ಆಗಸ್ಟ್ ನಲ್ಲಿ ರಾಜ್ಯದಲ್ಲಿ ಶಾಲೆಗಳು ಆರಂಭ : ಸಚಿವ ಸುರೇಶ್ ಕುಮಾರ್
ಉಡುಪಿ :ಸದ್ಯಕ್ಕಂತೂ ಶಾಲೆ ಆರಂಭ ಮಾಡೋ ವಿಚಾರ ಸರ್ಕಾರದ ಮುಂದೆ ಇಲ್ಲ ಆದರೆ ಬಹುತೇಕ ಆಗಸ್ಟ್ ನಂತರ ರಾಜ್ಯದಲ್ಲಿ ಶಾಲೆಗಳು ಆರಂಭವಾಗಬಹುದು ಎಂದು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಹೇಳಿದ್ದಾರೆ. ಕೃಷ್ಣನಗರಿ ಉಡುಪಿಗೆ ಆಗಮಿಸಿದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಉಡುಪಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಪರೀಕ್ಷೆ, ಆನ್ಲೈನ್ಶಿಕ್ಷಣ ಮತ್ತು ಶಾಲೆ ತೆರೆಯುವ ವಿಚಾರವಾಗಿ ಚರ್ಚಿಸಿದರು.
ಕೊರೋನಾ ಲಾಕ್ಡೌನ್ ಹಿನ್ನೆಲೆ ಎಸ್ಎಸ್ಎಲ್ಸಿ ಎಕ್ಸಾಮ್ ಮುಂದೂಡಲಾಯ್ತು. ಈಗ ಲಾಕ್ಡೌನ್ ನಿಯಮ ಸಡಿಲಿಸಲಾಗಿದ್ದು, ಕೇಂದ್ರ ಗೃಹ ಇಲಾಖೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಅನುಮತಿ ನೀಡಿದೆ.
ಪರೀಕ್ಷೆ ನಡೆಸುವ ಬಗ್ಗೆ ಶಿಕ್ಷಣ ತಜ್ಞರು, ಪರಿಣಿತರ ಜೊತೆ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಜೂನ್ 25ಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭಗೊಳ್ಳಲಿದೆ. ಮಕ್ಕಳ ಹಿತ ಮತ್ತು ಸುರಕ್ಷತೆ ಗಮನದಲ್ಲಿಟ್ಟು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷಾ ಕೊಠಡಿಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗಿದೆ.
ಒಂದು ಕೊಠಡಿಯಲ್ಲಿ ಕೇವಲ 18 ಮಂದಿ ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತೆ. ವಿದ್ಯಾರ್ಥಿಗಳ ಮಧ್ಯೆ ಹಾಗೂ ಡೆಸ್ಕ್ ಡೆಸ್ಕ್ಗಳ ಮಧ್ಯೆ ಮೂರುವರೆ ಅಡಿ ಅಂತರ ಇರುವಂತೆ ಸೆಟ್ ಮಾಡಲಾಗುತ್ತೆ. ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ನಾಡಲಾಗುತ್ತೆ.
ವಿದ್ಯಾರ್ಥಿಗಳಿಗೆ ಆತಂಕಬೇಡ. ವಲಸೆ ಕಾರ್ಮಿಕರ ಮಕ್ಕಳಿಗೆ ಎರಡು ಆಯ್ಕೆ ಇದೆ. ಅವರು ಊರಲ್ಲೂ ಪರೀಕ್ಷೆ ಬರೆಯಬಹುದು ಅಥವಾ ಮೂಲ ಸೆಂಟರ್ನಲ್ಲೂ ಪರೀಕ್ಷೆ ಬರೆಯಬಹುದು ಎಂದು ತಿಳಿಸಿದರು.
ಇನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಿರ್ದೇಶನದಂತೆ, ಇನ್ನು ಎಲ್ಕೆಜಿ, ಯುಕೆಜಿ, ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್ಲೈನ್ಶಿಕ್ಷಣ ಒಳಿತಲ್ಲ. ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀಳಬಹುದು.
ಯಾವಾಗ ಶಾಲೆ ಪ್ರಾರಂಭ ಆಗಬೇಕು?ಶಾಲೆಗಳನ್ನು ಹೇಗೆ ನಡೆಸಬೇಕು? ಪೋಷಕರ ಮನಸ್ಸಿನಲ್ಲಿ ಏನಿದೆ? ಎನ್ನುವ ಮೂರು ಪ್ರಶ್ನೆಗಳಿಗೆ ಅನುಗುಣವಾಗಿ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.
ಸದ್ಯಕ್ಕಂತೂ ಶಾಲೆ ಆರಂಭ ಮಾಡೋದಿಲ್ಲ. ಬಹುತೇಕ ಆಗಸ್ಟ್ ನಂತರ ರಾಜ್ಯದಲ್ಲಿ ಶಾಲೆಗಳು ಆರಂಭವಾಗಬಹುದು ಎಂದರು.
ನನಗೆ ಸರಕಾರಿ ಶಾಲೆಗಳ ಬಗ್ಗೆ ಮಾತ್ರ ಸಾಫ್ಟ್ ಕಾರ್ನರ್ ಇದೆ. ಇನ್ಯಾವ ಬಗ್ಗೆಯೂ ಸಾಫ್ಟ್ ಕಾರ್ನರ್ ಇಲ್ಲ. ನನಗೆ ಶಿಕ್ಷಣ ಇಲಾಖೆಯ ಋಣ ಇದೆ. ನನ್ನ ತಾಯಿ ಸರಕಾರಿ ಶಾಲೆಯ ಶಿಕ್ಷಕಿ. ಆ ಕಾರಣದಿಂದ ನನಗೆ ಈ ಅರ್ಹತೆ ಬಂದಿದೆ.
ಯಾವುದೇ ಲಾಬಿ, ಒತ್ತಡಗಳಿಗೆ ನಾನು ಮಣಿಯೋದಿಲ್ಲ. ಲಾಬಿಗಳಿಗೆ ಶರಣಾಗುವ ಪ್ರಶ್ನೆ ಇಲ್ಲ. ನನ್ನ ಆದ್ಯತೆ ಸರಕಾರಿ ಶಾಲೆಗಳ ಸಬಲೀಕರಣ. ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವಂತೆ ಮಾಡುತ್ತೇವೆ.
ಬಡವರ, ಕೂಲಿ ಕಾರ್ಮಿಕರ ದುಡಿಮೆಯ 40% ಹಣ ಉಳಿಸುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.