DAKSHINA KANNADA
ಎಂ ಆರ್ ಜಿ ಗ್ರೂಪ್ ನಿಂದ ಅಶಕ್ತರಿಗೆ 1.25 ಕೋಟಿ ರೂ. ನೆರವು ವಿತರಣೆ :”ವಿದ್ಯಾರ್ಥಿಗಳು ನಮ್ಮ ದೇಶದ ನಿಜವಾದ ಆಸ್ತಿ” -ಕೆ. ಪ್ರಕಾಶ್ ಶೆಟ್ಟಿ..!
ಎಂ ಆರ್ ಜಿ ಗ್ರೂಪ್ ನಿಂದ ಅಶಕ್ತರಿಗೆ 1.25 ಕೋಟಿ ರೂ. ನೆರವು ವಿತರಣೆ : “ವಿದ್ಯಾರ್ಥಿಗಳು ನಮ್ಮ ದೇಶದ ನಿಜವಾದ ಆಸ್ತಿ” – ಕೆ. ಪ್ರಕಾಶ್ ಶೆಟ್ಟಿ..!
ಮಂಗಳೂರು: ಎಂ ಆರ್ ಜಿ ಗ್ರೂಪ್ ಇದರ ವತಿಯಿಂದ ಅನಾರೋಗ್ಯ ಪೀಡಿತರಿಗೆ, ಅಶಕ್ತರಿಗೆ, ವಿದ್ಯಾಭ್ಯಾಸದ ನೆರವಿಗೆ 1,25,75,000 ಕೋಟಿ ರೂ. ಮೊತ್ತದ ಸಹಾಯಧನ ವಿತರಣಾ ಕಾರ್ಯಕ್ರಮ ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಪ್ರಕಾಶಭಿನಂದನ ಆಯ್ಕೆ ಸಮಿತಿ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಫಲಾನುಭವಿಗಳ ಪಟ್ಟಿಯನ್ನು ವಾಚಿಸಿದರು.
ಬಳಿಕ ಮಾತಾಡಿದ ಎಂ ಆರ್ ಜಿ ಗ್ರೂಪ್ ಸಂಸ್ಥಾಪಕ ಕೆ. ಪ್ರಕಾಶ್ ಶೆಟ್ಟಿ ಅವರು, “1959 ರ ಜುಲೈ 19ರಂದು ನಾನು ಜನಿಸಿದೆ. ನಾನು ಅಂದಿನಿಂದ 20 ವರ್ಷಗಳ ಕಾಲ ಅನುಭವಿಸಿದ ಸಂಕಷ್ಟ ಇನ್ನು ಯಾರಿಗೂ ಬರಬಾರದು ಎಂಬ ಉದ್ದೇಶದಿಂದ ಅಶಕ್ತರಿಗೆ ಸಹಾಯ ಮಾಡುವ ನಿರ್ಧಾರ ಕೈಗೊಂಡೆ.
ಅನಂತರ ಬೆಂಗಳೂರಿಗೆ ಹೋಗಿ ಸಾಹಸಮಯವಾಗಿ ಜೀವನ ಕಟ್ಟಿಕೊಂಡೆ. ಇಂದು ಸಹಾಯ ಪಡೆದಿರುವ ವಿದ್ಯಾರ್ಥಿಗಳು ನಮ್ಮ ದೇಶದ ಆಸ್ತಿ, ಕಷ್ಟ ಎಲ್ಲರಿಗೂ ಬರುತ್ತದೆ, ಯಾವುದೂ ಶಾಶ್ವತವಲ್ಲ.
ಮುಂದಿನ ದಿನಗಳಲ್ಲಿ ಎಲ್ಲವೂ ಒಳಿತಾಗುತ್ತದೆ. ವಿದ್ಯಾರ್ಥಿಗಳು, ಅಶಕ್ತರು ಎದೆಗುಂದಬೇಕಿಲ್ಲ ಇಂದು ನಿಮ್ಮಲ್ಲಿ ಒಬ್ಬ ಪ್ರಕಾಶ್ ಶೆಟ್ಟಿ ಇರಬಹುದು ಆದರೆ ನಾಳೆ ನೂರಾರು ಪ್ರಕಾಶ್ ಶೆಟ್ಟಿ ಅಂತಹವರು ಹುಟ್ಟುತ್ತಾರೆ.
ಇಂದು ನನ್ನ ಸಂಸ್ಥೆಯಲ್ಲಿ ನೂರಾರು ಮಂದಿ ಕಷ್ಟಪಟ್ಟು ದುಡಿದ ಕಾರಣ ನಾನು ಇಂದು ನಿಮಗೆ ಸಹಾಯ ಮಾಡಲು ಸಾಧ್ಯವಾಗಿದೆ.” ಎಂದರು.
ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ 540ಕ್ಕೂ ಹೆಚ್ಚು ಸಂತ್ರಸ್ತರಿಗೆ ಸಹಾಯಧನ ವಿತರಿಸಿದ್ದು, ಅವರಲ್ಲಿ 50,000 ರೂ. ಚೆಕ್ ಅನ್ನು 50 ಜನರಿಗೆ, 25,000 ರೂ. ಚೆಕ್ ಅನ್ನು 160 ಜನರಿಗೆ, 20,000 ರೂ. ಚೆಕ್ ಅನ್ನು 60 ಜನರಿಗೆ,15,000 ರೂ. ಚೆಕ್ ಅನ್ನು 25 ಜನರಿಗೆ ಮತ್ತು 10,000 ರೂ. ಮೊತ್ತದ ಚೆಕ್ ಅನ್ನು 250 ಜನರಿಗೆ ವಿತರಿಸಲಾಯಿತು.
