ವ್ಯಾಪಾರ ಅಥವಾ ಇತರ ಚಟುವಟಿಕೆ ನಡೆಸುವುದಕ್ಕೆ ಸಂಪೂರ್ಣ ನಿರ್ಬಂಧ…!
ಮಂಗಳೂರು: ಕೇಂದ್ರ ಮಾರುಕಟ್ಟೆಯಲ್ಲಿ ಇಂದು ಮತ್ತೆ ಬಲವಂತದಿಂದ ವ್ಯಾಪಾರ ಮಾಡಲು ಮುಂದಾದ ವ್ಯಾಪಾರಸ್ಥರಿಗೆ ಮಂಗಳೂರು ಪಾಲಿಕೆ ಅಧಿಕಾರಿಗಳು ತಣ್ಣೀರೆರಚಿದ್ದಾರೆ.
ಎರಡು ತಿಂಗಳಿನಿಂದ ಮುಚ್ಚಿದ್ದ ಮಾರುಕಟ್ಟೆಯಲ್ಲಿ ಮತ್ತೆ ವ್ಯಾಪಾರಕ್ಕೆ, ವ್ಯಾಪಾರಿಗಳು ಸಿದ್ಧತೆ ನಡೆಸಿದ್ದರು.
ಈ ನಡುವೆ ಅಂಗಡಿ ತೆರೆಯಲು ಬಂದ ವ್ಯಾಪಾರಿಗಳು ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ಕೂಡ ನಡೆದಿತ್ತು.
ಅಲ್ಲದೆ ನಿನ್ನೆ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಪತ್ರಿಕಾಗೋಷ್ಟಿ ನಡೆಸಿ ಇಂದಿನಿಂದ ವ್ಯಾಪಾರ ಅರಂಭಿಸಿಯೇ ತೀರುವುದಾಗಿ ಘೋಷಣೆ ಮಾಡಿತ್ತು.
ಈ ಹಿನ್ನಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ವ್ಯಾಪಾರಸ್ಥರ ನಡೆ ಕಾನೂನು ಬಾಹಿರ ಮತ್ತು ಶಿಥಿಲಗೊಂಡ ಕೇಂದ್ರ ಮಾರುಕಟ್ಟೆಯ ಕಟ್ಟಡ ವ್ಯಾಪಾರ ಮಾಡುವುದು ಅಪಾಯಕಾರಿ ಎಂದು ಹೇಳಿ,
ವ್ಯಾಪಾರ ಮಾಡುವುದು ಅಥವಾ ಇತರ ಚಟುವಟಿಕೆ ನಡೆಸುವುದಕ್ಕೆ ನಿರ್ಬಂಧ ವಿಧಿಸಿದ್ದಾರೆ.
ಈ ಹಿನ್ನಲೆಯಲ್ಲಿ ಕೇಂದ್ರ ಮಾರುಕಟ್ಟೆ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.
ಮಾರುಕಟ್ಟೆ ಪರಿಸರದಲ್ಲಿ ಯಾವುದೇ ಚಟುವಟಿಕೆಗಳನ್ನು ಕಂಡುಬರಲಿಲ್ಲ. ಇನ್ನು ಬೈಕಂಪಾಡಿ ಎಪಿಎಂಸಿ ಯಾರ್ಡಿನಲ್ಲಿ ವ್ಯಾಪಾರ ಯಥಾಸ್ಥಿತಿಯಲ್ಲಿಂದು ಮುಂದುವರೆದಿದೆ.
ಸೆಂಟ್ರಲ್ ಮಾರುಕಟ್ಟೆಯಿಂದ ಬೈಕಂಪಾಡಿ ಎಪಿಎಂಸಿಗೆ ಸ್ತಳಾಂತರಗೊಂಡ ವ್ಯಾಪಾರಿಗಳು ಮತ್ತೆ ಸೆಂಟ್ರಲ್ ಮಾರುಕಟ್ಟೆಗೆ ಬರಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಸೆಂಟ್ರಲ್ ಮಾರುಕಟ್ಟೆಗಿಂತ ವಿಶಾಲ ಸ್ಥಳ ಬೈಕಂಪಾಡಿಯಲ್ಲಿರುವುದರಿಂದ ಅಲ್ಲಿಯೇ ವ್ಯಾಪಾರ ಮುಂದುವರೆಸುವುದಾಗಿ ಕೆಲ ವ್ಯಾಪಾರಸ್ಥರು ಹೇಳಿದ್ದಾರೆ.
ಎ.7ರಂದು ಹೊಸ ಮಾರುಕಟ್ಟೆ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಕೇಂದ್ರ ಮಾರುಕಟ್ಟೆಯನ್ನು ಪಾಲಿಕೆ ಮುಚ್ಚಿತ್ತು.
151 ಸಗಟು ಮತ್ತು 300 ಚಿಲ್ಲರೆ ವ್ಯಾಪಾರಿಗಳನ್ನು ಸುರತ್ಕಲ್ ಎಪಿಎಂಸಿಗೆ ಶಿಫ್ಟ್ ಮಾಡಲಾಗಿತ್ತು.
ಆದರೆ ಪಾಲಿಕೆ ಆದೇಶ ಉಲ್ಲಂಘಿಸಿ ಮತ್ತೆ ಕೇಂದ್ರ ಮಾರುಕಟ್ಟೆ ತೆರೆಯಲು ಸಿದ್ದತೆ ನಡೆಸಿದ್ದರು.
ಈ ಹಿನ್ನಲೆಯಲ್ಲಿ ಮಂಗಳೂರಿನ ಕೇಂದ್ರ ಮಾರುಕಟ್ಟೆ ಎದುರು ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಒಂದುವೇಳೆ ಮಾರುಕಟ್ಟೆ ತೆರೆದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಅಲ್ಲದೇ ಎಲ್ಲಾ ವ್ಯಾಪಾರಿಗಳ ಲೈಸೆನ್ಸ್ ರದ್ದು ಪಡಿಸುವುದಾಗಿ ಪಾಲಿಕೆ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
ಸದ್ಯ ಯಾವುದೇ ಕಾರಣಕ್ಕೂ ಮಾರ್ಕೆಟ್ ತೆರೆಯಲು ಬಿಡಲ್ಲ ಎಂದು ಪಾಲಿಕೆ ಪಟ್ಟು ಹಿಡಿದಿದೆ.
ಒಟ್ಟಾರೆಯಾಗಿ ಈ ಗೊಂದಲವನ್ನು ಪಾಲಿಕೆ ಇನ್ನು ಮುಂದೆ ಯಾವ ರೀತಿಯಾಗಿ ನಿಭಾಯಿಸುತ್ತೆ ಎಂದು ಕಾದು ನೋಡಬೇಕಾಗಿದೆ.