ದೇವಾಲಯದಲ್ಲಿ ಅಡ್ಡ ಬೀಳುವಂತಿಲ್ಲ.. ಸ್ನಾನಘಟ್ಟಕ್ಕೂ ನೋ ಎಂಟ್ರಿ…!
ಸುಬ್ರಹ್ಮಣ್ಯ: ಮಹಾಮಾರಿ ಕೊರೊನಾ ಲಾಕ್ ಡೌನ್ ನಿಂದಾಗಿ ಮುಚ್ಚಿದ್ದ ದೇವಾಲಯಗಳು ಸುಮಾರು ಎರಡೂವರೆ ತಿಂಗಳ ಬಳಿಕ ನಾಳೆ (ಜೂನ್ 8) ಯಿಂದ ಭಕ್ತರ ದರ್ಶನಕ್ಕೆ ತೆರೆಯಲಿದೆ.
ಅಂತೆಯೇ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೂಡ ನಾಳೆಯಿಂದ ದೇವರ ದರ್ಶನಕ್ಕೆ ಭಕ್ತಾಧಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ.
ಆದ್ರೆ ಅನ್ ಲಾಕ್ ಮಾಡಿರೋ ಸರ್ಕಾರ ಭಕ್ತರಿಗೆ ಹಲವು ನಿಯಮಗಳನ್ನ ಕೂಡ ಜಾರಿಗೊಳಿಸಿದೆ.
ಕೊರೊನಾ ಮಹಾಮಾರಿ ತಡೆಯುವ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಹಾಗೂ ಇತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಜವಾಬ್ದಾರಿ ಧಾರ್ಮಿಕ ಸಂಸ್ಥೆಗಳ ಮೇಲಿರುವ ಕಾರಣಕ್ಕಾಗಿ,
ಬಹುತೇಕ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರ ಪ್ರವೇಶಕ್ಕೆ ಹಲವು ಹೊಸ ನಿಯಮಗಳನ್ನು ಅಳವಡಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಭಕ್ತರಿಗೆ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ.
ಹಾಗೂ ದೇವಸ್ಥಾನದ ಮುಖ್ಯ ದ್ವಾರದ ಬಳಿ ನಿರ್ಮಿಸಿರುವ ಸ್ಯಾನಿಟೈಸರ್ ಸ್ಟಾಂಡ್ ನಲ್ಲಿ ಕೈಗಳನ್ನು ಶುಚಿಗೊಳಿಸಿ ದೇವಸ್ಥಾನಕ್ಕೆ ಪ್ರವೇಶಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ಸರ್ಪಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆಗಳಿಗೆ ಪ್ರಸಿದ್ಧಿಯಾಗಿರುವ ಕುಕ್ಕೆಯಲ್ಲಿ ಸದ್ಯದ ಮಟ್ಟಿಗೆ ಈ ಎರಡು ಸೇವೆ ಸೇರಿದಂತೆ ಎಲ್ಲಾ ಸೇವೆಗಳನ್ನು ರದ್ದುಗೊಳಿಸಲಾಗಿದೆ.
ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ದೇವಸ್ಥಾನಕ್ಕೆ ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ವ್ಯವಸ್ಥೆಯನ್ನು ಮಾಡಲಾಗಿದೆ.
ಭಕ್ತರು ಕ್ಷೇತ್ರದ ದರ್ಶನಕ್ಕೆ ಬರುವ ಹಿನ್ನಲೆಯಲ್ಲಿ ಸಿಬ್ಬಂದಿಗಳು ಅನುಸರಿಸಬೇಕಾದ ನಿಯಮಗಳ ಬಗ್ಗೆಯೂ ಅಧಿಕಾರಿಗಳು ಸಭೆ ನಡೆಸಿದ್ದಾರೆ.
ಈಗಾಗಲೇ ಕ್ಷೇತ್ರದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದ್ದು, ಭಕ್ತರ ಆಗಮನಕ್ಕೆ ಕಾಯಲಾಗುತ್ತಿದೆ.
ಭಕ್ತರಿಗೆ ಹಲವು ಹೊಸ ನಿಯಮಗಳನ್ನು ವಿಧಿಸಲಾಗಿದ್ದು, ಭಕ್ತರು ದೇವರ ದರ್ಶನವನ್ನು ಪಡೆಯವುದನ್ನು ಹೊರತುಪಡಿಸಿ ಯಾವುದೇ ಸೇವೆ, ಪ್ರಸಾದ,ತೀರ್ಥಪ್ರಸಾದಗಳನ್ನು ಸ್ವೀಕರಿಸಲು ಅವಕಾಶವಿಲ್ಲ.
ಬೆಳಿಗ್ಗೆ 8.30 ರಿಂದ ರಾತ್ರಿ 5.30 ರ ವರೆಗೆ ಮಾತ್ರ ಕ್ಷೇತ್ರ ಸಾರ್ವಜನಿಕರ ಭೇಟಿಗೆ ತೆರೆಯಲಿದೆ.
ಜೂನ್ 30ರ ವರೆಗೆ ಕ್ಷೇತ್ರದ ವಸತಿಗೃಹಗಳಲ್ಲಿ ಭಕ್ತರಿಗೆ ತಂಗಲು ಅವಕಾಶವಿಲ್ಲ.
ಕ್ಷೇತ್ರಕ್ಕೆ ಬರುವ ಭಕ್ತಾಧಿಗಳೇ ಶಲ್ಯ/ ಶಾಲುಗಳನ್ನು ತರಬೇಕು.
ಜ್ವರ, ಕೆಮ್ಮು, ಹಾಗೂ ಶೀತ ಇರುವ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ. ಅಲ್ಲದೆ ದೇವರ ದರ್ಶನದ ಸಮಯದಲ್ಲಿ ಭಕ್ತಾಧಿಗಳು ದೇವಾಲಯದ ಗೋಡೆ, ಕಂಬಗಳನ್ನು ಮುಟ್ಟುವಂತಿಲ್ಲ.
ದೇವರಿಗೆ ಅಡ್ಡ ಬೀಳಲು, ಕುಳಿತುಕೊಳ್ಳಲು ಅವಕಾಶವಿಲ್ಲ. ದೇವಸ್ಥಾನದ ಸ್ನಾನಘಟ್ಟ, ಕಲ್ಯಾಣಿಯಲ್ಲಿ ತೀರ್ಥಸ್ನಾನಕ್ಕೂ ಅನುಮತಿ ನಿರಾಕರಿಸಲಾಗಿದೆ.
ಅಲ್ಲದೆ 65 ವರ್ಷ ಮೇಲ್ಪಟ್ಟ, 10 ವರ್ಷ ಕೆಳಗಿನ ಹಾಗೂ ಗರ್ಭಿಣಿ ಮಹಿಳೆಯರು ಕ್ಷೇತ್ರದ ಭೇಟಿಯನ್ನು ನಡೆಸದೇ ಇರುವುದು ಉತ್ತಮ ಎನ್ನುವ ಸೂಚನೆಯನ್ನು ದೇವಸ್ಥಾನದ ವತಿಯಿಂದ ನೀಡಲಾಗಿದೆ.