ಎಂಡೋಸಲ್ಫಾನ್ ಪೀಡಿತರು, ಕ್ಯಾನ್ಸರ್, ಕಿಡ್ನಿ ವೈಫಲ್ಯ, ಬುದ್ಧಿಮಾಂದ್ಯತೆ, ಪಕ್ಷವಾತ, ಬೆನ್ನುಹುರಿ ಮುರಿತಕ್ಕೊಳಗಾಗಿ ಹಾಸಿಗೆ ಹಿಡಿದಿರುವ ರೋಗಿಗಳಿಗೆ ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು. ಇದೇ ವೇಳೆ 10 ಅಸಹಾಯಕ ವಿದ್ಯಾರ್ಥಿಗಳಿಗೆ ತಲಾ 25,000 ರೂ. ಸಹಾಯಧನ ನೀಡಲಾಯಿತು.
ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಜನರಿಗೆ ಎರಡು ಕೋಟಿ ರೂ. ಮೌಲ್ಯದ ಆಹಾರ ಕಿಟ್ ವಿತರಿಸುವ ಮೂಲಕ ನೆರವಾಗಿತ್ತು.
ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ವಿಶ್ವ ಬಂಟರ ಸಂಘದ ಅಧ್ಯಕ್ಷ ಎ.ಜೆ. ಶೆಟ್ಟಿ, ಸದಾನಂದ ಶೆಟ್ಟಿ, ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಮೋಹನ್ ಆಳ್ವ, ಮನೋಹರ್ ಶೆಟ್ಟಿ ಸಾಯಿರಾಧ, ಜಯಕರ್ ಶೆಟ್ಟಿ ಇಂದ್ರಾಳಿ, ಪುರುಷೋತ್ತಮ್ ಶೆಟ್ಟಿ ಉಡುಪಿ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಮಂಗಳೂರು ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಸಂತೋಷ್ ಕುಮಾರ್ ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ಸುರೇಶ್ ಶೆಟ್ಟಿ, ರವಿ ಶೆಟ್ಟಿ ಉಡುಪಿ ಉಪಸ್ಥಿತರಿದ್ದರು. ಗುರ್ಮೆ ಸುರೇಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.
DAKSHINA KANNADA
ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು
ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.
DAKSHINA KANNADA
ಮಂಗಳೂರು: 30.98% ಮತದಾರರಿಂದ ಮತ ಚಲಾವಣೆ
ಮಂಗಳೂರು: 17-ದ.ಕ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ 30.98 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ.
ಸುಳ್ಯದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದ್ದು, 16.46 ಪ್ರತಿಶತ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮೂಡುಬಿದಿರೆ ಕ್ಷೇತ್ರದಲ್ಲಿ ಅತಿ ಕನಿಷ್ಠ ಮತ ಚಲಾವಣೆಯಾಗಿದ್ದು, 12.2 ಪ್ರತಿಶತ ಮತದಾರರು ಮತ ಚಲಾಯಿಸಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ಕಾರ್ ಸ್ಟ್ರೀಟ್ ಸರ್ಕಾರಿ ಬಾಲಕಿಯರ ಎಪಿಯು ಕಾಲೇಜಿನಲ್ಲಿ ಮತದಾರರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂತು.
DAKSHINA KANNADA
ಮಂಗಳೂರು: ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ; ಪೊಲೀಸ್ ಅಧಿಕಾರಿಗಳ ಜೊತೆಯಲ್ಲೇ ಅನುಚಿತ ವರ್ತನೆ
ಮಂಗಳೂರು: ನಗರದ ಕಪಿತಾನಿಯೋ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿ ಜೊತೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಪೊಲೀಸ್ ಹಾಗೂ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ ವಾಗ್ವಾದವುಂಟಾದ ಘಟನೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್. ಆರ್ ಪೂಜಾರಿಯವರು ಮತದಾನ ಮಾಡಿ ಹೊರಬಂದಾಗ ಮಾಧ್ಯಮದವರು ಗೇಟಿನ ಹೊರಭಾಗದಲ್ಲಿ ಅವರ ಹೇಳಿಕೆ ತೆಗೆದುಕೊಳ್ಳುತ್ತಿದ್ದರು. ಆಗ “ಎಷ್ಟು ಹೊತ್ತು ಪ್ರತಿಕ್ರಿಯೆ ಪಡೆಯುವುದು”ಎಂದು ಸಂದೀಪ್ ಎಕ್ಕೂರು ಎಂಬಾತ ಕ್ಯಾತೆ ತೆಗೆದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಸೇರಿದಂತೆ ಇತರ ಪೊಲೀಸರು ಆತನನ್ನು ತಳ್ಳಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ಈ ವೇಳೆ ಆತನೊಂದಿಗೆ ಇದ್ದವರು ಸಮಾಧಾನ ಮಾಡಲು ಯತ್ನಿಸಿದರೂ, ಆತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ವಾಗ್ವಾದ ನಡೆಸಿದ್ದಾನೆ. ಆಗ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಪೊಲೀಸರು ಅಲ್ಲಿಂದ ಹಿಂದಿರುಗಿದ ಬಳಿಕ ತಂಡದಲ್ಲಿದ್ದ ಮತ್ತೊಬ್ಬ ಘಟನೆಯ ದೃಶ್ಯ ಚಿತ್ರೀಕರಿಸುತ್ತಿದ್ದ ಮಾಧ್ಯಮ ವರದಿಗಾರರ ಮೇಲೆ ಹರಿಹಾಯ್ದಿದ್ದಾನೆ. ಈ ವೇಳೆ ಪತ್ರಕರ್ತರೊಂದಿಗೂ ತಂಡದಿಂದ ವಾಗ್ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ವೇಳೆ ಆತನ ಮೇಲೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುತ್ತೇನೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.