ಕಾಸರಗೋಡು ಗಡಿನಾಡ ಕನ್ನಡಿಗರಿಗೆ ಮಂಗಳೂರು ಎಂಟ್ರಿಗೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್..!
ಮಂಗಳೂರು: ಕೋವಿಡ್-19 ಲಾಕ್ ಡೌನ್ ನಿಂದ ಅಡ್ಡಿಯಾಗಿರುವ ಮಂಗಳೂರು – ಕಾಸರಗೋಡಿನ ಮಧ್ಯೆಯ ನಿತ್ಯ ಸಂಚಾರಕ್ಕೆ ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದ್ದು,
ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರ್ಕಾರಿ ನೌಕರರು ದಿನ ನಿತ್ಯದ ಪಾಸ್ ಬಳಸಿ ನಿತ್ಯ ಸಂಚರಿಸಲು ಅವಕಾಶ ಕಲ್ಪಿಸಿ,
ಇಂದು (ಜೂನ್ 3) ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಆದೇಶಿಸಿದ್ದಾರೆ.
ಕಾಸರಗೋಡಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಕಾಸರಗೋಡು ಗಡಿಯನ್ನು ಬಂದ್ ಮಾಡಿತ್ತು.
ಲಾಕ್ ಡೌನ್ 5.0 ದಲ್ಲಿ ಕೇಂದ್ರ ಸರಕಾರ ಅಂತರ್ ರಾಜ್ಯ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಹಿನ್ನಲೆ ಕಾಸರಗೋಡು ದಕ್ಷಿಣ ಕನ್ನಡ ಸಂಚಾರಕ್ಕೆ ಅವಕಾಶ ನೀಡಲು ರಾಜ್ಯ ಸರಕಾರಗಳನ್ನು ಆಗ್ರಹಿಸಿದ್ದರು.
ಕಾಸರಗೋಡಿನಲ್ಲಿರುವ ಬಹಳಷ್ಟು ಗಡಿನಾಡ ಕನ್ನಡಿಗರು ಉದ್ಯೋಗ, ಶಿಕ್ಷಣ ನಿಮಿತ್ತ ದಿನನಿತ್ಯ ಮಂಗಳೂರಿಗೆ ಸಂಚರಿಸುತ್ತಾರೆ.
ಈ ಹಿನ್ನಲೆ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳ ನಡುವೆ ಒಪ್ಪಂದ ನಡೆದಿದ್ದು, ಅದರಂತೆ ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರ್ಕಾರಿ ನೌಕರರಿಗಷ್ಟೇ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಉದ್ಯೋಗಿಗಳು Dkdpermit ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿ ಪಾಸ್ ಪಡೆಯಲು ಸೂಚನೆ ನೀಡಲಾಗಿದೆ.
ಜಿಲ್ಲಾಡಳಿತ ನೀಡುವ ಈ ಪಾಸ್ ನ್ನು ಉದ್ಯೋಗ ಹೊರತು ಅನ್ಯ ಕಾರ್ಯಕ್ಕೆ ಪಾಸ್ ಬಳಸಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಅಲ್ಲದೆ ಗಡಿಯಲ್ಲಿ ನಿತ್ಯ ಥರ್ಮಲ್ ಸ್ಕ್ಯಾನ್ ಮತ್ತು ಆರೋಗ್ಯ ತಪಾಸಣೆ ಕಡ್ಡಾಯ ಮಾಡಲಾಗಿದೆ. ದಿನ ನಿತ್ಯ ಪಾಸ್ ಗೆ ಅರ್ಜಿ ಸಲ್ಲಿಸಲು ಆಧಾರ್, ಉದ್ಯೋಗ ವಿಳಾಸ, ಮಾಹಿತಿ ಸಲ್ಲಿಸುವುದು ಕಡ್ಡಾಯ.