ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಮೊದಲ ಬಲಿ; ಕಂಪೌಂಡ್ ಗೋಡೆ ಕುಸಿದು ಸಾವು….
ಮಂಗಳೂರು/ಉಡುಪಿ: ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇಂದು (ಜೂನ್ 13) ಕೂಡ ಮಳೆ ಮುಂದುವರೆದಿದೆ.
ಕೃಷ್ಣನಗರಿ ಉಡುಪಿಯಲ್ಲೂ ಎಡೆಬಿಡದೆ ಮಳೆರಾಯನ ಅಬ್ಬರ ಜೋರಾಗಿದೆ. ನಾಳೆಯವರೆಗೆ ಕರಾವಳಿ ಪ್ರದೇಶಗಳಲ್ಲಿ ಮಳೆ ಮುಂದುವರೆಯುವ ಕುರಿತು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಮೊದಲ ಬಲಿಯಾಗಿದ್ದು, ಮಂಗಳೂರು ಹೊರವಲಯದ ಗುರುಪುರ ಮಠದಗುಡ್ಡೆ ನಿವಾಸಿ ನಾರಾಯಣ ನಾಯ್ಕ(52) ಎಂಬವರು ನಿನ್ನೆ ಸಂಜೆ ಮನೆಯ ಕಂಪೌಂಡ್ ಗೋಡೆ ಕುಸಿದು ಮೃತಪಟ್ಟಿದ್ದಾರೆ.
ಖಾಸಗಿ ಬಸ್ ಏಜೆಂಟ್ ಆಗಿದ್ದ ನಾರಾಯಣ ನಾಯ್ಕ್ ಅವರು ಮನೆ ಕಂಪೌಂಡ್ ಬಳಿ ತುಂಬಿದ್ದ ನೀರು ಹರಿದು ಹೋಗಲೆಂದು ಕೆಲಸ ಮಾಡುತ್ತಿದ್ದಾಗ ಏಕಾಏಕಿಯಾಗಿ ತಡೆಗೋಡೆ ಕುಸಿದಿದ್ದು, ಅದರ ಅಡಿಗೆ ಬಿದ್ದಿದ್ದಾರೆ.
ಕೂಡಲೇ ಮನೆ ಮಂದಿ ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೂ ಚಿಕಿತ್ಸೆಗೆ ಸ್ಪಂದಿಸದೇ ನಾರಾಯಣ ಅವರು ಸಾವನ್ನಪ್ಪಿದ್ದಾರೆ.
ಇನ್ನು ಮಂಗಳೂರು ಬೆಂಗ್ರೆಯ ಅಳಿವೆಬಾಗಿಲು ಬಳಿಯ ರಾಣಿ ಅಬ್ಬಕ್ಕ ಪಾರ್ಕ್ ಹತ್ತಿರ ಇರುವ ಮನೆಯೊಂದಕ್ಕೆ, ಬೀಸಿದ ಬಲವಾದ ಗಾಳಿಗೆ ತೆಂಗಿನ ಮರ ಬಿದ್ದು ಮನೆಯು ಭಾಗಶಃ ಜಖಂ ಆಗಿದೆ.
ಇನ್ನು ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಹಾನಿಯಾಗಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ತಾಲೂಕಿನ ಗ್ರಾಮೀಣ ಭಾಗದ ಅನೇಕ ಮನೆಗಳು ಸಂಪೂರ್ಣ ಜರಿದುಬಿದ್ದರೆ ಕೆಲವೊಂದು ಮನೆಗಳು ಭಾಗಶಃ ಹಾನಿಯಾಗಿದೆ.
ಕಾವಳಪಡೂರು ಗ್ರಾಮದ ಕಮಲ , ಪಂಜಿಕಲ್ಲು ಗ್ರಾಮದ ಭೋಜಪೂಜಾರಿ ಅವರ ಮನೆಗೂ ಹಾನಿಯಾಗಿದೆ.
ಕಾರಿಂಜ ಕ್ರಾಸ್ ನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಿದ್ದು ಹಾನಿಯಾಗಿದೆ.