯ ವೇಳೆ ಅಧಿಕಾರಿಗಳ ಗಮನಕ್ಕೆ ಬಂದಿದೆ.

Click to comment

Leave a Reply

Your email address will not be published. Required fields are marked *

BELTHANGADY

ಪಂಚಭೂತಗಳಲ್ಲಿ ಲೀನವಾದ ಜನ ಮೆಚ್ಚಿದ ನಾಯಕ…!

Published

on

ಮಂಗಳೂರು : ಮೇಲ್ನೋಟಕ್ಕೆ ಕೋಪಿಷ್ಟನಂತೆ ಕಂಡರೂ ಒಳಗಡೆ ಮಗುವಿನಂತಹ ಮನಸ್ಸು…ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾದ್ರೆ ಬಡವರ ಪಾಲಿಗೆ ಇವರು ಬಂಗಾರದ ವ್ಯಕ್ತಿ. ಇದ್ದಿದ್ದು ಇದ್ದ ಹಾಗೆ ಖಡಕ್ ಆಗಿ ಮಾತನಾಡೋ ಕಾರಣ ಸಾಕಷ್ಟು ಜನರ ವಿರೋಧಿಯಾದ್ರೂ, ಒಳಗೊಳಗೆ ಅವರಿಂದಲೇ ಪ್ರೀತಿಯನ್ನು ಕೂಡಾ ಪಡಿತಾ ಇದ್ದ ಜನಪ್ರೀಯ ಜನನಾಯಕ. ಜನರನ್ನು ತನ್ನವರೆಂದೇ ಒಬ್ಬ ಜನಪ್ರತಿನಿಧಿಯಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸ್ತಾ ಇದ್ದ ವಸಂತ ಬಂಗೇರ ಇನ್ನು ನೆನಪು ಮಾತ್ರ…

ಸದಾ ತನ್ನ ಮಾತಿನ ಮೂಲಕವೇ ಸುದ್ದಿಯಾಗುತ್ತಿದ್ದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಶಾಶ್ವತವಾಗಿ ಮಾತು ಮುಗಿಸಿ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ತನ್ನ ಕ್ಷೇತ್ರದ ಜನರ ಸೇವೆಗಾಗಿ ತನ್ನ ಜೀವನ ಮುಡಿಪಾಗಿಟ್ಟ ವಸಂತ ಬಂಗೇರ ನಿಜವಾಗಿಯೂ ಒಬ್ಬ ಜನನಾಯಕರಾಗಿದ್ದರು. ತನ್ನ ಬಳಿ ಕಷ್ಟ ಹೇಳಿಕೊಂಡು ಯಾರೇ ಬಂದ್ರೂ ಹಿಂದೂ ಮುಂದು ನೋಡದೆ ಸಹಾಯ ಮಾಡ್ತಾ ಇದ್ರು. ತನ್ನ ಕೈ ಖಾಲಿ ಮಾಡಿ ಮತ್ತೊಬ್ಬರಿಗೆ ಕೈ ಎತ್ತಿ ದಾನ ಮಾಡ್ತಾ ಇದ್ದ ವಸಂತ ಬಂಗೇರ ಇದೇ ಕಾರಣಕ್ಕೆ ಜನಾನುರಾಗಿಯಾಗಿದ್ದರು.


ಇದೀಗ ಅವರಿಲ್ಲಾ ಅನ್ನೋ ಸುದ್ದಿ ಅವರ ಅಭಿಮಾನಿಗಳನ್ನ ಕಣ್ಣೀರಿನ ಕಡಲಿನಲ್ಲಿ ಮುಳುಗಿಸಿದೆ. ಅವರ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುತ್ತಿದ್ದಂತೆ ಅವರ ಮನೆಗೆ ಅಭಿಮಾನಿಗಳ ದಂಡೇ ಹರಿದು ಬಂದಿದೆ. ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದ ತಾಲೂಕು ಕ್ರೀಡಾಂಗಣಕ್ಕೂ ಸಾವಿರಾರು ಅಭಿಮಾನಿಗಳು ಆಗಮಿಸಿ ಅವರಿಗೆ ಅಂತಿನ ನಮನ ಸಲ್ಲಿಸಿದ್ದಾರೆ. ನೇರವಾಗಿ ನಿಷ್ಠೂರವಾಗಿ ತಪ್ಪುಗಳನ್ನು ಖಂಡಿಸುತ್ತಿದ್ದ ತಮ್ಮ ಪರ ಧ್ವನಿಯಾಗಿದ್ದ ನಾಯಕ ಇನ್ನಿಲ್ಲ ಅನ್ನೋದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾದ್ಯವಾಗಿಲ್ಲ. ಬಡವರಿಗೆ ಅನ್ಯಾಯ ಆಗ್ತಾ ಇದೆ ಅಂತ ಗೊತ್ತಾದ್ರೆ ಮುಲಾಜಿಲ್ಲದೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ತಾ ಇದ್ದ ವಸಂತ ಬಂಗೇರ ಅವರ ಆ ಸ್ಟೈಲ್‌ ಯಾವತ್ತೂ ಮರೆಯಲು ಸಾದ್ಯವಿಲ್ಲ.


