ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಜೀವ ರಕ್ಷಿಸಿಕೊಳ್ಳಲು 5 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈವರೆಗೆ, ಪ್ರವಾಹ ಸಂಬಂಧಿತ ಅವಘಡಗಳಲ್ಲಿ ಒಟ್ಟು 7 ಮಂದಿ ಸಾವಿಗೀಡಾಗಿದ್ದು,
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಭೀಕರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಜಗತ್ತಿನ ಬೃಹತ್ ನದಿಗಳಲ್ಲೊಂದಾದ ಬ್ರಹ್ಮಪುತ್ರ, ಕಳೆದ ಮೂರು ದಿನಗಳಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಇಂದೂ ಅಸ್ಸಾಂನದ್ಯಾಂತ ಮಳೆ ಮುಂದುವರಿದಿದ್ದು, ಮುಂದಿನ ಎರಡು ದಿನ ಮತ್ತಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
‘ಪ್ರವಾಹದಿಂದ ರಾಜ್ಯದಲ್ಲಿ 5 ಲಕ್ಷ ಮಂದಿ ತೊಂದರೆಗೀಡಾಗಿದ್ದಾರೆ. ಗಂಟೆ ಗಂಟೆಗೂ ಪ್ರವಾಹ ಪರಿಸ್ಥಿತಿ ಬಿಗಡಾಯಿಸುತ್ತಿದೆ’ ಎಂದು ಅಸ್ಸಾಂ ಜಲ ಸಂಪನ್ಮೂಲ ಸಚಿವ ಪಿಜೂಷ್ ಹಜಾರಿಕ ಹೇಳಿದ್ದಾರೆ.
ಹೊಜಾಯ್ ಜಿಲ್ಲೆಯ ಪ್ರವಾಹದಲ್ಲಿ ಸಿಲುಕಿದ್ದ 2,000 ಕ್ಕೂ ಹೆಚ್ಚು ಜನರನ್ನು ಭಾರತೀಯ ಸೇನೆ ರಕ್ಷಿಸಿದೆ.
ಪ್ರವಾಹ ಮತ್ತು ಭೂಕುಸಿತದಿಂದಾಗಿ ರಸ್ತೆ ಹಾಗೂ ರೈಲು ಸಂಚಾರ ಸ್ಥಗಿತಗೊಂಡಿದೆ’ ಎಂದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಜೊಗೆನ್ ಮೋಹನ್ ತಿಳಿಸಿದ್ದಾರೆ.