Connect with us

DAKSHINA KANNADA

ಮಂಗಳೂರು : ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ

Published

on

ಮಂಗಳೂರು : ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಯುವ ಪೀಳಿಗೆಯ ಯುವ ಮಕ್ಕಳ ಮುಂದಿನ ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಪಚ್ಚನಾಡಿಯಲ್ಲಿ ನಡೆಯಿತು.

ಈ ಸಂದರ್ಭ ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆಯ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್ ಮಾತನಾಡಿ, ನಾವು ಸಣ್ಣವರಿದ್ದಾಗ ಕಲಿಕಾ ಸಾಮಗ್ರಿಗಳಿಲ್ಲದೇ ಕಷ್ಟಪಟ್ಟಿದ್ದೆವು. ಅಂತಹ ಕಷ್ಟ ಬಡ ವಿದ್ಯಾರ್ಥಿಗಳು ಪಡಬಾರದೆಂದು ಸಮಾಜದ ಎಲ್ಲರಿಗೂ ಪ್ರೇರಣೆಯಾಗುವಂತೆ ಮಂಗಳೂರಿನ ಎಲ್ಲಾ ಕಡೆ ಪ್ರತಿವರ್ಷದಂತೆ ಪುಸ್ತಕ ವಿತರಣೆ ಕಾರ್ಯಕ್ರಮ ಮಾಡುವುದಾಗಿ ಭರವಸೆ ನೀಡಿದರು. ಪುಸ್ತಕ ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಕಲಿತು ಆರ್ಥಿಕವಾಗಿ ಬೆಳೆದರೆ, ನೀವು ಕೂಡ ಈ ರೀತಿ ಕಾರ್ಯಕ್ರಮ ಮಾಡುವುದರ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಾಯಮಾಡಿ ಎಂದರು.

ಇದನ್ನೂ ಓದಿ : ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!

ಗೌರವಾಧ್ಯಕ್ಷ ವಸಂತ್ ಜೆ ಪೂಜಾರಿ, ಉಪಾಧ್ಯಕ್ಷ ಅಕ್ಷಯ್ ಬಂಜನ್, ಕಮಲಾಕ್ಷ ಬಜಾಲ್, ಪ್ರಧಾನ ಕಾರ್ಯದರ್ಶಿ ನಟರಾಜ್ ಪಚ್ಚನಾಡಿ, ಜೊತೆ ಕಾರ್ಯದರ್ಶಿ ಶರತ್ ಕುಂದರ್ ಪದವಿನಂಗಡಿ, ಪ್ರಸಾದ್ ಕುಂಪಲ, ಖಜಾಂಚಿ ಅರುಣ್ ಡಿಸೋಜ, ಸದಸ್ಯ ರಾಕೇಶ್ ಶೆಟ್ಟಿ, ಪಿ ಎಎಫ್ ಸಿ ತಂಡದ ಪ್ರಮುಖರಾದ ಐವನ್ ಆಲ್ವರಿಸ್, ಕೀರ್ತಿ ಪ್ರಸಾದ್, ರಘು, ರಾಕೇಶ್ ಶೆಟ್ಟಿ, ರೂಪೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