ರಾಜ್ಯ ರಾಜಕಾರಣದಲ್ಲಿ ಸರಿಸುಮಾರು 40 ವರ್ಷಗಳ ಕಾಲ ಚಾಲ್ತಿಯಲ್ಲಿದ್ದ ಹೆಸರು ವಸಂತ ಬಂಗೇರ. ಬೆಳ್ತಂಗಡಿ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಶಾಸಕರಾಗಿದ್ದ ವಸಂತ ಬಂಗೇರ ಕೊನೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಭದ್ರವಾಗಿ ನೆಲೆಯೂರಿದ್ದರು. ಬಿಜೆಪಿಯಿಂದ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ವಸಂತ ಬಂಗೇರ ಬಳಿಕ ನಡೆದ ರಾಜಕೀಯ ದ್ರುವೀಕರಣದಲ್ಲಿ ಜೆಡಿಎಸ್‌ ಮತ್ತು ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಜಾತ್ಯಾತೀತ ನಾಯಕನಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಒಡನಾಡಿಯಾಗಿ ರಾಜ್ಯದ ಅಪಾರ ರಾಜಕೀಯ ನಾಯಕರು ಮೆಚ್ಚಿಕೊಂಡಿದ್ದ ವ್ಯಕ್ತಿ ಇವರು. ವಿಪರ್ಯಾಸ ಅಂದ್ರೆ ರಾಜಕೀಯದ ಉತ್ತುಂಗಕ್ಕೆ ಏರಿದ್ರೂ ಸಚಿವರಾಗುವ ಅವಕಾಶ ವಸಂತ ಬಂಗೇರ ಅವರಿಗೆ ಸಿಗಲೇ ಇಲ್ಲ ಅನ್ನೋದು. 2013 ರಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ಬಂದಿದ್ರೂ ವಸಂತ ಬಂಗೇರ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದ್ರೆ ಯಾವೊಬ್ಬ ಸಚಿವನಿಗೂ ಸಾದ್ಯವಾಗದ ಕೆಲಸವನ್ನು ಸಿಎಂ ಆಗಿದ್ದ ಸಿದ್ಧರಾಮಯ್ಯ ಮೂಲಕ ಮಾಡಿಸೋ ತಾಕತ್ತು ಇದ್ದಿದ್ದು ವಸಂತ ಬಂಗೇರ ಅವರಿಗೆ ಮಾತ್ರ ಅನ್ನೋದನ್ನ ಮರೆಯುವ ಹಾಗಿಲ್ಲ.


ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳದೆ ಇದ್ದಿದ್ದು ಇದ್ದಹಾಗೇ ಹೇಳೋ … ಬಡವರು ಅಂದ್ರೆ ನನ್ನವರು ಎಂದು ಪ್ರೀತಿ ಮಾಡೋ ಜನ ನಾಯಕ ಇಂದು ಎಲ್ಲರ ಪ್ರೀತಿಗೆ ವಿದಾಯ ಹೇಳಿ ಮೌನವಾಗಿದ್ದಾರೆ. ” ನನ್ನನ್ನು ಆರಿಸಿದವರು ನೀವು .. ನೀವು ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ಮೋಸ ಮಾಡಿಲ್ಲ. ಹಣ ಮಾಡದೆ ಸ್ವಚ್ಚವಾಗಿ ಜನ ಸೇವೆ ಮಾಡಿದ ತೃಪ್ತಿ ಇದೆ” ಅಂತಲೇ ರಾಜಕೀಯಕ್ಕೆ ವಿದಾಯ ಹೇಳಿದ್ದ ವಸಂತ ಬಂಗೇರ ಇಂದು ಎಲ್ಲವನ್ನೂ ಬಿಟ್ಟು ತಮ್ಮ ಅಂತಿಮಯಾತ್ರೆ ಮುಗಿಸಿದ್ದಾರೆ.


