ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣಕ್ಕೆ ಬಲಿಯಾಗುವ ಸಂಕಷ್ಟದಲ್ಲಿದ್ದಾರೆ: ಮುಫೀದಾ ರಹ್ಮಾನ್ ಆಕ್ರೋಶ…!
ಮಂಗಳೂರು: ದೇಶಾದ್ಯoತ ಹೇರಿದ ಲಾಕ್ ಡೌನ್ ಕಾರಣದಿಂದ ಶಿಕ್ಷಣ ಇಲಾಖೆಗಳ ಕೆಲಸ ಕಾರ್ಯಗಳು ಸ್ಥಗಿತಗೊಂಡಿದೆ.
ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳ ಪುನರಾರಂಭದ ಬಗ್ಗೆ ಹಲವು ಗೊಂದಲಗಳು ಸೃಷ್ಟಿಯಾಗಿದೆ. ಅಲ್ಲದೆ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣಕ್ಕೆ ಬಲಿಯಾಗುವ ಸಂಕಷ್ಟದಲ್ಲಿದ್ದಾರೆ.
ಮತ್ತೊಂದೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ದಿನನಿತ್ಯ ಒತ್ತಡಕ್ಕೊಳಪಡಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಉಪಾಧ್ಯಕ್ಷೆ ಮುಫೀದಾ ರಹ್ಮಾನ್ ಹೇಳಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸರಕಾರ 5ನೇ ತರಗತಿವರೆಗೆ ಆನ್ಲೈನ್ ಶಿಕ್ಷಣವನ್ನು ರದ್ದುಗೊಳಿಸಿರುವುದು ಸ್ವಾಗತಾರ್ಹ.
ಆದರೆ ನಮ್ಮ ರಾಜ್ಯದಲ್ಲಿ ಹೆಚ್ಚಿನ ಬಡ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾಡಲು ಸಾಧ್ಯವಿರದೇ ಇರುವಾಗ ಹೆಚ್ಚಿನ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣ, ಪರೀಕ್ಷೆ ಗಳಿಂದ ವಂಚಿತರಾಗುವ ಸಾಧ್ಯತೆ ಇದೆ.
ಅಲ್ಲದೇ ಆನ್ ಲೈನ್ ಮುಖಾಂತರ ತರಬೇತಿಗಳು ನಡೆಸೋದು ಸರಿಯಲ್ಲ. ಕಾರಣ, ವಿದ್ಯಾರ್ಥಿಗಳ ಮೊಬೈಲ್ ಬಳಕೆಯು ಹೆಚ್ಚಾಗಿ, ಅವರಿಗೆ ಮಾನಸಿಕವಾಗಿ ಮೊಬೈಲಿನಡೆಗೆ ಅಡಿಕ್ಟ್ ಆಗುವಂತೆ ಮಾಡುತ್ತದೆ.
ಈ ರೀತಿ ಮಾಡುವುದರಿಂದ ಎಲ್ಲಾ ವಿಷಯಗಳು ಮೊಬೈಲ್ ಮೂಲಕವೇ ಅಧ್ಯಯನ ನಡೆಸುವ ಅಭ್ಯಾಸ ಬೀಳುತ್ತದೆ.
ಇದು ಭವಿಷ್ಯದಲ್ಲಿ ಜೀವನಕ್ಕೆ ಮಾರಕವಾಗಬಹುದು. ಹೀಗಾಗಿ ಸರಕಾರ ತಕ್ಷಣ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಆನ್ ಲೈನ್ ಶಿಕ್ಷಣವನ್ನು ರದ್ದುಗೊಳಿಸಬೇಕು’ ಎಂದರು.
ದೇಶದಲ್ಲಿ ಆಧುನಿಕ ಶಿಕ್ಷಣವು ಉಗಮವಾಗುವುದರೊಂದಿಗೆ ಎಲ್ಲರಿಗೂ ಶಿಕ್ಷಣ ದೊರೆಯತೊಡಗಿತು.
ಆದರೆ ಆ ನಂತರ ಶಿಕ್ಷಣವು ಖಾಸಗೀಕರಣ ಆಗವುದರೊಂದಿಗೆ ಉಳ್ಳವರು ಮತ್ತು ಇಲ್ಲದವರು ಎಂಬ ಎರಡು ವರ್ಗಗಳನ್ನು ಸೃಷ್ಟಿಸಿದೆ.
