ಸದ್ಯ ಗ್ರೀನ್ ಝೋನ್ ನಲ್ಲಿ ಚಿಕ್ಕಮಗಳೂರು: ಮಹಾರಾಷ್ಟ್ರದಿಂದ ಬಂದ 2000 ಮಂದಿ ನೋಂದಣಿ…!
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಸದ್ಯ ಕೊರೊನಾ ಮುಕ್ತವಾಗಿದೆ. ಕಳೆದ 20 ದಿನಗಳವರೆಗೂ ಚಿಕ್ಕಮಗಳೂರಿನಲ್ಲಿ ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗಿರಲಿಲ್ಲ.
ಆದ್ರೆ ಮೇ 19ರಂದು ಜಿಲ್ಲೆಯಲ್ಲಿ ವೈದ್ಯ, ಗರ್ಭೀಣಿ ಸೇರಿದಂತೆ 5 ಕೊರೊನಾ ಪ್ರಕರಣಗಳು ಕಾಣಿಸಿಕೊಂಡು, ಬಳಿಕ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗತೊಡಗಿತು.
5 ಇದ್ದ ಸೋಂಕಿತರ ಸಂಖ್ಯೆ ನಂತರ 16ಕ್ಕೆ ಬಂದು ನಿಂತಿದ್ದು. ಜಿಲ್ಲೆಯ ಜನರಲ್ಲಿ ಭಾರೀ ಆತಂಕವನ್ನು ಸೃಷ್ಟಿಸಿತ್ತು.
ಆದರೆ ವೈದ್ಯ ಮತ್ತು ಗರ್ಭಿಣಿ ಮಹಿಳೆಗೆ ಕೊರೊನಾ ನೆಗೆಟಿವ್ ಎಂದು ನಂತರ ಗೊತ್ತಾಗಿತ್ತು. ಇನ್ನು ಉಳಿದ 14 ಮಂದಿಯೂ ಸಧ್ಯ ಗುಣಮುಖರಾಗಿದ್ದಾರೆ.
ಅಷ್ಟೇ ಅಲ್ಲದೆ, ಚಿಕ್ಕಮಗಳೂರಿನಲ್ಲಿ ಸದ್ಯ ಒಂದೇ ಒಂದು ಕೊರೊನಾ ಪ್ರಕರಣಗಳು ಇಲ್ಲ. ಹೀಗಾಗಿ ಕಾಫಿನಾಡು ಸದ್ಯ ಕೊರೋನಾ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದೆ.
ಇನ್ನು ಜಿಲ್ಲೆಯಲ್ಲಿ ಯಾವುದೇ ಸಕ್ರಿಯ ಪ್ರಕರಣಗಳು ಇಲ್ಲದೇ ಇದ್ದರೂ, ಪ್ರತಿಕೂಲ ಸಮಸ್ಯೆ ಎದುರಿಸಲು ಚಿಕ್ಕಮಗಳೂರು ಸಿದ್ಧಗೊಂಡಿದೆ.
ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ 22 ವೆಂಟಿಲೇಟರ್ಗಳು ಲಭ್ಯವಿದೆ. 7500 ಪಿಪಿಇ ಕಿಟ್ ಗಳು, 12000 ಎನ್ 95 ಮಾಸ್ಕ್ ಗಳು ಜಿಲ್ಲೆಯಲ್ಲಿ ರೆಡಿ ಇರಿಸಿಕೊಳ್ಳಲಾಗಿದೆ.
ಇನ್ನೂ ಜಿಲ್ಲೆ ಕೊರೊನಾ ಮುಕ್ತವಾಗಿರುವುದಕ್ಕೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಮಹಾರಾಷ್ಟ್ರದಿಂದ ಚಿಕ್ಕಮಗಳೂರಿಗೆ ಬರಲು ಬರೊಬ್ಬರಿ 2000 ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, ಮತ್ತೆ ಕೊರೊನಾ ಕೇಸ್ ಗಳು ಹೆಚ್ಚಾದ್ರೆ ಅಚ್ಚರಿ ಪಡಬೇಕಿಲ್ಲ.