LATEST NEWS
ಶ್ರೀರಾಂಪುರ ಪೊಲೀಸರ ಕಾರ್ಯಾಚರಣೆ : ಗಾಂಜಾ ದಂಧೆ ನಡೆಸುತ್ತಿದ್ದ ಅಟೋ ಚಾಲಕ ಅಂದರ್..!
ಬೆಂಗಳೂರು: ಬೆಂಗಳೂರು ಪೊಲೀಸರು ಭರ್ಜರಿ ಗಾಂಜಾ ಬೇಟೆಯಾಡಿದ್ದು ಈ ಸಂಬಂಧ ದಂಧೆಯ ಕಿಂಗ್ ಪಿನ್ ಅಟೋ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದಿಂದ ಗಾಂಜಾ ತರಿಸಿಕೊಂಡು ಬೆಂಗಳೂರು ನಗರದಲ್ಲಿ ಈ ತಂಡ ಅವ್ಯಾಹತವಾಗಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು. ಈ ಮಾಹಿತಿ ಪಡೆದ ಶ್ರೀರಾಮಪುರ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಶ್ರೀರಾಮಪುರದ ಅಂಬೇಡ್ಕರ್ ನಗರದ ನಿವಾಸಿ ಸತೀಶ್ ಹಾಗೂ ವಸಂತ್ ಬಂಧಿತ ಆರೋಪಿಗಳಾಗಿದ್ದಾರೆ. ದಂಧೆಕೋರರಿಂದ 45 ಕೆಜಿ ಗಾಂಜಾ ಹಾಗೂ ಆಟೋ ಜಪ್ತಿ ಮಾಡಲಾಗಿದೆ.
ಆಟೋ ಚಾಲಕ ಸತೀಶ್ ವಿಶಾಖಪಟ್ಟಣದಿಂದ ಪರಿಚಯಸ್ಥರಿಗೆ ಮುಂಗಡ ಹಣ ನೀಡಿ ಅಲ್ಲಿಂದ ಲಗೇಜ್ ಮಾದರಿಯಲ್ಲಿ ಗಾಂಜಾ ಪ್ಯಾಕ್ ಮಾಡಿ ಅಪರಿಚಿತ ಪ್ರಯಾಣಿಕರಿಗೆ ಹಣದ ಆಸೆ ತೋರಿಸಿ ಬೆಂಗಳೂರಿಗೆ ತರಿಸುತ್ತಿದ್ದನಂತೆ.
ದಂಧೆ ಬಗ್ಗೆ ಯಾರಿಗೂ ಗುಮಾನಿ ಬಾರದಿರಲು ‘ಮ್ಯಾಂಗೊ’ ಎಂಬ ಕೋರ್ಡ್ ವರ್ಡ್ ಇಟ್ಟಿದ್ದ. ಬೆಂಗಳೂರಿಗೆ ಗಾಂಜಾ ತಲುಪುತ್ತಿದ್ದಂತೆ ಗಾಂಜಾ ಸ್ವೀಕರಿಸುತ್ತಿದ್ದ ಸತೀಶ್, ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಆಟೋದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸತೀಶ್ ವಿರುದ್ಧ ಗಾಂಜಾ ಸರಬರಾಜು, ಸುಲಿಗೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.
LATEST NEWS
ರೈಲ್ವೇ ನಿಲ್ದಾಣದಲ್ಲಿ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ ಆರ್ಪಿಎಫ್ ಮಹಿಳಾ ಸಿಬ್ಬಂದಿ
ಉಡುಪಿ: ಮಂಗಳೂರು-ಮಡಗಾಂವ್ ಪ್ಯಾಸೆಂಜರ್ ರೈಲು ಹತ್ತಲು ಯತ್ನಿಸಿ ಬಿದ್ದ ಮಹಿಳೆಯೊಬ್ಬರನ್ನು ಶುಕ್ರವಾರ ಬೆಳಗ್ಗೆ ಉಡುಪಿ ರೈಲು ನಿಲ್ದಾಣದಲ್ಲಿ ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ಕ್ಷಿಪ್ರ ಹಾಗೂ ತಕ್ಷಣ ರಕ್ಷಿಸಿದ್ದಾರೆ.
ರೈಲು ಚಲಿಸಲು ಪ್ರಾರಂಭಿಸುತ್ತಿದ್ದಂತೆ ಮಹಿಳೆ ತನ್ನ ಸಮತೋಲನವನ್ನು ಕಳೆದುಕೊಂಡರು, ಆದರೆ ಅಧಿಕಾರಿ ಅಪರ್ಣಾ ನೇತೃತ್ವದ ಆರ್ಪಿಎಫ್ ತಂಡದ ಸಮಯೋಚಿತ ಮಧ್ಯಪ್ರವೇಶವು ಸಂಭಾವ್ಯ ದುರಂತವನ್ನು ತಡೆಯಿತು.
ಸಿಬ್ಬಂದಿಯ ತ್ವರಿತ ಸ್ಪಂದನೆಯನ್ನು ನಿಲ್ದಾಣದಲ್ಲಿ ನೋಡುಗರು ಮತ್ತು ಪ್ರಯಾಣಿಕರು ಶ್ಲಾಘಿಸಿದರು, ಅವರು ಅವರ ಜಾಗರೂಕತೆ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದರು.
