ಬೆಂಗಳೂರು: ಬೆಂಗಳೂರು ಪೊಲೀಸರು ಭರ್ಜರಿ ಗಾಂಜಾ ಬೇಟೆಯಾಡಿದ್ದು ಈ ಸಂಬಂಧ ದಂಧೆಯ ಕಿಂಗ್ ಪಿನ್ ಅಟೋ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದಿಂದ ಗಾಂಜಾ ತರಿಸಿಕೊಂಡು ಬೆಂಗಳೂರು ನಗರದಲ್ಲಿ ಈ ತಂಡ ಅವ್ಯಾಹತವಾಗಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು. ಈ ಮಾಹಿತಿ ಪಡೆದ ಶ್ರೀರಾಮಪುರ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಶ್ರೀರಾಮಪುರದ ಅಂಬೇಡ್ಕರ್ ನಗರದ ನಿವಾಸಿ ಸತೀಶ್ ಹಾಗೂ ವಸಂತ್ ಬಂಧಿತ ಆರೋಪಿಗಳಾಗಿದ್ದಾರೆ. ದಂಧೆಕೋರರಿಂದ 45 ಕೆಜಿ ಗಾಂಜಾ ಹಾಗೂ ಆಟೋ ಜಪ್ತಿ ಮಾಡಲಾಗಿದೆ.
ಆಟೋ ಚಾಲಕ ಸತೀಶ್ ವಿಶಾಖಪಟ್ಟಣದಿಂದ ಪರಿಚಯಸ್ಥರಿಗೆ ಮುಂಗಡ ಹಣ ನೀಡಿ ಅಲ್ಲಿಂದ ಲಗೇಜ್ ಮಾದರಿಯಲ್ಲಿ ಗಾಂಜಾ ಪ್ಯಾಕ್ ಮಾಡಿ ಅಪರಿಚಿತ ಪ್ರಯಾಣಿಕರಿಗೆ ಹಣದ ಆಸೆ ತೋರಿಸಿ ಬೆಂಗಳೂರಿಗೆ ತರಿಸುತ್ತಿದ್ದನಂತೆ.
ದಂಧೆ ಬಗ್ಗೆ ಯಾರಿಗೂ ಗುಮಾನಿ ಬಾರದಿರಲು ‘ಮ್ಯಾಂಗೊ’ ಎಂಬ ಕೋರ್ಡ್ ವರ್ಡ್ ಇಟ್ಟಿದ್ದ. ಬೆಂಗಳೂರಿಗೆ ಗಾಂಜಾ ತಲುಪುತ್ತಿದ್ದಂತೆ ಗಾಂಜಾ ಸ್ವೀಕರಿಸುತ್ತಿದ್ದ ಸತೀಶ್, ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಆಟೋದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸತೀಶ್ ವಿರುದ್ಧ ಗಾಂಜಾ ಸರಬರಾಜು, ಸುಲಿಗೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.