ಅಕ್ರಮ ಆಸ್ತಿ ಆರೋಪದಡಿ ನಾಲ್ವರು ಸರಕಾರಿ ಅಧಿಕಾರಿಗಳ ಮನೆ– ಕಚೇರಿ ಸೇರಿದಂತೆ ರಾಜ್ಯದೆಲ್ಲೆಡೆ 14 ಕಡೆ ಧಾಳಿ..
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ನಾಲ್ವರು ಸರಕಾರಿ ಅಧಿಕಾರಿಗಳ ಮನೆ- ಕಚೇರಿ ಸೇರಿದಂತೆ ರಾಜ್ಯದೆಲ್ಲೆಡೆ 14 ಕಡೆ ರಾಜ್ಯ ಭ್ರಷ್ಟಚಾರ ನಿಗ್ರಹ ದಳ ದಾಳಿ ನಡೆಸಿದೆ.
ಈ ಸಂದರ್ಭ ಕೋಟ್ಯಂತರ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆ ಹಚ್ಚಲಾಗಿದೆ ಎಂದು ರಾಜ್ಯ ಎಸಿಬಿ ಹೇಳಿದೆ.
ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಲ್. ಸತೀಶ್ ಕುಮಾರ್ ಅವರ ಬಳಿ ಬೆಂಗಳೂರು ಮೈಸೂರಿನ ಸರಸ್ವತಿಪುರದ 1 ವಾಸದ ಮನೆ, ಬೆಂಗಳೂರು ನಗರದಲ್ಲಿ 5 ನಿವೇಶನಗಳು,
1.17 ಕೆಜಿ ಚಿನ್ನ, 7.2 ಕೆ.ಜಿ. ಬೆಳ್ಳಿ, ಎರಡು ಕಾರು, 2.92 ಲಕ್ಷ ನಗದು ಪತ್ತೆಯಾಗಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ವಲಯ ಅರಣ್ಯ ಅಧಿಕಾರಿ, ಎನ್. ರಾಮಕೃಷ್ಣ ಅವರ ಮನೆ ಮೇಲೆ ದಾಳಿ ನಡೆಸಿದಾಗ,
ಕೋಲಾರದಲ್ಲಿ 1 ಮತ್ತು ಬೆಂಗಳೂರಿನಲ್ಲಿ 2 ವಾಸದ ಮನೆಗಳು, ಬಂಗಾರಪೇಟೆಯ ಚಿನ್ನ ಕಾಮನಹಳ್ಳಿಯಲ್ಲಿ 1.23 ಎಕರೆ ಕೃಷಿ ಜಮೀನು,
877 ಗ್ರಾಂ ಚಿನ್ನ, 1.58 ಕೆ.ಜಿ ಬೆಳ್ಳಿ, ಕಾರು, ವಿವಿಧ ಬ್ಯಾಂಕ್ ಗಳಲ್ಲಿ 8.22 ಲಕ್ಷ ನಗದು, 2.27 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳಿರುವುದು ಬೆಳಕಿಗೆ ಬಂದಿದೆ.
ಇನ್ನು ರಾಯಚೂರು ಜಿಲ್ಲಾಧಿಕಾರಿಗಳ ಕಾರ್ಯಾಲಯ ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರ್ಯನಿರ್ವಾಹಕ ಅಭಿಯಂತರ ಗೋಪಶೆಟ್ಟಿ ಮಲ್ಲಿಕಾರ್ಜುನ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ,
ರಾಯಚೂರಿನಲ್ಲಿ 3 ಹಾಗೂ ಬೆಂಗಳೂರಿನಲ್ಲಿ ಒಂದು ವಾಸದ ಮನೆ, ರಾಯಚೂರಿನಲ್ಲಿ 2 ಫ್ಲಾಟ್ ಮತ್ತು ಕೊಪ್ಪಳದಲ್ಲಿ 2 ನಿವೇಶನ, 1.394 ಕೆಜಿ ಚಿನ್ನ, 10.3 ಕೆಜಿ ಬೆಳ್ಳಿ, 74 ಸಾವಿರ ನಗದು,
ರಾಯಚೂರಿನಲ್ಲಿ ಪತ್ನಿ ಹೆಸರಿನಲ್ಲಿ ಒಂದು ಪೆಟ್ರೋಲ್ ಬಂಕ್, 2 ಟ್ರ್ಯಾಕ್ಟರ್ ಶೋ ರೂಂ, 8.38 ಎಕರೆ ಕೃಷಿ ಜಮೀನು, 1 ಬೈಕ್, 1.4 ಕೋಟಿ ಗೃಹಪಯೋಗಿ ವಸ್ತುಗಳು ಪತ್ತೆಯಾಗಿವೆ.
ಇನ್ನು ಬಾಗಲಕೋಟೆ ಕ್ಯಾಂಪ್ ಆಲಮಟ್ಟಿ ಬೀಳಗಿ ಸಹಾಯಕ ಉಪವಿಭಾಗ ರಾಘಪ್ಪ ಲಾಲಪ್ಪ ಲಮಾಣಿ ಅವರ ಬಾಗಲಕೋಟೆಯಲ್ಲಿ 2 ವಾಸದ ಮನೆಗಳು,
1 ಕಾರು, 1 ಬೈಕ್, 334 ಗ್ರಾಂ ಚಿನ್ನ, 1.2 ಕೆ.ಜಿ ಬೆಳ್ಳಿ ವಿವಿಧ ಬ್ಯಾಂಕ್ ಗಳಲ್ಲಿ 2.88 ಲಕ್ಷ ನಗದು ಹಾಗೂ 5 ಲಕ್ಷ ಮೌಲ್ಯದ ಗೃಹಯೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಸದ್ಯ ದಾಖಲಿಸಿಕೊಂಡಿರುವ ಪ್ರಕರಣಗಳಲ್ಲಿ ತನಿಖೆ ಮುಂದುವರೆದಿದ್ದು, ಸರಕಾರಿ ನೌಕರರು ಹೊಂದಿರುವ ಆಸ್ತಿ ಹಾಗೂ ಬ್ಯಾಂಕ್ ಲಾಕರ್ ಗಳ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸಿಬಿ ತಿಳಿಸಿದೆ.