ಮಂಡ್ಯ ಜಿಲ್ಲೆಯಲ್ಲಿ ಘಟಿಸಿದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವು…
ಮಂಡ್ಯ: ಸಕ್ಕರೆನಾಡು ಮಂಡ್ಯ ನಿನ್ನೆ ಜನರ ಪಾಲಿಗೆ ಕರಾಳ ಭಾನುವಾರವಾಗಿತ್ತು. ಜಿಲ್ಲೆಯಲ್ಲಿ ಘಟಿಸಿದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಏಳು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನಾಗಮಂಗಲ ತಾಲೂಕಿನ ಬೀರನಹಳ್ಳಿಯಲ್ಲಿ ಕೆರೆ ನೀರಿಗೆ ಬಿದ್ದು ಮೂವರು, ಚೋಳಸಂದ್ರ ಗ್ರಾಮದಲ್ಲಿ ಇಬ್ಬರು ಮತ್ತು ಕೆ.ಆರ್.ಪೇಟೆ ತಾಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಜಾನುವಾರುಗಳ ಮೈ ತೊಳೆಯಲು ಹೋಗಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.
ಬಟ್ಟೆ ತೊಳೆಯಲು ಹೋಗಿ ಆಕಸ್ಮಿಕವಾಗಿ ಕೆರೆ ನೀರಿಗೆ ಬಿದ್ದು ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಾಗಮಂಗಲ ತಾಲೂಕಿನ ಬೋಗಾದಿ ಗ್ರಾಮ ಪಂಚಾಯತ್ ನ ಬೀರನಹಳ್ಳಿ ಗ್ರಾಮದ ಗೀತಾ ನರಸಿಂಹಯ್ಯ ಮತ್ತು ಮಕ್ಕಳಾದ ಸವಿತ, ಸೌಮ್ಯ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಗೀತಾ ಅವರು ತನ್ನ ಮಕ್ಕಳೊಂದಿಗೆ ಗ್ರಾಮದ ಹತ್ತಿರವಿರುವ ಸಣ್ಣಯ್ಯನ ಕಟ್ಟೆಗೆ ಬಟ್ಟೆ ತೊಳೆಯಲು ಹೋಗಿದ್ದರು.
ಈ ವೇಳೆ ಮಗಳು ಕಾಲು ಜಾರಿ ಕೆರೆಗೆ ಬಿದ್ದಿದ್ದಾಳೆ ಎನ್ನಲಾಗಿದೆ. ಅವಳನ್ನು ರಕ್ಷಿಸಲು ಹೋದಾಗ ತಾಯಿ ಗೀತಾ ಮತ್ತು ಇನ್ನೊಬ್ಬಳು ಮಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಇನ್ನು ಬೆಳ್ಳೂರು ಹೋಬಳಿಯ ಚೋಳಸಂದ್ರ ಗ್ರಾಮದಲ್ಲಿ ಬಟ್ಟೆ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಗ್ರಾಮದ ಗಂಗಾಧರಯ್ಯರವರ ಪುತ್ರಿ ರಶ್ಮಿ ಮತ್ತು ಮೃತ ಯುವತಿಯ ಅಕ್ಕನ ಮಗಳಾದ ಇಂಚರ ಮೃತಪಟ್ಟವರು.
ತಾಲೂಕಿನ ಯಲದಹಳ್ಳಿ ಗ್ರಾಮದ ಸಮೀಪವೇ ಇರುವ ಯಲಾದಳ್ಳಿ ಕೆರೆಯಲ್ಲಿ ಘಟನೆ ನಡೆದಿದೆ.
ಈ ಸಂಬಂದ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತು ಹೇಮಾವತಿ ನಾಲೆಯಲ್ಲಿ ಜಾನುವಾರುಗಳ ಮೈ ತೊಳೆಯಲು ಹೋಗಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಹುರುಳಿ ಗಂಗನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಘಟನೆ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.