Ancient Mangaluru
ಉಡುಪಿ ಪರಿಹಾರ ಕಾಣದ ನೀರಿನ ಸಮಸ್ಯೆ: ಖಾಲಿ ಕೊಡಗಳೊಂದಿಗೆ ಅಂಬಲಪಾಡಿ ಗ್ರಾಪಂ ಕಚೇರಿಗೆ ಗ್ರಾಮಸ್ಥರ ಮುತ್ತಿಗೆ..!
ಸಕಾಲದಲ್ಲಿ ಮುಂಗಾರು ಮಳೆ ಬಾರದ ಕಾರಣ ಉಡುಪಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಜೋರಾಗಿದೆ.
ಉಡುಪಿ: ಸಕಾಲದಲ್ಲಿ ಮುಂಗಾರು ಮಳೆ ಬಾರದ ಕಾರಣ ಉಡುಪಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಜೋರಾಗಿದೆ.
ಕಳೆದೆರಡು ತಿಂಗಳುಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಅಂಬಲಪಾಡಿ ಗ್ರಾಮ ಪಂಚಾಯತ್ ಕಚೇರಿಗೆ ಶನಿವಾರ ಖಾಲಿ ಕೊಡದೊಂದಿಗೆ ನುಗ್ಗಿದ ಗ್ರಾಮಸ್ಥರು, ಕಚೇರಿಯೊಳಗೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ಕಿದಿಯೂರು ಗ್ರಾಮದ ದಿಡ್ಡಿ ಮನೆಗಳಿಗೆ ಕಳೆದ ಎರಡು ತಿಂಗಳುಗಳಿಂದ ಸಮರ್ಪಕವಾಗಿ ಗ್ರಾಪಂ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಕಚೇರಿ ಆವರಣಕ್ಕೆ ಆಗಮಿಸಿದರು.
ಗ್ರಾಪಂ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದ ಮಹಿಳೆಯರು ನೇರವಾಗಿ ಕೊಡಗಳೊಂದಿಗೆ ನೇರ ಕಚೇರಿಯೊಳಗೆ ನುಗ್ಗಿದರು.
ಕಚೇರಿಯೊಳಗೆ ಕೊಡಗಳನ್ನಿಟ್ಟು ಧರಣಿ ಕುಳಿತು ಸ್ಥಳಕ್ಕೆ ಅಧ್ಯಕ್ಷರು ಹಾಗೂ ಪಿಡಿಓ ಆಗಮಿಸಿ ನೀರಿನ ಸಮಸ್ಯೆ ಪರಿಹರಿಸಿಕೊಡುವಂತೆ ಪಟ್ಟು ಹಿಡಿದರು.
ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ನೀರು ಕೊಡಲು ಸಾಧ್ಯವಾಗದ ಪಂಚಾಯತ್ಗೆ ಬೀಗ ಹಾಕಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಳೆದ ಎರಡು ತಿಂಗಳಿನಲ್ಲಿ ಮೂರು ಬಾರಿ ಮಾತ್ರ ನೀರು ಕೊಟ್ಟಿದ್ದಾರೆ. ಅದರ ನಂತರ ನೀರು ಕೊಡಲಿಲ್ಲ. ಸ್ಥಳೀಯರೊಬ್ಬರು ನಮಗೆ ನೀರು ಪೂರೈಕೆ ಮಾಡುತ್ತಿದ್ದಾರೆ.
ಅವರು ನೀರು ಪೂರೈಸದಿದ್ದರೆ ನಮಗೆ ನೀರೇ ಇಲ್ಲ. ನಾವು ಇನ್ನು ಎಲ್ಲಿಗೆ ಹೋಗುವುದು. ಕೆಲವು ಪ್ರದೇಶಗಳಿಗೆ ಗ್ರಾಪಂನವರು ನೀರು ಕೊಡುತ್ತಾರೆ.
ಆದರೆ ನಮ್ಮಲ್ಲಿಗೆ ಬರುವುದಿಲ್ಲ. ಸುಮಾರು 80 ಮನೆಯವರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರಾದ ಬೇಬಿ ಆರೋಪಿಸಿದರು.