LATEST NEWS
ಸುಪ್ರೀಂ ಕೋರ್ಟ್ ನ ಯೂಟ್ಯೂಬ್ ಚಾನೆಲ್ ಹ್ಯಾಕ್
ನವದೆಹಲಿ: ಸುಪ್ರೀಂ ಕೋರ್ಟ್ನ ಯೂಟ್ಯೂಬ್ ಚಾನೆಲ್ ಹ್ಯಾಕ್ ಆಗಿದೆ. ಯುಎಸ್ ಮೂಲದ ಕಂಪನಿ ರಿಪ್ಪಲ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದ ಕ್ರಿಪ್ಟೋಕರೆನ್ಸಿಯನ್ನು ಪ್ರಚಾರ ಮಾಡುವ ವೀಡಿಯೋಗಳು ಚಾನೆಲ್ ನಲ್ಲಿ ಬರುತ್ತಿವೆ.
‘ಬ್ರ್ಯಾಡ್ ಗಾರ್ಲಿಂಗ್ ಹೌಸ್: ರಿಪ್ಲೆ ರೆಸ್ಪೋಂಡ್ ಟು ದಿ SEC’s 2 ಮಿಲಿಯನ್ ಡಾಲರ್ ಫೈನ್! XRP PRICE PREDICTION ಶೀರ್ಷಿಕೆಯೊಂದಿಗೆ ಖಾಲಿ ವೀಡಿಯೋ ಪ್ರಸ್ತುತ ಹ್ಯಾಕ್ ಮಾಡಿದ ಚಾನಲ್ನಲ್ಲಿ ಲೈವ್ ಆಗಿದೆ.
ಸಾಂವಿಧಾನಿಕ ಪೀಠಗಳ ಮುಂದೆ ಪಟ್ಟಿ ಮಾಡಲಾದ ಪ್ರಕರಣಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ವಿಷಯಗಳ ನೇರ ವಿಚಾರಣೆಗಳನ್ನು ಸ್ಟ್ರೀಮ್ ಮಾಡಲು ಸುಪ್ರೀಂ ಕೋರ್ಟ್ YouTube ಅನ್ನು ಬಳಸುತ್ತಿದೆ.
FILM
ಸುಚಿತ್ರ ಥಿಯೇಟರ್ ನಲ್ಲಿ“ ಕಲ್ಜಿಗ“ ಸಿನಿಮಾ ಬಿಡುಗಡೆ
ಮಂಗಳೂರು: ಮಲ್ಟಿಫ್ಲೆಕ್ಸ್ ನಲ್ಲಿ ಬಿಡುಗಡೆಗೊಂಡು ಜನಮೆಚ್ಚುಗೆ ಪಡೆಯುತ್ತಿರುವ ”ಕಲ್ಜಿಗ“ ಸಿನಿಮಾ ನಗರದ ಸುಚಿತ್ರ ಥಿಯೇಟರ್ ನಲ್ಲಿ ಶುಕ್ರವಾರ ಮುಂಜಾನೆ ಬಿಡುಗಡೆಗೊಂಡಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಬಹಳ ಸಮಯದ ಬಳಿಕ ಸುಚಿತ್ರ ಥಿಯೇಟರ್ ನಲ್ಲಿ ತುಳುನಾಡ ಕಲಾವಿದರ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನು ಮುಂದೆಯೂ ಇಲ್ಲಿ ತುಳು ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಾಗಿ ಮಾಲಕರು ಹೇಳಿದ್ದಾರೆ. ಅವರಿಗೆ ಅಭಿನಂದನೆಗಳು” ಎಂದರು.
ಡಾ.ದೇವದಾಸ್ ಕಾಪಿಕಾಡ್ ಮಾತಾಡಿ, “ತುಳು ಸಿನಿಮಾಗಳಿಗೆ ಸುಚಿತ್ರ ಥಿಯೇಟರ್ ನಲ್ಲಿ ಅವಕಾಶ ನೀಡುತ್ತಿಲ್ಲ ಎಂಬ ಬೇಸರ ಇತ್ತು. ಅದು ನಿವಾರಣೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರು ಇಲ್ಲಿಗೆ ಬಂದು ಸಿನಿಮಾ ವೀಕ್ಷಿಸಿ ಕಲ್ಜಿಗ ಸಿನಿಮಾವನ್ನು ಗೆಲ್ಲಿಸಿ” ಎಂದರು.
ಪ್ರಕಾಶ್ ಪಾಂಡೇಶ್ವರ್ ಮಾತಾಡಿ, “ಕಲ್ಜಿಗ ಸಿನಿಮಾ ನಾನು ನೋಡಿದ್ದೇನೆ. ಸಿನಿಮಾದಲ್ಲಿ ನಟಿಸಿರುವ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ” ಎಂದರು.
ವೇದಿಕೆಯಲ್ಲಿ ನಟ ಅರ್ಜುನ್ ಕಾಪಿಕಾಡ್, ಥಿಯೇಟರ್ ಮಾಲಕ ಪ್ರಶಾಂತ್, ನಿರ್ಮಾಪಕ ಶರತ್ ಕುಮಾರ್ ಎ.ಕೆ. ,ಶರ್ಮಿಳಾ ಕಾಪಿಕಾಡ್, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಜ್ಯೋತಿಷ್ ಶೆಟ್ಟಿ, ಭೋಜರಾಜ್ ವಾಮಂಜೂರ್, ಅನೂಪ್ ಸಾಗರ್, ಕಾವ್ಯ ಅರ್ಜುನ್ ಕಾಪಿಕಾಡ್, ಸದಾಶಿವ ಅಮೀನ್, ರಂಜನ್ ಬೋಳೂರು, ನಿರ್ದೇಶಕ ಸುಮನ್ ಸುವರ್ಣ, ಮಾಧವ ಶೆಟ್ಟಿ ಬಾಳ ಉದಯ ಆಚಾರ್ಯ, ಆನಂದ ಬಂಗೇರ, ಶನಿಲ್ ಗುರು, ಶಾಂತಾರಾಮ್ ಮತ್ತಿತರರು ಉಪಸ್ಥಿತರಿದ್ದರು