DAKSHINA KANNADA

ಶಬರಿಮಲೆ ಯಾತ್ರಾರ್ಥಿ ಹೃದಯಾಘಾ*ತದಿಂದ ಸಾ*ವು

Published

on

ಸುರತ್ಕಲ್: ಕಾಣಿಪಳ್ಳ ಗಣೇಶಪುರ ಬಳಿಯ ನಿವಾಸಿ ಸಂದೀಪ್ ಕಾಟಿಪಳ್ಳ(35) ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸಂದರ್ಭ ಕೇರಳದಲ್ಲಿ ಹೃದಯಾಘಾತದಿಂದ ಮೃ*ತಪಟ್ಟಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರನ್ನು ಅ*ಗಲಿದ್ದಾರೆ. ಶಬರಿಮಲೆಗೆ ಮಗನ ಹೆಸರಿನಲ್ಲಿ ಹೇಳಿಕೊಂಡಿದ್ದ ಹರಕೆ ಒಪ್ಪಿಸಲು ಶುಕ್ರವಾರ ತೆರಳಿದ್ದರು. ಶನಿವಾರ ಅಯ್ಯಪ್ಪ ಸನ್ನಿಧಿಯಲ್ಲಿ ಹದಿನೆಂಟು ಮೆಟ್ಟಿಲು ಹತ್ತುವ ಹೊತ್ತಿನಲ್ಲಿ ಹೃದಯಾಘಾತಕ್ಕೆ ಒಳಗಾದರು.

ಸಂದೀಪ್ ಅವರು ನಿತ್ಯಾನಂದ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಸೇವಾ ಟ್ರಸ್ಟ್, ಕೇಸರಿ ಫ್ರೆಂಡ್ಸ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಕ್ರೀಯಾಶೀಲರಾಗಿದ್ದರು. ಎಂಆರ್‌ಪಿಎಲ್‌ ನಲ್ಲಿ ಗುತ್ತಿಗೆ ಸೇವೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು.

Continue Reading

DAKSHINA KANNADA

ಮಂಗಳೂರು : ಬಂಟರ ಮಾತೃ ಸಂಘದ 103 ನೇ ವಾರ್ಷಿಕ ಸರ್ವ ಸದಸ್ಯರ ಸಭೆ

Published

on

ಮಂಗಳೂರು : ಆರ್ಥಿಕವಾಗಿ ಹಿಂದುಳಿದ ಬಂಟ ಸಮಾಜದವರ ಏಳಿಗೆಗೆ ಮತ್ತು ಸಮಗ್ರ ಅಭಿವೃದ್ದಿಗೆ ಬಂಟರ ಯಾನೆ ನಾಡವರ ಮಾತೃಸಂಘ ಸ್ಪಂದಿಸುತ್ತಿದೆ. ಬಂಟರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ವೈವಾಹಿಕ, ಆರೋಗ್ಯ, ವಸತಿ ಮತ್ತು ಒಟ್ಟು ಜೀವನದ ವ್ಯವಸ್ಥೆಗೆ ಬಂಟರ ಮಾತೃಸಂಘ ಸ್ಪಂದಿಸಿ ಕೆಲಸ ಮಾಡುತ್ತಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು.


ಬಂಟ್ಸ್ ಹಾಸ್ಟೇಲ್ ನಲ್ಲಿರುವ ಗೀತಾ ಎಸ್. ಎಮ್.ಶೆಟ್ಟಿ ಸಭಾಭವನದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ 2022-23 ನೇ ಸಾಲಿನ 103 ನೇ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಬಂಟರ ಯಾನೆ ನಾಡವರ ಮಾತೃ ಸಂಘಕ್ಕೆ 115 ವರ್ಷಗಳ ಇತಿಹಾಸ ಇದೆ. ಈ ನಿಟ್ಟಿನಲ್ಲಿ ಮಾತೃಸಂಘದ ಬಹು ಕನಸಿನ ಯೋಜನೆಯಾದ ಶತಮಾನೋತ್ಸವ ಕಟ್ಟಡ ನಿರ್ಮಾಣ ಸಮಿತಿಗೆ ಎಂಆರ್ ಜಿ ಗ್ರೂಪ್ ನ ಚೆಯರ್ ಮೆನ್ ಕೆ ಪ್ರಕಾಶ್ ಶೆಟ್ಟಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಪ್ರಕಾಶ್ ಶೆಟ್ಟಿಯವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅದೇ ರೀತಿ ವಿಶ್ವ ಬಂಟರ ಮಾಹಿತಿ ಕೋಶ ಸಮಿತಿಗೆ ಹೇರಂಭ ಇಂಡಸ್ಟೀಸ್ ನ ಆಡಳಿತ ನಿರ್ದೇಶಕ ಕನ್ಯಾನ ಕೂಳೂರು ಸದಾಶಿವ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಒಂದು ಯೋಜನೆಗೆ ಒಂದು ಕೋಟಿ ರೂಪಾಯಿಗೂ ಮಿಕ್ಕಿ ಖರ್ಚಾಗಲಿದ್ದು, ಅದರ ಸಂಪೂರ್ಣ ವೆಚ್ಚವನ್ನು ಕನ್ಯಾನ ಸದಾಶಿವ ಶೆಟ್ಟಿಯವರು ಭರಿಸಲಿದ್ದಾರೆಂದು ಅಜಿತ್ ಕುಮಾರ್ ರೈ ತಿಳಿಸಿದರು.
ಶ್ರೀ ರಾಮಕೃಷ್ಣ ಶಾಲಾ ಕಾಲೇಜ್ ನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಇಲ್ಲಿರುವ ಮಕ್ಕಳಿಗೆ ಹಲವಾರು ಸವಲತ್ತುಗಳು ದೊರಕುತ್ತಿದೆ. ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯುವಂತೆ ವಿನಂತಿಸಿದರು.

