ಮಂಗಳೂರು ಉಗ್ರ ಬರಹ ವಿಚಾರ : ಆರೋಪಿಗಳಿಗಿತ್ತ ಐಸಿಸ್ ನಂಟು..!?
ಮಂಗಳೂರು : ಮಂಗಳೂರಿನ ಬಿಜೈ ಮತ್ತು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಕಂಡುಬಂದ ಉಗ್ರ ಪರ ಗೋಡೆ ಬರಹ ವಿಚಾರ ಇದೀಗ ತೀರ್ವ ಸ್ವರೂಪ ಪಡೆದುಕೊಂಡಿದ್ದು, ಶಂಕಿತ ಆರೋಪಿಗಳಿಗೆ ವಿಶ್ವದ ಡೆಡ್ಲಿಯೆಸ್ಟ್ ಉಗ್ರ ಸಂಘಟನೆಗಳಲ್ಲಿ ಒಂದಾದ ಐಸಿಸ್ ನಂಟಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ರಾಷ್ಟ್ರಮಟ್ಟದಲ್ಲೇ ಸಂಚಲನ ಮೂಡಿಸಿದ್ದು, ಬಂಧಿತ ಆರೋಪಿಗಳಾದ ತೀರ್ಥಹಳ್ಳಿ ನಿವಾಸಿ, ಬಿ-ಟೆಕ್ ವಿದ್ಯಾರ್ಥಿ ಮಾಝ್ ಮುನೀರ್(21) ಮತ್ತು ಮಹಮ್ಮದ್ ಶಾರೀಕ್(22)ಗೆ ದೇಶದ್ರೋಹಿ ಸಂಘಟನೆ ಜತೆ ನಿಕಟ ಸಂಪರ್ಕವಿರಿಸಿದ್ದ ಅಘಾತಕಾರಿ ಅಂಶ ಬಯಲಾಗಿದೆ.
ಆರೋಪಿಗಳಿಬ್ಬರು ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್, ವಾಟ್ಸ್ಆ್ಯಪ್ ಮೂಲಕ ಉಗ್ರ ಸಂಘಟನೆಗಳ ಜತೆ ನೇರಾ ನಂಟು ಹೊಂದಿರುವುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ.
ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿರುವ ಪುಣೆಯ ವ್ಯಕ್ತಿ ಎಡ್ಮಿನ್ ಆಗಿರುವ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಈ ಇಬ್ಬರು ಆರೋಪಿಗಳಿದ್ದಾರೆ.
ಈ ಗ್ರೂಪ್ನಲ್ಲಿ ದೇಶದ್ರೋಹಿ ಚಟುವಟಿಕೆಗಳಿಗೆ ಸಂಬಂಧಿಸಿ ಚರ್ಚೆ ನಡೆಯುತ್ತಿತ್ತು. ಇದರಿಂದ ಪ್ರೇರಣೆಗೊಂಡು ಇವರು ಮಂಗಳೂರಿನಲ್ಲಿ ಗೋಡೆ ಬರಹದ ಮೂಲಕ ಜನರಲ್ಲಿ ಭಯದ ವಾತಾವರಣ ಉಂಟು ಮಾಡಿದ್ದರು. ಇದೊಂದು ವ್ಯವಸ್ಥಿತ ಉಗ್ರ ಜಾಲವಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಬಂಧಿತ ಆರೋಪಿಗಳು ಐಸಿಸ್ ಬಗ್ಗೆ ಒಲವು ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣ ಮುಖೇನ ಆ ಸಂಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು. ಜತೆಗೆ ಸಂಘಟನೆಗೆ ಪೂರಕವಾದ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಹುಡುಕಾಡಿ ಓದುತ್ತಿದ್ದು, ಅದನ್ನು ನೆಚ್ಚಿಕೊಂಡಿದ್ದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೇ ಮಾದರಿಯ ಗೋಡೆ ಬರಹಗಳು ಮತ್ತು ಅದಕ್ಕೆ ಪ್ರತಿಸ್ಪಂದನೆ ಬಗ್ಗೆಯೂ ತಿಳಿದು ಮಂಗಳೂರಿನಲ್ಲಿ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮತ್ತೋರ್ವ ಆರೋಪಿಯ ಬಂಧನ..!?
ಇನ್ನು ಉಗ್ರ ಗೋಡೆಬರಹಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ತನಿಖಾಧಿಕಾರಿಗಳ ತಂಡ ಇನ್ನೊಬ್ಬ ಆರೋಪಿಯನ್ನು ಬಂಧಿಸಿದೆ. ಬಂಧಿತನನ್ನು ತೀರ್ಥ ಹಳ್ಳಿ ಮೂಲದ ಸಾದತ್ ಎಂದು ಗುರುತಿಸಲಾಗಿದೆ.
ಈಗಾಗಲೇ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಇಬ್ಬರು ಆರೋಪಿಗಳಲ್ಲಿ ಒಬ್ಬನಾಗಿರುವ ಮುಹಮ್ಮದ್ ಶಾರೀಕ್ ಎಂಬಾತನ ಸ್ನೇಹಿತ ಈತ ಎಂದು ತಿಳಿದು ಬಂದಿದ್ದು, ತನಿಖೆ ತೀವ್ರಗತಿಯಲ್ಲಿ ಮುಂದುವರೆದಿದೆ.
ಉಗ್ರ ಪರ, ದೇಶದ್ರೋಹಿ ಚಟುವಟಿಕೆಗಳು ಭಾರತೀಯ ದಂಡಸಂಹಿತೆ ಪ್ರಕಾರ ಕಾನೂನುಬಾಹಿರ ಸಂಘಟಿತ ಅಪರಾಧದಡಿ ಬರುತ್ತದೆ. ಕೇಸು ದಾಖಲಾದ ಹಿನ್ನೆಲೆಯಲ್ಲಿ ತನಿಖೆಯನ್ನು ಕೇಂದ್ರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ಜಗದೀಶ್ ಅವರಿಗೆ ವಹಿಸಲಾಗಿದೆ.