ಕೊಣಾಜೆ ಗ್ರಾಮದಲ್ಲಿ ಹಲವೆಡೆ ಮಳೆಯ ಅವಾಂತರ…
ಮಂಗಳೂರು:ಕರಾವಳಿಯಲ್ಲಿ ಮುಂಗಾರು ಮಳೆ ಅಬ್ಬರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಭಾರಿ ಗಾಳಿ ಮಳೆಯಾಗಿದೆ, ಇದರ ಪರಿಣಾಮ ಹಲವು ಕಡೆ ಅನೇಕ ಸಮಸ್ಯೆಗಳು ಅಪಾರ ನಷ್ಟ ಸಂಭವಿಸಿದೆ.
ಕೊಣಾಜೆ ಗ್ರಾಮದ ಪಟ್ಟೋರಿ ಹಾಗೂ ಪುಳಿಂಚಾಡಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ಸುರಿದ ಭಾರೀ ಮಳೆಗೆ ತಡೆಗೋಡೆ ಕುಸಿದು ಬಿದ್ದು ಎರಡು ಮನೆಗಳಿಗೆ ಅಪಾರ ಹಾನಿಯಾದ ಘಟನೆ ನಡೆದಿದೆ.
ಪಟ್ಟೋರಿಯಲ್ಲಿ ಶಾಂತಪ್ಪ ಎಂಬವರ ಬಾಡಿಗೆ ಮನೆಯಲ್ಲಿ ತಿರುಮಲ ಸ್ವಾಮಿ ಅವರ ಕುಟುಂಬ ವಾಸವಾಗಿತ್ತು.
ಭಾನುವಾರ (ಜೂನ್ 14) ಬೆಳಿಗ್ಗೆ ಸುರಿದ ಭಾರೀ ಮಳೆಗೆ ಮನೆಯಲ್ಲಿ ಮನೆಮಂದಿ ಇರುವಾಗಲೇ ತಡೆಗೋಡೆಯು ಕುಸಿದು ಮನೆಯ ಮೆಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ.
ಈ ಸಂದರ್ಭದಲ್ಲಿ ಮನೆಯೊಳಗಿದ್ದ ಸದಸ್ಯರು ಮನೆಯಿಂದ ಹೊರಗೆ ಓಡಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ.
ಇನ್ನು ತಡೆಗೋಡೆ ಕುಸಿದು ಅತಂತ್ರ ಸ್ಥೀತಿಯಲ್ಲಿರುವ ಪಟ್ಟೋರಿಯ ತಿರುಮಲ ಸ್ವಾಮಿಯವರ ಕುಟುಂಬಕ್ಕೆ ಅಸೈಗೋಳಿಯ ಪ್ರಕಾಶ್ ಶೆಟ್ಟಿಯವರು ಬೇರೆ ಕಡೆ ಆಶ್ರಯ ಕಲ್ಪಿಸಿ ಸಹಾಯ ಮಾಡಿದ್ದಾರೆ.
ಇತ್ತ ಪುಳಿಂಚಾಡಿಯ ಆಂಟೊನಿ ವಿನ್ಸೆಂಟ್ ಲೋಬೋ ಅವರ ಮನೆಗೆ ಕೂಡಾ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಪಕ್ಕದ ಮನೆಯ ತಡೆಗೋಡೆ ಕುಸಿದ ಪರಿಣಾಮ ಹಾನಿಗೊಂಡಿದೆ.
ಗೋಡೆ ಬಿರುಕು ಬಿಟ್ಟು ಮನೆಗೆ ಅಪಾರ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಗ್ರಾಮ ಕರಣಿಕ ಪ್ರಸಾದ್, ಪಂಚಾಯಿತಿ ಅಧ್ಯಕ್ಷ ನಝರ್, ಸದಸ್ಯರಾದ ರವಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಮುಂಗಾರು ಮಳೆಯ ಅಬ್ಬರಕ್ಕೆ ಉಳ್ಳಾಲದಲ್ಲಿ ಕಡಲಬ್ಬರ ಜೋರಾಗಿಯೇ ಇದೆ. ಬೃಹತ್ ಗಾತ್ರದ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿವೆ.
ಸಮುದ್ರ ತೀರದ ಪ್ರದೇಶಗಳಾದ ಕೈಕೋ, ಕಿಲಿರಿಯಾನಗರ, ಮೊಗವೀರಪಟ್ನ, ಕೋಡಿ, ಕೋಟೆಪುರ, ಉಚ್ಚಿಲ, ಸೋಮೇಶ್ವರ ಸಮುದ್ರ ದಂಡೆಗೆ ಅಲೆಗಳು ಅಪ್ಪಳಿಸುತ್ತಿವೆ.
ಕೆಲವೆಡೆ ಈ ಬಾರಿ ಬಮ್ಸ್ ಹಾಗೂ ತಾತ್ಕಾಲಿಕ ಕಲ್ಲುಗಳನ್ನು ಹಾಕಿರುವ ಹಿನ್ನಲೆ ಪ್ರತಿವರ್ಷ ಹಾನಿಗೊಳಗಾಗುತ್ತಿರುವ ಮನೆಗಳು ಸುರಕ್ಷಿತವಾಗಿವೆ.
ಆದರೆ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಸ್ಥಳಿಯಾಡಳಿತ ಸೂಚಿಸಿದೆ.