ಲಾಕ್ ಡೌನ್ ಅವಧಿಯಲ್ಲಿ ತಡೆಗೋಡೆ ನಿರ್ಮಾಣ: ಪಣಂಬೂರು ಗ್ರಾಮಸ್ಥರ ಕಾರ್ಯಕ್ಕೆ ಶ್ಲಾಘನೆ…
ಮಂಗಳೂರು: ಲಾಕ್ ಡೌನ್ ಅವಧಿಯಲ್ಲಿ ಎಲ್ಲರೂ ಕೊರೋನಾದಿಂದ ಜೀವ ಉಳಿಸಲು ಮನೆಯಲ್ಲಿದ್ರೆ, ಇವರು ಮಾತ್ರ ಊರು ಉಳಿಸಲು ಪಣ ತೊಟ್ಟಿದ್ರು.
ಕಳೆದ ವರ್ಷ ಕಡಲ ಕೊರೆತದಿಂದ ತಮ್ಮ ಊರು ನಾಶವಾಗುತ್ತಿರುವುದನ್ನು ಕಣ್ಣಾರೆ ಕಂಡಿದ್ದ ಜನರು, ಈ ಬಾರಿ ಸಮುದ್ರಕ್ಕೆ ಅಡ್ಡಲಾಗಿ ತಡೆಗೋಡೆ ನಿರ್ಮಾಣಕ್ಕೆ ಇಳಿದಿದ್ದಾರೆ.
ಹೇಳಿ ಕೇಳಿ ಕಡಲ ನಗರಿ ಮಂಗಳೂರಿನಲ್ಲಿ ಕಡಲಕೊರೆತ ಸಾಮಾನ್ಯವಾಗಿ ಕಾಡೋ ಸಮಸ್ಯೆ..
ಕಡಲಂಚಿನ ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡೋ ಕಡಲ ಕೊರೆತಕ್ಕೆ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ.
ಕಡಲಕೊರೆತ ಪ್ರತೀ ವರ್ಷದ ಸಮಸ್ಯೆಯಾದರೂ ಇನ್ನು ಕಡಲ ತೀರದಲ್ಲಿ ಸಂಪೂರ್ಣವಾಗಿ ತಡೆಗೋಡೆ ನಿರ್ಮಿಸಿಲ್ಲ.
ಹೀಗಾಗಿ ಸಮುದ್ರ ತೀರದಲ್ಲಿ ಗೂಡು ಕಟ್ಟಿಕೊಂಡಿರುವ ಕಡಲ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಮಂಗಳೂರಿನ ಚಿತ್ರಾಪುರ ಗ್ರಾಮದಲ್ಲೂ ಇದೇ ಸಮಸ್ಯೆಯಿದೆ.
ಕಳೆದ ವರ್ಷ ಸಮುದ್ರ ಕೊರೆತದಿಂದ ಪಣಂಬೂರ್ ಕುಳಾಯಿ ಮೊಗವೀರ ಸಭಾ ವ್ಯಾಪ್ತಿಯಲ್ಲಿ 350 ಆವರಣ ಗೋಡೆ, 50 ಮೀ ಜಾಗ, ತೆಂಗಿನ ಮರ, ಮೀನು ಒಣಗಿಸಲು ಬಳಸುವ ಚಾಚೆ ಇತ್ಯಾದಿ ಸಂಪೂರ್ಣವಾಗಿ ಸಮುದ್ರ ಪಾಲಾಗಿತ್ತು.
ಈ ಭಾಗದಲ್ಲಿ 115 ಕುಟುಂಬಗಳು ವಾಸಿಸುತ್ತಿದ್ದು, ಸಮುದ್ರ ಕೊರೆತ ಬಹುದೊಡ್ಡ ಸಮಸ್ಯೆಯಾಗಿಬಿಟ್ಟಿದೆ.
ಕಳೆದ ವರ್ಷ ಸಮದ್ರ ಕೊರೆತದಿಂದ ಚಿತ್ರಾಪುರ ಪಣಂಬೂರು ಸಮುದ್ರದಂಚಿನ ಜನರಿಗಾದ ನಷ್ಟಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ.
ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಈ ಬಗ್ಗೆ ತಿಳಿಸಿದಕ್ಕೆ ಮಳೆಗಾಲದ ಒಳಗಾಗಿ ತಡೆಗೋಡೆ ನಿರ್ಮಿಸುವ ಭರವಸೆಯೇನೋ ನೀಡಿದ್ರು.
ಆದ್ರೆ ಅದು ಭರವಸೆಯಾಗೆ ಉಳಿದಿದೆ. ಹೀಗಾಗಿ ಈ ವರ್ಷ ಮತ್ತೆ ಕಡಲಕೊರೆತ ಸಂಭವಿಸಿದರೆ ಗತಿಯೇನು ಎಂಬ ಭಯದಿಂದ ಊರವರು ಸೇರಿ ಊರುಳಿಸುವ ನಿರ್ಧಾರಕ್ಕೆ ಬಂದ್ರು.
ಪಣಂಬೂರ್ ಕುಳಾಯಿ ಮೊಗವೀರ ಸಭಾದ ಸದಸ್ಯರು, ಮಹಿಳಾ ಮೊಗವೀರ ಸಭಾ ಮತ್ತು ಊರವರೆಲ್ಲರೂ ಸೇರಿ ಕಳೆದ 18 ದಿವಸಗಳಿಂದ ತಡೆಗೋಡೆಯನ್ನು ನಿರ್ಮಿಸುತ್ತಿದ್ದಾರೆ.
ಇನ್ನು ಗೋಣಿಚೀಲದ ಈ ತಡೆಗೋಡೆ ನಮಗೆ ರಕ್ಷಣೆ ಕೊಡುವ ಭರವಸೆಯಿದೆ ಅಂತಾರೆ ಮೊಗವೀರ ಸಭಾ ಅಧ್ಯಕ್ ಪಿ. ಮಾಧವ….
ಅಂದಹಾಗೆ ಯಾವುದೇ ವೇತನವಿಲ್ಲದೆ ಗ್ರಾಮಸ್ಥರು ಊರು ಉಳಿಸುವ ಸಲುವಾಗಿ ಶ್ರಮಿಸುತ್ತಿದ್ದಾರೆ.
ಸುಮಾರು 350 ಮೀಟರ್ ಉದ್ದಕ್ಕೆ ತಡೆಗೋಡೆ ನಿರ್ಮಾಣ ಮಾಡುತ್ತಿದ್ದಾರೆ. 8 ಅಡಿ ಆಳ, 3 ಅಡಿ ಎತ್ತರಕ್ಕೆ ಮರಳು ಮತ್ತು ಸಿಮೆಂಟ್ನ ಜಂಬೋ ಬ್ಯಾಗ್ ಅನ್ನು ನೈಲಾನ್ ವಯರ್ನಿಂದ ಬಿಗಿದು ತಡೆಗೋಡೆ ನಿರ್ಮಿಸಿದ್ದಾರೆ.
ಇನ್ನು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದು, ತಡೆಗೋಡೆ ನಿರ್ಮಾಣದ ಖರ್ಚು ವೆಚ್ಚ ನೀಡುವ ಭರವಸೆ ನೀಡಿದ್ದಾರೆ.
ಒಟ್ಟಾರೆ.. ಸರ್ಕಾರ ಮಾಡಬೇಕಾದ ಕೆಲಸವನ್ನು ಯಾವ ನಿರೀಕ್ಷೆಯೂ ಇಲ್ಲದೆ ಗ್ರಾಮಸ್ಥರು ಮಾಡಿ ತೋರಿಸಿದ್ದಾರೆ.
ಎರಡು ಕೈ ಸೇರಿದರೆ ಚಪ್ಪಾಳೆ ಅನ್ನೋದಕ್ಕೆ ಪಣಂಬೂರು ಸಾಕ್ಷಿಯಾಗಿದೆ. ಇನ್ನಾದ್ರೂ ಕಡಲ ಕೊರೆತ ಶಾಶ್ವತವಾಗಿ ನಿಂತು ಜನರು ನೆಮ್ಮದಿಯಿಂದ ದಿನದೂಡುವಂತಾಗಲಿ ಅನ್ನೋದೆ ನಮ್ಮ ಆಶಯ….
ಗಣೇಶ್ ಪೂಜಾರಿ…