ವಸಂತ ಬಂಗೇರ ಅವರ ಅಂತ್ಯಕ್ರೀಯೆ ಅವರ ಕುವೆಟ್ಟು ಕೇದೆ ಮನೆಯಲ್ಲಿ ನಡೆಸಲಾಗಿದೆ. ತಂದೆಯ ಚಿತೆಗೆ ಮಗಳು ಅಗ್ನಿ ಸ್ಪರ್ಷ ಮಾಡುವ ಮೂಲಕ ಅಂತಿಮ ವಿಧಿಯನ್ನು ಪೂರೈಸಿದ್ದಾರೆ. ಪಂಚಭೂತಗಳಲ್ಲಿ ಲೀನವಾಗಿರುವ ಮಾಜಿ ಶಾಸಕ ವಸಂತ ಬಂಗೇರ ಇನ್ನು ನೆನಪು ಮಾತ್ರ. ಆದ್ರೆ ವಸಂತ ಬಂಗೇರ ಅವರು ಅವರ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಜನನಾಯಕರಾಗಿರುತ್ತಾರೆ.

ವಿಡಿಯೋ ನೋಡಿ : ವಸಂತ ಬಂಗೇರ ಅವರ ರಾಜಕೀಯ ಜೀವನ ಕುರಿತಾದ ಸ್ಟೋರಿ

Continue Reading

LATEST NEWS

8 ಜನರ ಆಹುತಿ ಪಡೆದ ಪಟಾಕಿ ಸ್ಪೋಟ…! 9 ಜನ ಗಂಭೀರ

Published

on

ಮಂಗಳೂರು (ಶಿವಕಾಶಿ) : ಪಟಾಕಿ ಫ್ಯಾಕ್ಟರಿಯಲ್ಲಿ ನಡೆದ ಭೀಕರ ಸ್ಫೋಟದಿಂದ 8 ಜನರು ಇಹಲೋಕ ತ್ಯಜಿಸಿದ್ದು, 9 ಜನ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಮೇ9 ರ ಮದ್ಯಾಹ್ನ ಊಟದ ವಿರಾಮದಲ್ಲಿ ಈ ಸ್ಫೋಟ ನಡೆದಿರುವ ಕಾರಣ ಹಲವು ಕಾರ್ಮಿಕರು ಬದುಕಿ ಉಳಿದಿದ್ದಾರೆ.

ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಈ ಭೀಕರ ಸ್ಪೋಟ ಸಂಭವಿಸಿದೆ. ಶ್ರೀ ಸುಧರ್ಶನ್ ಫೈರ್‌ ವರ್ಕ್ಸ್‌ ಅನ್ನೋ ಫ್ಯಾಕ್ಟರಿ ಇದಾಗಿದ್ದು, ಮದ್ಯಾಹ್ನ ಊಟದ ವೇಳೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಫ್ಯಾಕ್ಟರಿಯಲ್ಲಿ ಸುಮಾರು 50 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಬಹುತೇಕರು ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಈ ಸ್ಫೋಟ ನಡೆದಿದೆ. ವಿಪರೀತವಾಗಿ ಏರಿದ್ದ ತಾಪಮಾನದಿಂದ ಪಟಾಕಿ ಸ್ಫೋಟಗೊಂಡಿದೆ ಎನ್ನಲಾಗಿದೆ.