ಮೀಸಲಾತಿಯಲ್ಲಿ ಬಂಟರಿಗೆ ಅನ್ಯಾಯ :


ಬಂಟ ಸಮಾಜವನ್ನು ಕೇಂದ್ರ ಸರಕಾರವು ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ. ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಸಮಾಜವು ಪ್ರವರ್ಗ 2 ( ಎ) ಯಲ್ಲಿ ಸೇರಲು ಅರ್ಹರಾಗಿದ್ದರೂ ಬಂಟ ಸಮುದಾಯವನ್ನು ಪ್ರವರ್ಗ 3 (ಬಿ) ಯಲ್ಲಿ ಸೇರಿಸಿರುವ ಕಾರಣ ಸಮುದಾಯ ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತರಾಗಿ ಸಮುದಾಯಕ್ಕೆ ತುಂಬಾ ಹಿನ್ನಡೆಯಾಗಿದೆ ಎಂದು ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು.

ಸಮಾಜವನ್ನು ಕೇಂದ್ರ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಹಾಗೂ ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟ ಸಮಾಜವನ್ನು ಪ್ರವರ್ಗ 3 (ಬಿ) ಯಿಂದ ಪ್ರವರ್ಗ 2 (ಎ) ಗೆ ಸೇರ್ಪಡೆಗೊಳಿಸಲು ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ ಮೀಸಲಾತಿಯಲ್ಲಿ ಸೇರಿಸುವ ಉದ್ದೇಶದಿಂದ ಹಾಗೂ ಸಮಾಜದ ನಿಜವಾದ ಸ್ಥಿತಿಗತಿಯನ್ನು ಸರಕಾರದ ಗಮನಕ್ಕೆ ಬರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಬಾಂಧವ್ಯ ಎಂಬ ನಾಮಾಂಕಿತದೊಂದಿಗೆ ವಿಶ್ವವ್ಯಾಪಿಯಾಗಿ ನೆಲೆಸಿರುವ ಬಂಟರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ವೈವಾಹಿಕ, ಆರೋಗ್ಯ, ವಸತಿ, ಧಾರ್ಮಿಕ ಮತ್ತು ಒಟ್ಟು ಜೀವನದ ವ್ಯವಸ್ಥೆ ಹಾಗೂ ಇತರ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಮಹೋನ್ನತವಾದ ದೂರಗಾಮಿ ಪರಿಣಾಮವನ್ನು ಬೀರುವ “ವಿಶ್ವ ಬಂಟರ ಮಾಹಿತಿ ಕೋಶ”ವನ್ನು ತಯಾರು ಮಾಡುವ ಒಂದು ಅನುಕರಣೀಯ ಶ್ರೇಷ್ಠ ಕೆಲಸವನ್ನು ಮಾಡಲು ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಅಜಿತ್ ಕುಮಾರ್ ರೈ ತಿಳಿಸಿದರು.
ಸಾಮಾಜಿಕ ಜಾಲತಾಣದ ಮೂಲಕ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ವಿಶ್ವ ಬಂಟರ ಮಾಹಿತಿಕೋಶ ಪೂರ್ಣವಾದ ನಂತರ ಬಂಟ ಸಮಾಜ ಬಾಂಧವರ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆಯುವ ಅವಕಾಶ ಒದಗಿ ಬರುತ್ತದೆ. ಇದರಿಂದ ಸಮಾಜ ಬಾಂಧವರು ಹಲವಾರು ವಿಧದ ಪ್ರಯೋಜನಗಳನ್ನು ಪಡೆಯಬಹುದು ಎಂದರು‌.


