LATEST NEWS
‘Catch me if You Can’ ಕಾರ್ಗಳ್ಳರಿಂದ ಪೊಲೀಸರಿಗೆ ಸವಾಲ್..!?
ಬೆಂಗಳೂರು: ಕ್ಯಾಚ್ ಮಿ ಇಫ್ ಯು ಕ್ಯಾನ್ ಎಂದು ತೆಲಂಗಾಣ ಪೊಲೀಸರಿಗೆ ಸವಾಲು ಹಾಕಿ ತಲೆಮರೆಸಿಕೊಂಡಿದ್ದ, ಐಷಾರಾಮಿ ಕಾರುಗಳನ್ನೇ ಕಳವು ಮಾಡುತ್ತಿದ್ದ ಅಂತರರಾಜ್ಯ ಕಳ್ಳನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನಿಂದ ₹ 4 ಕೋಟಿ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ.
‘ರಾಜಸ್ಥಾನದ ಸತ್ಯೇಂದರ್ ಸಿಂಗ್ ಶೇಖಾವತ್ (41) ಬಂಧಿತ. ಈತನಿಂದ ಟೊಯೊಟಾ ಫಾರ್ಚೂನರ್, ಔಡಿ ಹಾಗೂ ಹೊಂಡಾ ಆ್ಯಕ್ಟೀವಾ ಸ್ಕೂಟರ್, 20 ಕೀಗಳು, ಸ್ವಯಂಚಾಲಿತವಾಗಿ ಕೀ ಕತ್ತರಿಸಲು ಬಳಸುವ ಸುಮಾರು 2 ಲಕ್ಷ ಮೌಲ್ಯದ ಎಕ್ಸ್ ಹಾರ್ಸ್ ಡಾಲ್ಫಿನ್ ಯಂತ್ರ, 1 ಚಾರ್ಜರ್ ಕೇಬಲ್, 1 ಏರ್ಟೆಲ್ ಡಾಂಗಲ್, 2 ಎಕ್ಸ್ 100 ಪ್ಯಾಡ್, 1 ಎಕ್ಸ್ ಟೂಲ್, 1 ವಿವಿಡಿಐ ಮಿನಿ ಕೀ ಟೂಲ್, 1 ಚರ್ಮದ ಕೈಚೀಲ, 13 ಸ್ಮಾರ್ಟ್ ಕೀ, 1 ಎಕ್ಸ್ ಟೂಲ್ ಅಡಾಪ್ಟರ್, 1 ಬಟ್ಟೆಯ ಬ್ಯಾಗ್ ಹಾಗೂ 6 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
‘ಆರೋಪಿಯ ಬಂಧನದಿಂದ ಬೆಂಗಳೂರಿನ 14, ಹೈದರಾಬಾದ್ನ 5, ರಾಜಸ್ಥಾನ ಹಾಗೂ ಚೆನ್ನೈನ ತಲಾ 1 ಐಷಾರಾಮಿ ಕಾರು ಕಳವು ಹಾಗೂ 1 ಸ್ಕೂಟರ್ ಕಳವು ಪ್ರಕರಣ ಪತ್ತೆಯಾಗಿದೆ.
ಕದ್ದ ಕಾರುಗಳಲ್ಲಿ ರಾಜಸ್ಥಾನಕ್ಕೆ ತೆರಳುತ್ತಿದ್ದ ಆರೋಪಿ ಅಲ್ಲಿ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ.
ಆತ ಮಾರಿದ್ದ ಕಾರುಗಳನ್ನು ರಾಜಸ್ಥಾನದ ವಿವಿಧ ಠಾಣೆಗಳ ಪೊಲೀಸರು ಈಗಾಗಲೇ ಜಪ್ತಿ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ಬೆಂಗಳೂರಿನ ಉಪ್ಪಾರಪೇಟೆ (ಫಾರ್ಚೂನರ್), ಹನುಮಂತನಗರ (ಸ್ಕಾರ್ಪಿಯೊ), ಕಾಡುಗೊಂಡನಹಳ್ಳಿ (ಫಾರ್ಚೂನರ್), ಸುದ್ದಗುಂಟೆಪಾಳ್ಯ (ಇನ್ನೊವಾ ಕ್ರಿಸ್ಟಾ), ಕೊಡಿಗೆಹಳ್ಳಿ (ಸ್ಕಾರ್ಪಿಯೊ), ಯಲಹಂಕ (ಎಂಡೀವರ್), ಪರಪ್ಪನ ಅಗ್ರಹಾರ (ಔಡಿ), ಯಶವಂತಪುರ (ಫಾರ್ಚೂನರ್), ಜೆ.ಪಿ.ನಗರ (ಕ್ರೆಟಾ), ಅಮೃತಹಳ್ಳಿ (2 ಫಾರ್ಚೂನರ್), ಬಾಣಸವಾಡಿ (ಹೊಂಡಾ ಆ್ಯಕ್ಟೀವಾ), ಎಚ್ಎಸ್ಆರ್ ಲೇಔಟ್ (ಫಾರ್ಚೂನರ್) ಹಾಗೂ ಮಹದೇವಪುರ (ಡಸ್ಟರ್) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈತ ಕಳವು ಮಾಡಿದ್ದ’ ಎಂದು ವಿವರಿಸಿದ್ದಾರೆ.
