ರಾಯಚೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ.
ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇಟ್ಟು ಧ್ವಜಾರೋಹಣ ಮಾಡಲು ನ್ಯಾಯಾಧೀಶರು ನಿರಾಕರಣೆ ಮಾಡಿ ನಂತರದಲ್ಲಿ ಸರ್ಕಾರ ಆದೇಶದಂತೆ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಪೂಜೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಇಂದು ಇಲ್ಲಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಒಟ್ಟಿಗೆ ಇಟ್ಟು ಹೂ ಮಾಲೆ ಹಾಕಿ, ಪೂಜೆ ಮಾಡಿ ಪುಷ್ಪಾರ್ಚನೆ ಮತ್ತು ಧ್ವಜಾರೋಹಣಕ್ಕೆ ಸಿದ್ಧತೆ ಮಾಡಲಾಗಿತ್ತು.
ಈ ವೇಳೆ ಸ್ಥಳಕ್ಕೆ ಬಂದ ಜಿಲ್ಲಾ ನ್ಯಾಯಾಧೀಶರು ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಇಡಬೇಕೆಂದು ಯಾವುದೇ ಸೂಚನೆ, ಆದೇಶವಿಲ್ಲ. ಹೀಗಾಗಿ ಅಂಬೇಡ್ಕರ್ ಫೋಟೋ ತೆಗೆಯಬೇಕು ಎಂದು ಪಟ್ಟು ಹಿಡಿದರು.
ಹೀಗಾಗಿ ಕಾರ್ಯಕ್ರಮ ಆಯೋಜಕರು ಅಂಬೇಡ್ಕರ್ ಫೋಟೋ ತೆಗೆಯಲು ಮುಂದಾದರು.ಇದಕ್ಕೆ ಆಕ್ಷೇಪಿಸಿದ ಎಸ್ಸಿ-ಎಸ್ಟಿ ಮತ್ತು ಹಿಂದುಳಿದ ವರ್ಗಗಳ ವಕೀಲರು ಪ್ರತಿಭಟನೆ ನಡೆಸಿದ್ದು, ಧ್ವಜಾರೋಹಣ ಕಾರ್ಯಕ್ರಮವನ್ನು ವಿರೋಧಿಸಿ ಹೊರನಡೆದಿದ್ದು, ನ್ಯಾಯಾಧೀಶರು ಮತ್ತು ವಕೀಲರು ಕೆಲ ಕಾಲ ಜಟಾಪಟಿ ನಡೆಯಿತು.
ಬಳಿಕ ನ್ಯಾಯಾಧೀಶರು ಸರ್ಕಾರದ ಆದೇಶದ ಮಾಹಿತಿ ಪಡೆದು ಅಂಬೇಡ್ಕರ್ ಅವರ ಭಾವಚಿತ್ರವಿಟ್ಟು ಪೂಜೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಿಗೆ ವೈರಲ್ ಆಗಿದೆ.