2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಕೆ ಎಂ ಶೆಟ್ಟಿ ಮಂಡಿಸಿದರು. 2022-23 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಕೋಶಾಧಿಕಾರಿ ಸಿಎ. ರಾಮ್ ಮೋಹನ್ ರೈ ಟಿ ಮಂಡಿಸಿದರು. ಸಭೆಯಲ್ಲಿ ವಿದ್ಯಾರ್ಥಿ ಭವನಗಳ, ಶಾಲಾ ಕಾಲೇಜುಗಳ, ತಾಲೂಕು ಸಮಿತಿಗಳ ವಾರ್ಷಿಕ ವರದಿಯನ್ನು ಮಂಡಿಸಲಾಯಿತು.

ಇದನ್ನೂ ಓದಿ : ಮತ್ತೆ ಕಿರುತೆರೆಗೆ ಲಗ್ಗೆ ಇಟ್ಟ ನಟ ರೂಪೇಶ್ ಶೆಟ್ಟಿ; ‘Huu ಅಂತೀಯಾ…Uhuu ಅಂತೀಯಾ’ ಅಂದ್ರು ರಾಕ್ ಸ್ಟಾರ್!

ಉಮೇಶ್ ರೈ ಪದವುಮೇಗಿನ ಮನೆ, ಶಾಲಿನಿ ಶೆಟ್ಟಿ, ಸಂಜೀವ ರೈ, ಕಾವು ಹೇಮನಾಥ ಶೆಟ್ಟಿ, ವಸಂತ ಶೆಟ್ಟಿ, ಮಿಥುನ್ ಹೆಗ್ಡೆ ಉಡುಪಿ, ವಿಜಯ ಶೆಟ್ಟಿ ಕಾರ್ಕಳ, ಆವರ್ಸೆ ಸುಧಾಕರ ಶೆಟ್ಟಿ, ದಯಾನಂದ ರೈ ಮನವಳಿಕೆ, ಜಯರಾಮ ಭಂಡಾರಿ, ಸುಧೀರ್ ಕುಮಾರ್ ರೈ ವರದಿಗಳನ್ನು ಮಂಡಿಸಿದರು. 2023-24 ನೇ ಸಾಲಿಗೆ ಲೆಕ್ಕಪರಿಶೋಧಕರಾಗಿ ದಯಾಶರಣ್ ಶೆಟ್ಟಿ ಆಯ್ಕೆಯಾದರು.

ಅಜಿತ್ ಕುಮಾರ್ ರೈ ಸ್ವಾಗತಿಸಿದರು. ದೀಪಿಕಾ, ಸಿಂಧೂರ, ಸಹನಾ ಪ್ರಾರ್ಥನೆಗೈದರು. ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ವಂದಿಸಿದರು. ಶರತ್ ಶೆಟ್ಟಿ ಪಡುಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Continue Reading

DAKSHINA KANNADA

ಈ ಕನಸುಗಳು ಕೇವಲ ಅದೃಷ್ಟವಂತರಿಗೆ ಮಾತ್ರ ಬೀಳುತ್ತೆ.!