ಇದೀಗ ಆನ್ಲೈನ್ ಶಿಕ್ಷಣದ ಮೂಲಕ ಮತ್ತೊಮ್ಮೆ ಶಿಕ್ಷಣವನ್ನು ಉಳ್ಳವರಿಗೆ ಮಾತ್ರ ಸೀಮಿತಗೊಳಿಸುವ ಪ್ರಯತ್ನವನ್ನು ಸರಕಾರ ನಡೆಸುತ್ತಿದೆ.
ಭಾರತದಂತಹ ಗ್ರಾಮೀಣ ಪ್ರದೇಶಗಳೇ ಹೆಚ್ಚಿರುವ ದೇಶಗಳಿಗೆ ಆನ್ಲೈನ್ ಶಿಕ್ಷಣವು ಖಂಡಿತವಾಗಿಯೂ ಪರ್ಯಾಯವಲ್ಲ.
ಹಾಗಾಗಿ ಈ ಸಂಕಷ್ಟದ ಸಮಯದಲ್ಲಿ ಆನ್ಲೈನ್ ಶಿಕ್ಷಣಕ್ಕೆ ಮೊರೆ ಹೋಗದೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸುತ್ತದೆ ಎಂದರು.
ಇನ್ನೊಂದೆಡೆ ಲಾಕ್ ಡೌನ್ ಸಂದರ್ಭದಲ್ಲಿ ಆನ್ಲೈನ್ ತರಗತಿಗಳನ್ನು ಆರಂಭಿಸಿದ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಂದ ದಾಖಾಲಾತಿ ಶುಲ್ಕ ಪಾವತಿಸಲು ಒತ್ತಾಯಿಸುತ್ತಿದೆ.
ಈಗಾಗಲೆ ಕೆಲ ಸಂಸ್ಥೆಗಳು ಶುಲ್ಕ ಕಟ್ಟಿ, ಸಮವಸ್ತ್ರ ಪಡೆಯುವಂತೆ ಪೋಷಕರಿಗೆ ಸಂದೇಶ ರವಾನಿಸುತ್ತಿದೆ. ಖಾಸಗಿ ಸಂಸ್ಥೆಗಳ ಈ ನಡೆಯನ್ನು ಕ್ಯಾಂಪಸ್ ಫ್ರಂಟ್ ಖಂಡಿಸುತ್ತದೆ ಎಂದರು.
ವಿಶ್ವವಿದ್ಯಾನಿಲಯಗಳ ಪರೀಕ್ಷಾ ಶುಲ್ಕ
ಎಲ್ಲರಿಗೂ ತಿಳಿದಿರುವ ಹಾಗೆ, ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಾ ಶುಲ್ಕವನ್ನು ಹೆಚ್ಚಾಗಿ ಪಡೆಯಲಾಗುತ್ತಿದೆ.
ಹಿಂದಿನ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ಪಡೆಯುತ್ತಿರುವುದು ಖಂಡನಾರ್ಹ.
ಇಂದಿನ ಪರಿಸ್ಥಿತಿಯಲ್ಲಿ ಉದ್ಯೋಗ, ವ್ಯಾಪಾರ ಇಲ್ಲದೆ ಸಂಕಷ್ಟದಲ್ಲಿರುವ ಮಧ್ಯಮ, ಬಡ ವರ್ಗದ ಹಲವು ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಕಟ್ಟಲು ಸಾಲದ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶುಲ್ಕ ರಹಿತ ಪರೀಕ್ಷೆ ನಡೆಸಬೇಕೆಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸುತ್ತದೆ ಎಂದರು.
ಒಟ್ಟಾರೆಯಾಗಿ ಲಾಕ್ ಡೌನ್ನಿಂದಾಗಿ ವಿದ್ಯಾರ್ಥಿಗಳು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಸಮಯೋಚಿತ ತೀರ್ಮಾನಗಳ ಮೂಲಕ ಸರಕಾರ ವಿದ್ಯಾರ್ಥಿಗಳಿಗೆ ಸ್ಪಂದಿಸಬೇಕಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಸಮಿತಿಯು ಆಗ್ರಹಿಸುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಅಶ್ವಾನ್ ಸಾದಿಕ್, ಸಮಿತಿ ಸದಸ್ಯ ಅನೀಸ್ ಪುತ್ತೂರು ಮತ್ತು ಮಂಗಳೂರು ಜಿಲಾಧ್ಯಕ್ಷ ಹಸನ್ ಸಿರಾಜ್ ಉಪಸ್ಥಿತರಿದ್ದರು.