12 ಗಂಟೆಯೊಳಗೆ ಆರೋಪಿಯನ್ನು ಪುಣೆಯಲ್ಲಿ ಬಂಧಿಸಿದ ಮುಂಬೈ ಪೊಲೀಸ್…!
ಮುಂಬೈ: ಮಹಾರಾಷ್ಟ್ರದ ಮುಂಬೈ ನಗರದ ಮೀರಾ ರೋಡ್ ನಲ್ಲಿ ನಡೆದ ಉಡುಪಿ ಮೂಲದ ಹೊಟೇಲ್ ಮ್ಯಾನೇಜರ್ ಮತ್ತು ಆತನ ಸಹಾಯಕ ಅವಳಿ ಹತ್ಯೆ ಪ್ರಕರಣವನ್ನು ಪೋಲಿಸರು ಭೇದಿಸಿದ್ದಾರೆ.
12 ಗಂಟೆಯೊಳಗೆ ಆರೋಪಿ ಉತ್ತರ ಪ್ರದೇಶದ ಮೂಲದ ಕಲ್ಲು ಯಾದವ್ (35) ಎಂಬಾತನನ್ನು ಪುಣೆಯಲ್ಲಿ ಬಂಧಿಸುವಲ್ಲಿ ಮುಂಬಯಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಲವು ದಿನದ ಹಿಂದೆ ಮೀರಾ ರೋಡ್ ಹೋಟೆಲ್ ಮ್ಯಾನೇಜರ್ ಉಡುಪಿ ಮೂಲದ ಹರೀಶ್ ಶೆಟ್ಟಿ ಹಾಗೂ ಅವರ ಸಹಾಯಕ ನರೇಶ್ ಪಂಡಿತ್ ಕೊಲೆಯಾಗಿತ್ತು.
ಆದರೆ ಜೊತೆಗೆ ಇದ್ದ ಯಾದವ್ ಕಾಣೆಯಾಗಿದ್ದ. ಕೊಲೆ ವಿಚಾರ ನಿಗೂಢವಾಗಿತ್ತು. ಪೊಲೀಸರಿಗೆ ಅಪರಿಚಿತ ವ್ಯಕ್ತಿಯ ಫೋನ್ ಕರೆಯಿಂದ ಎರಡು ಕೊಲೆ ನಡೆದಿದೆ ಎಂದು ತಿಳಿಯಿತು.
ನಂತರ ಕೊಲೆ ಮಾಡಿದ ಆರೋಪಿಯು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ. ಪೊಲೀಸರು ಆತನನ್ನು ಕೂಡಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಹೊಟೇಲ್ ಮ್ಯಾನೇಜರ್ ಮತ್ತು ಸಹಾಯಕ ತನಗೆ ಚಿತ್ರಹಿಂಸೆ ನೀಡಿದ್ದರು.
ಆಹಾರ ಕೊಡದೆ ಹಸಿವಿನಿಂದ ಬಳಲುವಂತೆ ಮಾಡಿದ್ದರು. ನನ್ನ ಎದುರೇ ಅವರು ಊಟ ಮಾಡುತ್ತಿದ್ದರು.
ಅದಕ್ಕಾಗಿ ಸಿಟ್ಟಿನಿಂದ ಕೊಲೆ ಮಾಡಿದ್ದೇನೆ ಎಂದು ಆರೋಪಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.
ಆರೋಪಿಯು ಈ ಹಿಂದೆ ಕೊಡ 2013 ರಲ್ಲಿ ಕೊಲ್ಕತ್ತಾದಲ್ಲಿ ಕೊಲೆಯ ಆರೋಪಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದ.
ಬಳಿಕ ಕೆಲಸಕ್ಕೆಂದು ಮುಂಬಯಿಗೆ ಬಂದಿದ್ದ. ಈಗ ಇಲ್ಲಿ ಎರಡು ಕೊಲೆ ನಡೆಸಿದ್ದಾನೆ ಎಂದು ವಿಚಾರಣೆ ನಡೆಸುತ್ತಿರುವ ಥಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.