Published

on

ಮಂಗಳೂರು: ಕನಸನ್ನು ಕಾಣುವುದು ಎಂದರೆ ಅದೊಂದು ಸಾಮಾನ್ಯ ವಿಷಯ. ಪ್ರತಿಯೊಬ್ಬ ವ್ಯಕ್ತಿಯು ಮಲಗುವ ಸಮಯದಲ್ಲಿ ಕನಸನ್ನು ಕಾಣುತ್ತಾನೆ. ಅದೆಷ್ಟೋ ಬಾರಿ ನಾವು ಎದ್ದಾಕ್ಷಣ ರಾತ್ರಿ ಕನಸಿನಲ್ಲಿ ಕಂಡ ವಿಷಯಗಳನ್ನು ಮರೆತುಬಿಡುತ್ತೇವೆ. ಇನ್ನು ಕೆಲವೊಮ್ಮೆ ಅದು ಅಚ್ಚಳಿಯದಂತೆ ನಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಕೆಲವು ಕನಸುಗಳು ನಮಗೆ ಸಾಕಷ್ಟು ಸಂತೋಷವನ್ನು, ನೆಮ್ಮದಿಯನ್ನು ನೀಡಿದರೆ, ಕೆಲವು ಕನಸುಗಳು ನಮ್ಮ ತಲೆಯನ್ನು ಕೆಡಿಸುತ್ತದೆ.

ಕನಸುಗಳನ್ನು ನಾವು ಶುಭ ಕನಸುಗಳು ಮತ್ತು ಅಶುಭ ಕನಸುಗಳೆಂದು ವಿಭಜಿಸುತ್ತೇವೆ. ಆದರೆ, ಒಂದಿಷ್ಟು ಕನಸುಗಳಿವೆ ಅವುಗಳು ಕೇವಲ ಅದೃಷ್ಟವಂತರಿಗೆ ಮಾತ್ರ ಬೀಳುತ್ತದೆ. ನೀವು ಅದೃಷ್ಟವಂತರಾದರೆ ಈ ಕನಸುಗಳು ನಿಮಗೂ ಬಿದ್ದಿರುತ್ತೆ.

1. ಬಿಳಿ ಆನೆಯ ಕನಸು:

ನಾವು ಕನಸಿನಲ್ಲಿ ಬಿಳಿ ಬಣ್ಣದ ಆನೆಯನ್ನು ನೋಡಿದರೆ ಅದನ್ನು ಅತ್ಯಂತ ಮಂಗಳಕರವಾದ ಕನಸೆಂದು ಪರಿಗಣಿಸಲಾಗುತ್ತದೆ. ಬಿಳಿ ಬಣ್ಣದ ಆನೆ ಕಾಣಿಸಿಕೊಳ್ಳುವುದು ಎಂದರೆ ನೀವು ಇಂದ್ರ ದೇವನ ಆಶೀರ್ವಾದವನ್ನು ಪಡೆದುಕೊಂಡಿದ್ದೀರಿ ಎಂಬುದಾಗಿದೆ. ಯಾಕೆಂದರೆ ಬಿಳಿ ಬಣ್ಣದ ಆನೆಯು ದೇವರಾಜ ಇಂದ್ರ ದೇವನ ವಾಹನವಾಗಿದೆ. ಮತ್ತು ಯಾವ ವ್ಯಕ್ತಿ ತನ್ನ ಕನಸಿನಲ್ಲಿ ಬಿಳಿ ಬಣ್ಣದ ಆನೆಯನ್ನು ನೋಡುತ್ತಾನೋ ಅವನಿಗೆ ಸದ್ಯದಲ್ಲೇ ರಾಜಯೋಗವು ಪ್ರಾರಂಭವಾಗಲಿದೆ ಎಂಬುದಾಗಿದೆ.

