ಮಂಗಳೂರು: ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿ ದೌರ್ಜನ್ಯ ಎಸಗಿರುವ ಬಗ್ಗೆ ಇದೀಗ ಮಂಗಳೂರಿನ ಸಂತ್ರಸ್ತ ಯುವತಿ ಹಿಂದು ಸಂಘಟನೆಗಳೊಂದಿಗೆ ತನಗೆ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾಳೆ.
ಈಕೆ ಹೋರಾಟಕ್ಕೆ ವಿಶ್ವಹಿಂದು ಪರಿಷತ್ನ ದುರ್ಗಾವಾಹಿನಿ ಸಂಘಟನೆ ಬೆಂಬಲ ನೀಡಿದೆ. ತನ್ನನ್ನು ಮತಾಂತರ ಮಾಡಿರುವ ಮಂಗಳೂರಿನ ವೈದ್ಯೆ ಡಾ ಜಮೀಳಾ ಯಾವ ರೀತಿ ದೌರ್ಜನ್ಯ ಎಸಗಿದ್ದಾರೆ ಎಂದು ಮಾಧ್ಯಮದ ಮುಂದೆ ಅಳಲು ವ್ಯಕ್ತಪಡಿಸಿದ್ದಾಳೆ.
ಒತ್ತಾಯಪೂರ್ವಕವಾಗಿ ನಮಾಜ್ ಮಾಡಿಸಿದ್ದಲ್ಲದೇ ತನ್ನ ಹೆಸರನ್ನೂ ಆಯಿಷಾ ಎಂದು ಬದಲಾಯಿಸಿದ್ದಾರೆ ಎಂದು ಸಂತ್ರಸ್ತೆ ಯುವತಿ ದೂರಿದ್ದಾಳೆ.
ಕಲೀಲ್ ಎಂಬಾತನ ನನಗೆ ಪರಿಚಯ ಆಗಿ, ಕೆಲಸ ಕೊಡಿಸುವುದಾಗಿ ಹೇಳಿ ಸಂಬಂಧಿಕರ ಮನೆಗೆ ಕರೆಸಿ ಅಲ್ಲಿ ನನಗೆ ಒತ್ತಾಯಪೂರ್ವಕವಾಗಿ ನಮಾಜ್ ಮಾಡಿಸಿದ್ದಾರೆ.
ಬಳಿಕ ಕೇರಳಕ್ಕೆ ಕೆಲಸಕ್ಕೆ ಕರೆಸಿಕೊಂಡು ಹೋಗಿದ್ದಾರೆ. ಡಾ ಜಮೀಲಾ ಅವರ ಮನೆಯಲ್ಲೂ ನನ್ನನ್ನು ದುಡಿಸಿದ್ದಲ್ಲದೇ ನನ್ನ ವಿರುದ್ಧ ದೂರು ನೀಡುವುದಾಗಿ ಬೆದರಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ಇನ್ನು ದುರ್ಗಾವಾಹಿನಿಯ ಸುರೇಖ ಅವರು ಮಾತನಾಡಿ ಈ ಮತಾಂತರ ಯತ್ನವನ್ನು ನಾವು ಖಂಡಿಸುತ್ತೇವೆ. ಬಡ ಕುಟುಂಬದ ಯುವತಿಯನ್ನು ಕೆಲಸಕ್ಕೆ ಸೇರಿಸುವ ನೆಪದಲ್ಲಿ ಈ ರೀತಿಯ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸಬೇಕು.
ಯಾವುದೇ ಬಡ ಹೆಣ್ಣುಮಕ್ಕಳು ಈ ರೀತಿಯ ದೌರ್ಜನ್ಯಕ್ಕೆ ಒಳಗಾಗದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.