ವೃದುನಗರ ಜಿಲ್ಲೆಯಲ್ಲಿರುವ ಶಿವಕಾಶಿಯ ಸೆಂಗಮಲೆಪೆಟ್ಟಿ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಇದೊಂದು ದೊಡ್ಡ ಪ್ರಮಾಣದಲ್ಲಿ ಪಟಾಕಿ ತಯಾರಿಸುವ ಫ್ಯಾಕ್ಟರಿಯಾಗಿದೆ.  ಸ್ಫೋಟದ ತೀವ್ರತೆಗೆ 7 ಕೊಠಡಿಯ ಕಟ್ಟಡ ಸಂಪೂರ್ಣ ನೆಲಸಮವಾಗಿ ಹೋಗಿದೆ. ಇಲ್ಲಿ ಪೂರ್ಣವಾಗಿ ಸಿದ್ಧಗೊಂಡಿದ್ದ ಪಟಾಕಿಗಳನ್ನು ಶೇಖರಿಸಿ ಇಡಲಾಗಿತ್ತು ಮತ್ತು ಪಕ್ಕದಲ್ಲೇ ಅರ್ಧ ತಯಾರಿಸಿದ್ದ ಪಟಾಕಿಗಳೂ ಕೂಡಾ ಇಡಲಾಗಿತ್ತು. ಪಟಾಕಿ ತಯಾರಿಸಲು ಇಟ್ಟಿದ ಮದ್ದಿಗೆ ಬೆಂಕಿ ತಗುಲಿ ಭಾರಿ ಸ್ಫೋಟ ಸಂಭವಿಸಿದೆ.  8 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಂಭತ್ತು ಜನ ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 9 ಜನರಲ್ಲಿ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಊಟಕ್ಕೆ ರೆಸ್ಟ್‌ ಇದ್ದ ಕಾರಣ ಇನ್ನಷ್ಟು ಜೀವ ಹಾನಿಯಾಗುವುದು ತಪ್ಪಿದ್ದು , ಘಟನೆ ನಡೆಯುವ ಸಮಯದಲ್ಲಿ ಕಟ್ಟಡದ ಸಮೀಪ ಕೇವಲ 17 ಜನ ಮಾತ್ರ ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಪಟಾಕಿ ಸ್ಫೋಟವಾಗುತ್ತಿದ್ದಂತೆ ಸ್ಥಳದಿಂದ ಓಡಿ ರಕ್ಷಿಸಿಕೊಳ್ಳುವ ವೇಳೆ ಕಟ್ಟಡ ಉರುಳಿ ಅದರ ಅಡಿಗೆ ಬಿದ್ದು 8 ಜನ ಮೃತ ಪಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದೆ. ಘಟನೆ ನಡೆಯುತ್ತಿದ್ದಂತೆ ರಕ್ಷಣೆಗೆ ಉಳಿದ ಕಾರ್ಮಿಕರು ಧಾವಿಸಿದ್ರೂ ಯಾರನ್ನೂ ರಕ್ಷಣೆ ಮಾಡುವ ಪರಿಸ್ಥಿತಿ ಅಲ್ಲಿ ಇರಲಿಲ್ಲ . ಹೀಗಾಗಿ ಸುಮಾರು 1 ಗಂಟೆಯ ಬಳಿಕ ಅಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದ್ದು, ಆ ವೇಳೆಗಾಗಲೇ 8 ಜನ ಮೃತ ಪಟ್ಟಿದ್ದಾರೆ.

Continue Reading

LATEST NEWS

ಎಸ್‌ಎಸ್‌ಎಲ್‌ಸಿ ಅಲ್ಲಿ ಫೇಲ್ ಎಂದು ತಿಳಿದು ಆತ್ಮಹತ್ಯೆ ಮಾಡಿದ ಯುವತಿ

Published

on

ಮಂಡ್ಯ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ರಿಸಲ್ಟ್ ಇಂದು ಪ್ರಕಟಗೊಂಡಿದೆ. ಆದರೆ ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ ಫೇಲ್ ಎಂದು ತಪ್ಪಾಗಿ ತಿಳಿದು ನೇಣಿಗೆ ಶರಣಾಗಿದ್ದಾಳೆ.

ಅಮೃತ (16) ನೇಣಿಗೆ ಶರಣಾದ ವಿದ್ಯಾರ್ಥಿನಿ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಮೃತ ನಗರಕೆರೆ ಗ್ರಾಮದ ಸರ್ಕಾರಿ ಅನುದಾನಿತ ಪೂರ್ಣಿಮಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಅಮೃತ ಶೇ.57 ಅಂಕ ಪಡೆದು ತೇರ್ಗಡೆ ಹೊಂದಿದ್ದಳು.

ಆದರೆ ಪರೀಕ್ಷೆಯಲ್ಲಿ ಫೇಲ್ ಆಗಿಬಿಟ್ಟೆ ಎಂದು ತಪ್ಪಾಗಿ ತಿಳಿದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣಿಗೆ ಶರಣಾಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

Continue Reading

LATEST NEWS

Trending