2. ಬಿಳಿ ಬಣ್ಣದ ನವಿಲು:

ಯಾವುದೇ ಓರ್ವ ವ್ಯಕ್ತಿಯು ತನ್ನ ಕನಸಿನಲ್ಲಿ ಬಿಳಿ ಬಣ್ಣದ ನವಿಲನ್ನು ನೋಡಿದರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಕನಸುಗಳು ಅದೃಷ್ಟದ ಸಂಕೇತವಾಗಿರುತ್ತದೆ. ಇಂತಹ ಕನಸುಗಳು ಬಿದ್ದರೆ ನಿಮ್ಮ ಜೀವನದಲ್ಲಿ ಉತ್ತಮವಾದ ದೊಡ್ಡ ಬದಲಾವಣೆಯೊಂದು ನಡೆಯಲಿದೆ. ಮತ್ತು ನೀವು ಏನಾದರೂ ದೊಡ್ಡ ಸಾಧನೆಯನ್ನು ಮಾಡುತ್ತೀರಿ ಎಂಬುದಾಗಿದೆ. ನಿಮ್ಮ ಕನಸಿನಲ್ಲಿ ಬಿಳಿ ನವಿಲು ಕಾಣುವುದು ಎಂದರೆ ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಶೀಘ್ರದಲ್ಲೇ ಪಡೆಯುತ್ತೀರಿ.

3. ಬಿಳಿ ಸಿಂಹದ ಕನಸು:

ಈಗಾಗಲೇ ಹಳದಿ ಬಣ್ಣದ ಸಿಂಹವನ್ನು ನೋಡಿರಬಹುದು. ಆದರೆ, ಬಿಳಿ ಬಣ್ಣದ ಸಿಂಹವೂ ಇದೆ ಎಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದನ್ನು ಎಲ್ಲರೂ ನೋಡಿರಲು ಸಾಧ್ಯವಿಲ್ಲ. ಕೆಲವೊಮ್ಮೆ ಇವುಗಳು ನಮ್ಮ ಕನಸಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಅವುಗಳ ಅಸ್ತಿತ್ವವು ಇದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಬಿಳಿ ಬಣ್ಣದ ಸಿಂಹವನ್ನು ನಾವು ನಮ್ಮ ಕನಸಿನಲ್ಲಿ ನೋಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬಿಳಿ ಸಿಂಹದ ಕನಸು ಬಿದ್ದರೆ ನೀವು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದಲಿದ್ದೀರಿ ಎಂದರ್ಥ.

4. ಬಿಳಿ ಹಾವಿನ ಕನಸು:

ನೀವು ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದ ಹಾವುಗಳನ್ನು ನೋಡಿದರೆ ಅದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಕನಸುಗಳು ಬಿದ್ದರೆ ನಿಮ್ಮ ಅದೃಷ್ಟ ಶೀಘ್ರದಲ್ಲೇ ಬದಲಾಗಲಿದೆ ಎಂಬುದನ್ನು ಸಂಕೇತಿಸುತ್ತದೆ. ಶಿವನ ವಿಶೇಷ ಆಶೀರ್ವಾದವನ್ನು ಹೊಂದಿರುವವರು ಮಾತ್ರ ತಮ್ಮ ಕನಸಿನಲ್ಲಿ ಬಿಳಿ ಬಣ್ಣದ ಹಾವುಗಳನ್ನು ನೋಡುತ್ತಾರೆ

ಹಾಗಾಗಿ, ನೀವು ನಿಮ್ಮ ಕನಸಿನಲ್ಲಿ ಈ ಮೇಲಿನ ನಾಲ್ಕು ಬಿಳಿ ಜೀವಿಗಳನ್ನು ನೀಡಿದರೆ ನೀವು ಅದೃಷ್ಟವಂತರು ಎಂದರ್ಥ. ಈ ಕನಸುಗಳು ಬಿದ್ದಾಗ ನೀವು ಚಿಂತಿತರಾಗುವ ಬದಲು ಸಂತೋಷವನ್ನು ಅನುಭವಿಸಿ.

Continue Reading

LATEST NEWS

Trending