ಮಂಗಳೂರು: ಮೆಡಿಕಲ್ ಹಬ್ ಆಗಿರುವ ಮಂಗಳೂರಿನಲ್ಲಿ ಅಂಗಾಂಗ ದಾನದ್ದೇ ಸುದ್ದಿ. ರಸ್ತೆಯಲ್ಲಿ ಬಿದ್ದು, ತಲೆಗೆ ಏಟಾಗಿ ಕೋಮಾಕ್ಕೆ ಜಾರಿ ಅಂಗಾಂಗ ದಾನದಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಮಂಗಳೂರು ಸ್ಮಾರ್ಟ್ ಸಿಟಿಯ ಯೋಜನೆಗಳು ಇದೀಗ ಕಾರ್ಯಗತವಾಗಿವೆ…!
ಮುಂಗಾರು ಮಳೆ ಇನ್ನೇನು ಪ್ರಾರಂಭವಾಗಬೇಕಷ್ಟೆ. ಕಳೆದ 10- 15 ದಿನಗಳಿಂದ ಮಂಗಳೂರು ನಗರದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಈ ಮಳೆಗಾಲ ಮಂಗಳೂರು ನಗರದಲ್ಲಿ ಅನೇಕ ಅವಾಂತರಗಳಿಗೆ ಸಾಕ್ಷಿಯಾಗಲಿದೆ.
ಸ್ಮಾರ್ಟ್ ಸಿಟಿ ಎಂಬ ಅಭಿವೃದ್ಧಿ ಹೆಸರಿನಲ್ಲಿ ನಗರದಾದ್ಯಂತ ರಸ್ತೆ, ಫುಟ್ಪಾತ್ ಅನ್ನು ನಾಯಿ ತಿಂದಂತೆ ಅಲ್ಲಲ್ಲಿ ಅಗೆದು ಹಾಕಿದ ಪರಿಣಾಮ ನೀರು ಮತ್ತು ಕೆಸರು ತುಂಬಿ ಮರಣ ಬಾವಿಯಂತೆ ಬಾಯಿ ತೆರೆದು ಬಲಿ ಪಡೆಯಲು ಸಿದ್ದವಾಗಿದೆ.
ಮನೆ ಮನೆಗೆ ಅನಿಲ ಸರಬರಾಜು ಮಾಡುವ ಕೊಳವೆ ಯೋಜನೆಯ ‘ಗೇಲ್ ಇಂಡಿಯಾ’, ಕುಡಿಯುವ ನೀರು ಪೂರೈಕೆಯ ‘ಜಲಸಿರಿ’ ಯೋಜನೆ,
ಒಳಚರಂಡಿ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಾಗಿ ನಗರದ ಕದ್ರಿ, ಬಂಟ್ಸ್ ಹಾಸ್ಟೆಲ್, ಜ್ಯೋತಿ, ಲಾಲ್ಭಾಗ್, ಕೆಎಸ್ಆರ್ಟಿಸಿ ಸೇರಿದಂತೆ ಹಲವೆಡೆ ಕಾಂಕ್ರೀಟ್ ರಸ್ತೆಯನ್ನು ಅಗೆದು ಹಾಕಿದ್ದಾರೆ.
ಸರಿ ಸುಮಾರು 5 ಇಂಚು ಇರುವ ಕಾಂಕ್ರೀಟ್ ರಸ್ತೆ ಮತ್ತು ಫುಟ್ ಪಾತ್ ಗಳಲ್ಲಿ ಗುಂಡಿಗಳನ್ನು ಅಗೆದಿಟ್ಟು ಅನಿಲದ ಪೈಪ್ ಇಳಿಸಿ ಯಥಾಸ್ಥಿತಿಯಲ್ಲಿ ಬಿಟ್ಟು ಹೋಗಿದ್ದಾರೆ.