ಆರೋಪಿಯು 2003ರಿಂದಲೇ ಐಷಾರಾಮಿ ಕಾರುಗಳ ಕಳವು ಮಾಡಲು ಆರಂಭಿಸಿದ್ದ. ಈತನ ವಿರುದ್ಧ ನವದೆಹಲಿ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ದಿಯು–ದಾಮನ್, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲಾ ಪ್ರಕರಣಗಳಲ್ಲೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಪತ್ತೆಯಾಗಿದ್ದು ಹೇಗೆ?
ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಗೋದ್ರೇಜ್ ವಸತಿ ಸಮುಚ್ಚಯದ ವಾಹನ ನಿಲುಗಡೆ ಪ್ರದೇಶದಲ್ಲಿ 2021ರ ಅಕ್ಟೋಬರ್ 19ರಂದು ಅಭಿಷೇಕ್ ಎಂಬುವರು ಫಾರ್ಚೂನರ್ ಕಾರು ನಿಲ್ಲಿಸಿದ್ದರು. ಅದೇ ದಿನ ಕಾರು ಕಳವಾಗಿತ್ತು.
ಈ ಬಗ್ಗೆ ದೂರು ದಾಖಲಾಗಿತ್ತು. ತನಿಖೆ ಆರಂಭಿಸಿದ್ದ ಪೊಲೀಸರಿಗೆ ಆರೋಪಿಯು ವಿವಿಧ ರಾಜ್ಯಗಳಲ್ಲಿ ಐಷಾರಾಮಿ ಕಾರುಗಳನ್ನು ಕಳವು ಮಾಡಿರುವ ಮಾಹಿತಿ ಲಭಿಸಿತ್ತು. ಆತನ ಬಂಧನಕ್ಕಾಗಿ ಈಶಾನ್ಯ ವಿಭಾಗದ ಡಿಸಿಪಿ, ವಿಶೇಷ ತಂಡವೊಂದನ್ನು ರಚಿಸಿದ್ದರು. ಆರೋಪಿಯು ಜೈಪುರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ್ದ ತಂಡವು ಅಲ್ಲಿಗೆ ತೆರಳಿ ಈ ವರ್ಷದ ಫೆಬ್ರುವರಿ 10ರಂದು ಆತನನ್ನು ಬಂಧಿಸಿತ್ತು.
ಕಾರುಗಳನ್ನು ಕದಿಯುವುದಕ್ಕಾಗಿಯೇ ವಿದೇಶದಿಂದ ಹಲವು ಉಪಕರಣಗಳನ್ನು ತರಿಸಿಕೊಂಡಿದ್ದ. ಎಕ್ಸ್ 100 ಪ್ಯಾಡ್ ಬಳಸಿ ಕಾರಿನ ಸಂಪೂರ್ಣ ಮಾಹಿತಿ ಹಾಗೂ ದತ್ತಾಂಶಗಳನ್ನು ಕಲೆಹಾಕುತ್ತಿದ್ದ ಈತ ಅದರ ಆಧಾರದಲ್ಲೇ ನಕಲಿ ಕೀ ತಯಾರಿಸುತ್ತಿದ್ದ.
