ತವರಿಗೆ ಹೊರಟ ಅನಿವಾಸಿ ಕನ್ನಡಿಗರಿಗೆ ಸೋಶಿಯಲ್ ಫೋರಂನಿಂದ ಆಹಾರ, ಆರೋಗ್ಯ ಸುರಕ್ಷಾ ಕಿಟ್ ವಿತರಣೆ..
ಜಿದ್ದಾ: ಹಲವು ಗರ್ಭಿಣಿ ಸ್ತ್ರೀಯರು ಮತ್ತು ಕಾಯಿಲೆ ಪೀಡಿತ ಅನಿವಾಸಿ ಕನ್ನಡಿಗರ ವಾಪಾಸಾತಿಗಾಗಿ ಇಂಡಿಯನ್ ಸೋಶಿಯಲ್ ಫೋರಂ ಜಿದ್ದಾ, ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಮನವಿ ಮಾಡಿತ್ತು.
ಕಳೆದ ಎರಡು ತಿಂಗಳುಗಳಿಂದ ಈ ಉದ್ದೇಶಕ್ಕಾಗಿ ಇಂಡಿಯನ್ ಸೋಶಿಯಲ್ ಫ಼ೋರಂ ನಾಯಕರು ಮತ್ತು ಕಾರ್ಯಕರ್ತರು ಅವಿರತವಾಗಿ ಪ್ರಯತ್ನಪಟ್ಟಿದ್ದರು.
ಇದರ ಫ಼ಲವಾಗಿ ಇದೀಗ ಅವರಲ್ಲಿ ಹಲವರು ಈ ವಿಮಾನದ ಮೂಲಕ ತವರಿಗೆ ಮರಳಿದ್ದಾರೆ.
ತಬೂಕ್ ಪ್ರಾಂತ್ಯದಿಂದ ಮಂಗಳೂರು ಮೂಲದ ನಾಲ್ಕು ಮಂದಿ ಗರ್ಭಿಣಿ ಸ್ತ್ರೀಯರು,
ಮಕ್ಕಳು ಮತ್ತು ತೀವ್ರ ಅನಾರೋಗ್ಯ ಪೀಡಿತರಾಗಿದ್ದ ಜಿದ್ದಾದ ಅನಿಲ್ ಡಿಸೋಝ ಎಂಬವರು ಈ ವಿಮಾನದ ಮೂಲಕ ತವರಿಗೆ ಹೊರಟಿದ್ದಾರೆ.
ಸೌದಿ ಅರೇಬಿಯಾದಲ್ಲಿ ಕೋವಿಡ್ 19 ಲಾಕ್ ಡೌನ್ ಆರಂಭವಾದಂದಿನಿಂದ ಇಂಡಿಯನ್ ಸೋಶಿಯಲ್ ಫೋರಂ,
ಇಲ್ಲಿ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರಿಗಾಗಿ ನಿರಂತರ ಪರಿಹಾರ ಕಾರ್ಯಗಳನ್ನು ನಡೆಸುತ್ತಿದ್ದು, ಸುಮಾರು 11000 ಮಂದಿಗೆ ಕಿಟ್ ವಿತರಿಸಿದೆ.
ಅಗತ್ಯವಿದ್ದವರಿಗೆ ವೈದ್ಯಕೀಯ ಸಲಹೆ ಸೂಚನೆಗಳನ್ನು ಒದಗಿಸಿದೆ.
ಇಂದು (ಜೂನ್ 13) ಪ್ರಯಾಣಿಕರ ಬೀಳ್ಕೊಡುಗೆಯ ಸಂಧರ್ಭದಲ್ಲಿ ಐ.ಎಸ್.ಎಫ್ ಅಧ್ಯಕ್ಷರಾದ ಕಲಂದರ್ ಸೂರಿಂಜೆ,
ಕಾರ್ಯಕರ್ತರಾದ ಮುಸ್ತಫಾ, ರಷೀದ್ ಕಿನ್ನಿಗೋಳಿ, ರಫೀಕ್ ಬುಡೋಳಿ, ಆಸಿಫ್ ಮೂಳೂರು , ಆಸೀಫ್ ಗಂಜಿಮಠ, ಹಫೀಝ್ ಮುಂತಾದವರು ಉಪಸ್ಥಿತರಿದ್ದರು.
ಇನ್ನು ಜಿದ್ದಾ-ಬೆಂಗಳೂರು ವಿಮಾನ ಮೂಲಕ ಹೊರಟ ಅನಿವಾಸಿ ಕನ್ನಡಿಗರಿಗೆ ಇಂಡಿಯನ್ ಸೋಶಿಯಲ್ ಫೋರಂ ಜಿದ್ದಾ ವತಿಯಿಂದ ಆಹಾರ ಮತ್ತು ಆರೋಗ್ಯ ಸುರಕ್ಷಾ ಸಾಮಾಗ್ರಿಗಳನ್ನೊಳಗೊಂಡ ಕಿಟ್ ಗಳನ್ನು ವಿತರಿಸಲಾಯಿತು.
ಇದರಲ್ಲಿ ಕೋವಿಡ್ 19 ಹರಡುವಿಕೆಯನ್ನು ತಡೆಗಟ್ಟುವ ಆರೋಗ್ಯ ಸುರಕ್ಷಾ ಕಿಟ್ ಮಾಸ್ಕ್, ಕೈಕವಚ, ಸ್ಯಾನಿಟೈಸರ್ ಮುಂತಾದ ಸಾಮಾಗ್ರಿಗಳು ಒಳಗೊಂಡಿದ್ದವು.