ಆದ್ರೆ ಇದೇ ಗುಂಡಿಗಳು ಮಂಗಳೂರಿಗರಿಗೆ ಮೃತ್ಯುಕೂಪಗಳಾಗಿ ಪರಿವರ್ತಿತವಾಗಿವೆ.
ಈ ಗುಂಡಿಗಳಲ್ಲಿ ಬಿದ್ದು ಕುತ್ತಿಗೆ, ಕೈ ಕಾಲು ಮುರಿದು ತಲೆಗೆ ಏಟಾಗಿ ಕೋಮಾಕ್ಕೆ ಜಾರುವ ಅಘಾತಕಾರಿ ಬೆಳವಣಿಗೆ ಈ ಮಳೆಗಾಲದಲ್ಲಿ ನಡೆಯುವ ಆತಂಕ ಎದುರಾಗಿದೆ.
ಮುಂಗಾರು ಪೂರ್ವ ಸುರಿದ ಪ್ರಾರಂಭದ ಮಳೆಗೆ ಈ ಗುಂಡಿಗಳಲ್ಲಿ ಕೆಸರಿನ ನೀರು ತುಂಬಿದ ಪರಿಣಾಮ ಗುಂಡಿಯ ಅರಿವಿಲ್ಲದ ಪಾದಚಾರಿಗಳು ಹಾಗೂ ದ್ವಿಚಕ್ರ ಸವಾರರು ಈ ಗುಂಡಿಗಳಲ್ಲಿ ಬಿದ್ದು ಮುಖ, ಮೂತಿ ಚಚ್ಚಿಸಿಕೊಂಡ ಘಟನೆಗಳು ನಡೆದಿವೆ.
ಹಲವೆಡೆ ಇಂತಹ ಅಧ್ವಾನಗಳಿಂದ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಸ್ಮಾರ್ಟ್ ಸಿಟಿಯಡಿ ಅಂದ ಚೆಂದವಾಗಿ ಕಾಣಲು ನಿರ್ಮಿಸಿದ ಫುಟ್ಪಾತ್ ಗಳು ಬಿರುಕು ಬಿಟ್ಟಿದೆ.
ಇತ್ತೀಚೆಗೆ ನಗರದ ಕೆನರಾ ಶಾಲೆಯ ಬಳಿ ತಾಯಿ ಜೋತೆ ವಾಕ್ ಮಾಡುತ್ತಿದ್ದ ಪುಟ್ಟ ಮಗುವೊಂದರ ಕಾಲು ಗುಂಡಿಯೊಳಗೆ ಸಿಲುಕಿದ ಘಟನೆ ವರದಿಯಾಗಿತ್ತು.
ಅಗೆದ ಗುಂಡಿಯ ಸುತ್ತಲೂ ಅಪಾಯದ ಸೂಚನೆ ನೀಡುವ ಯಾವುದೇ ಫಲಕ ಅಳವಡಿಸಿಲ್ಲ. ಕೆಲವೆಡೆ ಕಟ್ಟಿದ್ದ ಅಪಾಯ ಸೂಚನೆಯ ಟೇಪ್ ಕಟ್ಟಿ ಬಿಟ್ಟವರ ಹಿಂದೆಯೇ ಹೋಗಿದೆ.
ಈ ಕಾಮಗಾರಿ ಗುತ್ತಿಗೆಯನ್ನು ನೀಡಿದ ಮಹಾನಗರ ಪಾಲಿಕೆ ಮತ್ತು ಕಾಮಗಾರಿಯನ್ನು ಮಾನಿಟರ್ ಮಾಡಬೇಕಾಗಿದ್ದ ಪಾಲಿಕೆಯ ಅಧಿಕಾರಿಗಳು ಎಸಿ ಆಫೀಸ್ ನಲ್ಲಿ ಬಿಸಿ ಕಾಫಿಯೊಂದಿಗೆ ಕುರ್ಚಿ ಬಿಸಿ ಮಾಡಿ ‘ಬಂದ ಪುಟ್ಟ ಹೋದ ಪುಟ್ಟ’ ಎಂದು ಮನೆ ಕಡೆ ಹೆಜ್ಜೆ ಹಾಕುತ್ತಾರೆ.
