ಜಿಲ್ಲೆಗೆ ಕಾಲಿಟ್ಟ ರಕ್ಕಸ ಮಿಡತೆಗಳ ಸ್ಯಾಂಪಲ್ ಸಂಗ್ರಹಿಸಿದ ಕೃಷಿ ಅಧಿಕಾರಿಗಳು..
ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ.ವ್ಯಾಪ್ತಿಯಲ್ಲಿ ಮಿಡತೆ ಹಿಂಡು ಕಂಡು ಬಂದ ಸ್ಥಳಕ್ಕೆ ನಿನ್ನೆ ಕೃಷಿ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಣಾಜೆ ಕಾಡಂಚಿನ ಪ್ರದೇಶದಲ್ಲಿರುವ ರೆಂಜಿಲಾಡಿ ಹೇರ ನಿವಾಸಿ ಆನಂದ ಎಂಬುವವರ ಕೃಷಿ ತೋಟದ ಜಾಗದಲ್ಲಿರುವ ಗಿಡ, ಮರಗಳ ಎಲೆಗಳಲ್ಲಿ ಕಳೆದ ಶುಕ್ರವಾರದಿಂದ ಸಾಯಂಕಾಲ ವೇಳೆಯಲ್ಲಿ ಮಿಡತೆಗಳ ಹಿಂಡು ಬೀಡುಬಿಟ್ಟು ಎಲೆಗಳನ್ನು ತಿನ್ನುತ್ತಿದ್ದವು.
ಈ ಬಗ್ಗೆ ಮಾಧ್ಯಮ ವರದಿ ಬಿತ್ತರವಾದ ಬೆನ್ನಲ್ಲೇ ಕೃಷಿ ಇಲಾಖೆಯಿಂದ ರೈತನಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ನಿನ್ನೆ ಸ್ಥಳಕ್ಕೆ ಭೇಟಿ ಮಾಡಿದ ಕಡಬ ತಾಲೂಕು ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ಅವರು, ಮಿಡತೆ ಭಾದಿತ ಪ್ರದೇಶ ಪರಿಶೀಲನೆ ನಡೆಸಿ ಮಿಡತೆ ಹಾಗೂ ಅದು ತಿಂದ ವಿವಿಧ ಬಗೆಯ ಗಿಡದ ಸೊಪ್ಪುಗಳನ್ನು ಸಂಗ್ರಹಿಸಿ ವಿಜ್ಞಾನಿಗಳ ಸಂಶೋದನೆಗಾಗಿ ರವಾನಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇದರ ಸಂತತಿ ಹೆಚ್ಚಾಗುವ ಭೀತಿ ಎದುರಾಗಿದ್ದು, ಇವು ಬಹಳ ಕಹಿ ಇರುವ ಕಾಸರಕ ಎಲೆಯಿಂದ ಹಿಡಿದು ಸಾಮಾನ್ಯ ಎಲ್ಲಾ ಎಲೆಗಳನ್ನು ತಿನ್ನುತ್ತವೆ.
ಅಲ್ಲದೆ ಮುಂದಕ್ಕೆ ರೈತ ಬೆಳೆದ ಅಡಿಕೆ, ತೆಂಗು ಮೊದಲಾದ ಕೃಷಿಯ ಎಲೆಯನ್ನು ಆಹಾರವಾಗಿ ಸೇವಿಸಿದರೆ ಬೆಳೆಗಳು ನಾಶವಾಗಲಿದೆ ಎಂದು ರೈತಾಪಿ ವರ್ಗ ಆತಂಕ ವ್ಯಕ್ತಪಡಿಸಿದ್ದಾರೆ.
ಬಿಸಿಲಿಗೆ ಕಾಡಿನಲ್ಲಿ ತರೆಗೆಲೆಯ ಮದ್ಯೆ ಮರೆಯಾಗಿ, ವಾತಾವರಣ ತಂಪಾದ ಸಮಯದಲ್ಲಿ ಎಲೆಗಳ ಮೇಲೆ ಕೂತು ಎಲೆಗಳನ್ನು ಆಹಾರವನ್ನಾಗಿಸುತ್ತವೆ.
ಇವಾಗ ಮಿಡತೆ ಕಾಣಸಿಕ್ಕಿದ ಹೇರ ಪ್ರದೇಶವು ಕೋಣಾಜೆ ಕಾಡಂಚಿನ ಪ್ರದೇಶವಾಗಿರುವುದರಿಂದ ಈ ಪ್ರದೇಶಕ್ಕೆ ಬಹುಬೇಗನೆ ಮಿಡತೆಗಳು ಆಗಮಿಸುತ್ತವೆ ಎನ್ನುವ ಬಗ್ಗೆ ಕೃಷಿ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಲ್ಲಿ ಕಾಣ ಸಿಕ್ಕಿರುವ ಮಿಡತೆಗಳ ಹಿಂಡು ಪ್ರಸ್ತುತ ಪ್ರಚಲಿತದಲ್ಲಿರುವ ಮರುಭೂಮಿ ಲೋಕಷ್ಟ್ ಜಾತಿಯದ್ದು ಅಲ್ಲ.
ಈ ಮಿಡತೆ ಕೃಷಿ ತಜ್ಞರ ಪ್ರಕಾರ ಸ್ಟೋಟೆಡ್ ಕಾಫಿ ಗ್ರಾಸ್ ಹೋಪರ್ ಜಾತಿಯದ್ದಾಗಿದೆ. ಈ ಬಗ್ಗೆ ರೈತರು ಆತಂಕ ಪಡಬೇಡಬೇಕಿಲ್ಲ.
ಇದನ್ನು ಸಂಹಾರ ಮಾಡಲು ಸಾಧ್ಯವಿದೆ. ಮಿಡತೆ ಹಾವಳಿ ಕಂಡು ಬಂದಲ್ಲಿ ತಕ್ಷಣ ಕೃಷಿ ಇಲಾಖೆಯ ಗಮನಕ್ಕೆ ತರಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.
ಕಡಬ ತಾಲೂಕಿನಲ್ಲಿ ಮಾತ್ರವಲ್ಲದೆ ಬೆಳ್ತಂಗಡಿ ತಾಲೂಕಿನ ಹಲವು ಭಾಗದಲ್ಲಿ ಈ ಜಾತಿಯ ಮಿಡತೆಗಳು ನಿನ್ನೆ ಹೇರಳವಾಗಿ ಕಂಡು ಬಂದಿತ್ತು.
ಈ ಪ್ರದೇಶಗಳಿಗೂ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ಮಿಡತೆಗಳ ಮಾದರಿಯನ್ನು ಸಂಗ್ರಹಿಸಿ ವಿಜ್ಞಾನಿಗಳಿಗೆ ರವಾನಿಸಿದ್ದಾರೆ.