ಕಾರುಗಳ ಮೇಲೆ ನಿಗಾ ಇಡುತ್ತಿದ್ದ ಈತ ಮಾಲೀಕರು ಅದನ್ನು ನಿಲುಗಡೆ ಮಾಡಿ ಬೇರೆಡೆ ಹೋಗುವುದನ್ನೇ ಕಾಯುತ್ತಿದ್ದ. ಯಾರೂ ಇಲ್ಲದ ಹೊತ್ತಿನಲ್ಲಿ ನಿಲುಗಡೆ ಪ್ರದೇಶಕ್ಕೆ ಹೋಗಿ ಅದನ್ನು ಕಳವು ಮಾಡುತ್ತಿದ್ದ
DAKSHINA KANNADA
ಮಂಗಳೂರು: ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ; ಪೊಲೀಸ್ ಅಧಿಕಾರಿಗಳ ಜೊತೆಯಲ್ಲೇ ಅನುಚಿತ ವರ್ತನೆ
ಮಂಗಳೂರು: ನಗರದ ಕಪಿತಾನಿಯೋ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿ ಜೊತೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಪೊಲೀಸ್ ಹಾಗೂ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ ವಾಗ್ವಾದವುಂಟಾದ ಘಟನೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್. ಆರ್ ಪೂಜಾರಿಯವರು ಮತದಾನ ಮಾಡಿ ಹೊರಬಂದಾಗ ಮಾಧ್ಯಮದವರು ಗೇಟಿನ ಹೊರಭಾಗದಲ್ಲಿ ಅವರ ಹೇಳಿಕೆ ತೆಗೆದುಕೊಳ್ಳುತ್ತಿದ್ದರು. ಆಗ “ಎಷ್ಟು ಹೊತ್ತು ಪ್ರತಿಕ್ರಿಯೆ ಪಡೆಯುವುದು”ಎಂದು ಸಂದೀಪ್ ಎಕ್ಕೂರು ಎಂಬಾತ ಕ್ಯಾತೆ ತೆಗೆದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಸೇರಿದಂತೆ ಇತರ ಪೊಲೀಸರು ಆತನನ್ನು ತಳ್ಳಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ಈ ವೇಳೆ ಆತನೊಂದಿಗೆ ಇದ್ದವರು ಸಮಾಧಾನ ಮಾಡಲು ಯತ್ನಿಸಿದರೂ, ಆತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ವಾಗ್ವಾದ ನಡೆಸಿದ್ದಾನೆ. ಆಗ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಪೊಲೀಸರು ಅಲ್ಲಿಂದ ಹಿಂದಿರುಗಿದ ಬಳಿಕ ತಂಡದಲ್ಲಿದ್ದ ಮತ್ತೊಬ್ಬ ಘಟನೆಯ ದೃಶ್ಯ ಚಿತ್ರೀಕರಿಸುತ್ತಿದ್ದ ಮಾಧ್ಯಮ ವರದಿಗಾರರ ಮೇಲೆ ಹರಿಹಾಯ್ದಿದ್ದಾನೆ. ಈ ವೇಳೆ ಪತ್ರಕರ್ತರೊಂದಿಗೂ ತಂಡದಿಂದ ವಾಗ್ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ವೇಳೆ ಆತನ ಮೇಲೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುತ್ತೇನೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.
DAKSHINA KANNADA
ಪತ್ನಿ ಮಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪದ್ಮರಾಜ್ ಪೂಜಾರಿ
ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಮಂಗಳೂರಿನಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಮಂಗಳೂರಿನ ಕಪಿತಾನಿಯೋ ಶಾಲೆಯ ಮತಗಟ್ಟೆಗೆ ತನ್ನ ಪತ್ನಿ ಹಾಗೂ ಮಗಳ ಜೊತೆ ಆಗಮಿಸಿ ಮತ ಚಲಾಯಿಸಿದ್ದಾರೆ.
ಮುಂಜಾನೆ ಏಳುಗಂಟೆಗೆ ಮತಗಟ್ಟೆಗೆ ಆಗಮಿಸಿದ ಪದ್ಮರಾಜ್ ಅವರು ಬರುವ ವೇಳೆಗೆ ಜನರು ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು. ಹೀಗಾಗಿ ಪದ್ಮರಾಜ್ ಹಾಗೂ ಅವರ ಪತ್ನಿ ಮತ್ತು ಮಗಳು ಸರತಿ ಸಾಲಿನಲ್ಲಿ ನಿಂತೇ ಮತ ಚಲಾಯಿಸಿದ್ದಾರೆ. ಪದ್ಮರಾಜ್ ಆಗಮಿಸುವ ವೇಳೆ ಅವರ ಸಾಕಷ್ಟು ಅಭಿಮಾನಿಗಳು ಮತಗಟ್ಟೆಯ ಹೊರಗೆ ನಿಂತು ಅವರಿಗೆ ಶುಭ ಕೋರಿದ್ದಾರೆ.
ಮತದಾನ ಮಾಡಿದ ಪದ್ಮರಾಜ್ ಬಳಿಕ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ವೀಕ್ಷಣೆಗೆ ತೆರಳಿದ್ದಾರೆ.
DAKSHINA KANNADA
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ
ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮೊದಲನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದಲೇ ಆರಂಭಗೊಂಡಿದೆ.
ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇದಾಗಿದ್ದು, ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನವಾಗಿದೆ. ಮತದಾರರು ತಮ್ಮ ತಮ್ಮ ಮತ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ಮತದಾನ ಮಾಡುತ್ತಿದ್ದಾರೆ.
ಅದರಂತೆ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ತುಮಕೂರು, ಕೋಲಾರ, ಹಾಸನ, ಉಡುಪಿ-ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.