ಹಾಸನ: ಕೆಲವು ತಿಂಗಳಿಂದ ನಾಪತ್ತೆಯಾಗಿದ್ದ ಮಹಿಳೆ ಮೂಳೆಗಳ ರೂಪದಲ್ಲಿ ಪತ್ತೆಯಾದ ಘಟನೆ ಹಾಸನದಲ್ಲಿ ನಡೆದಿದೆ.
ರತ್ನಮ್ಮ (55) ಎಂಬಾಕೆ ನಾಪತ್ತೆಯಾಗಿದ್ದ ಮಹಿಳೆ.
ಈಕೆ ಹಾಸನ ತಾಲೂಕಿನ ನಾರಾಯಣಪುರ ಗ್ರಾಮದಿಂದ ಜುಲೈ 20 ರಂದು ಕಾಣೆಯಾಗಿದ್ದರು. ಈ ಸಂಬಂಧ ರತ್ನಮ್ಮರ ಪುತ್ರಿ ಶಾಂತಿ ಗ್ರಾಮದ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇತ್ತ ಮನೆಯವರು ಎಷ್ಟೇ ಹುಡುಕಾಟ ನಡೆಸಿದರೂ ರತ್ನಮ್ಮ ಸಿಕ್ಕಿರಲಿಲ್ಲ. ಆದರೆ ಸೋಮವಾರ ಸಂಜೆ ಜೋಳದ ಹೊಲದಲ್ಲಿ ರತ್ನಮ್ಮ ಉಟ್ಟಿದ್ದ ಸೀರೆ, ತಲೆ ಬುರುಡೆ, ಮೂಳೆಗಳು ಪತ್ತೆಯಾಗಿದ್ದು ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪೊಲೀಸರಿಗೆ ದೂರು ಕೊಟ್ಟರೂ ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಉದಯ್ ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಲೆ ಬುರುಡೆ, ಮೂಳೆಗಳನ್ನು ಸಂಗ್ರಹಿಸಿ ಹಾಸನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.