ವಾರ್ಡ್ ನ ಜವಾಬ್ದಾರಿ ಹೊಂದಿರುವ ಕೆಲ ಕಾರ್ಪೋರೇಟರ್ಗಳು ಮುಂದಿನ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದರೆ ಮತ್ತೆ ಕೆಲವರು ಖಾಸಾಗಿ ‘ವೈವಾಟಿನಲ್ಲೇ ‘ ಬ್ಯಸಿಯಾಗಿದ್ದಾರೆ. ಕೋಟ್ಯಾಂತರ ರೂಪಾಯಿಗಳನ್ನು ಖರ್ಚುಮಾಡಿ ಮಾಡಿದ ಸ್ಮಾರ್ಟ್ ಸಿಟಿ ಯೋಜನೆ ನೀರಲ್ಲಿಟ್ಟ ಹೋಮದಂತಾಗಿದೆ..!
“ನಗರಕ್ಕೆ ಮೂಲಸೌಕರ್ಯ ಬೇಕು. ಅಭಿವೃದ್ಧಿಯಾಗುವುದು ಸಂತೋಷ. ಆದರೆ ಕಾಮಗಾರಿ ಮುಗಿದ ನಂತರ ರಸ್ತೆಯನ್ನು ಮೊದಲಿನ ಸ್ಥಿತಿಯಂತೆ ಮಾಡದೇ ಕೇವಲ ಮಣ್ಣುಹಾಕಿ ಸಮತಟ್ಟು ಮಾಡಿ ಕೈತೊಳೆಯುತ್ತಿದ್ದಾರೆ.
ಇದನ್ನು ಗಮನಿಸಬೇಕಾದ ಮೂರ್ಖ ಕಾರ್ಪೋರೇಟರ್ ಗಲೇ ನಿಮ್ಮ ಮತದಾರರಿಗೆ ಓಟು ಕೊಟ್ಟಿದ್ದಕ್ಕೆ ಅವರು ನೆಮ್ಮದಿಯಾಗಿರಲು ಇಷ್ಟಾದರೂ ಮಾಡಿ.
ಇಲ್ಲದಿದ್ದರೆ ರಿಸೈನ್ ಕೊಟ್ಟು ಮನೆಗೆ ನಡೀರಿ” ಎಂದು ಆಕ್ರೋಶದ ನುಡಿಗಳನ್ನು ಆಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್.
“ಕಾಮಗಾರಿ ನಡೆಯುವಾಗ ಮೊದಲಿದ್ದಂತೆ ರಸ್ತೆ, ಫುಟ್ಪಾತ್ ನಿರ್ಮಿಸುತ್ತೇವೆ ಎಂದು ಒಡಂಬಡಿಕೆ ಮಾಡಿಕೊಂಡಿರುತ್ತಾರೆ.
ಇದು ಎರಡು ದಿನದ ಮಳೆಯ ನಂತರದ ಸ್ಯಾಂಪಲ್ ಅಷ್ಟೇ. ಇದನ್ನು ಗಮನಿಸಬೇಕಾದ ಪಾಲಿಕೆ ಅಧಿಕಾರಿಗಳು ಎಸಿ ರೂಮಿನಲ್ಲಿ ಕುಳಿತಿರುವುದರಿಂದ ಇಂತಹ ಅಧ್ವಾನ ನಡೆಯುತ್ತಲೇ ಇರುತ್ತವೆ.
ನಿನ್ನೆ ಮಹಿಳೆಯೊಬ್ಬರು ಹೊಂಡಕ್ಕೆ ಬಿದ್ದು ಆಸ್ಪತ್ರೆ ಸೇರಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ರಸ್ತೆ ಸುರಕ್ಷಾ ಸಮಿತಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಜಿ.ಕೆ ಭಟ್ ಒತ್ತಾಯಿಸಿದ್ದಾರೆ.