ಬಳಿಕ ಕಚೇರಿಗೆ ಆಗಮಿಸಿದ ಗ್ರಾಪಂ ಅಧ್ಯಕ್ಷೆ ರೋಹಿಣಿಯವರೊಂದಿಗೆ ನೀರಿನ ಸಮಸ್ಯೆ ಕುರಿತು ಧರಣಿನಿರತರು ವಾಗ್ವಾದ ನಡೆಸಿದರು.
ಎರಡು ತಿಂಗಳುಗಳಿಂದ ನೀರಿಲ್ಲದೆ ಜನ ಪರದಾಡುತ್ತಿದ್ದರೂ ಅಧ್ಯಕ್ಷರು ಒಮ್ಮೆಯೂ ಭೇಟಿ ನೀಡದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು.ಬಳಿಕ ಮಾತುಕತೆ ನಡೆಸಿ, ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವುದಾಗಿ ಅಧ್ಯಕ್ಷರು ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ವಾಪಾಸ್ ಪಡೆದರು.
Ancient Mangaluru
ಮಂಗಳೂರು ವಿಮಾನ ನಿಲ್ದಾಣವಿನ್ನು ನಿಶ್ಶಬ್ದ ವಲಯ!
ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇನ್ನು ಮುಂದೆ ನಿಶ್ಶಬ್ದ ವಲಯವಾಗಿರಲಿದೆ. ಹೌದು, ಇನ್ನು ಮುಂದೆ ವಿಮಾನ ನಿಲ್ದಾಣದಲ್ಲಿ ಏರ್ಲೈನರ್ಗಳಿಂದ ಯಾವುದೇ ಪ್ರಯಾಣಿಕರ ಮಾಹಿತಿ ಕುರಿತ ಅನೌನ್ಸ್ ಮೆಂಟ್ ಇರುವುದಿಲ್ಲ. ಪ್ರಯಾಣಿಕರು ಫ್ಲೈಟ್ ಇನ್ಫಾರ್ಮೇಶನ್ ಡಿಸ್ಪ್ಲೇ ಸಿಸ್ಟಂ ಫಲಕಗಳನ್ನು ನೋಡಿ ಮಾಹಿತಿ ಪಡೆದುಕೊಳ್ಳ ಬೇಕಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಸಹಾಯಕ್ಕಾಗಿ ಯಾರನ್ನು ಸಂಪರ್ಕಿಸಬೇಕು?
ವಿಮಾನ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಇನ್ನು ಮುಂದೆ ವಿಮಾನಗಳ ಹಾರಾಟದ ಮಾಹಿತಿಗಳು ಫ್ಲೈಟ್ ಇನ್ಫಾರ್ಮೇಶನ್ ಡಿಸ್ಪ್ಲೇ ಸಿಸ್ಟಂ ಫಲಕಗಳಲ್ಲಿ ಅನಾವರಣಗೊಳ್ಳಲಿದೆ. ವಿಮಾನ ನಿಲ್ದಾಣದ ಹಲವು ಕಡೆಗಳಲ್ಲಿ ಈ ಡಿಸ್ಪ್ಲೇಗಳನ್ನು ಇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿ ‘ಮೇ ಐ ಹೆಲ್ಪ್ ಯು’ ಡೆಸ್ಕ್ ನಿರ್ವಹಿಸುವ ಸಿಬಂದಿ, ಗ್ರಾಹಕ ಸೇವೆ ಮತ್ತು ಅತಿಥಿ ಸಂಬಂಧಗಳ ಕಾರ್ಯನಿರ್ವಾಹಕರು, ಪ್ರಣಾಮ್ ಸಿಬಂದಿ ಕೂಡಾ ಮಾಹಿತಿಯೊಂದಿಗೆ ಪ್ರಯಾಣಿಕರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ.
ಇದನ್ನೂ ಓದಿ : ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಬೀರಲಿದೆ; ಸತ್ಯ ಒಪ್ಪಿಕೊಂಡ ಆಸ್ಟ್ರಾಜೆನಿಕಾ! ಏನಿದರ ಪರಿಣಾಮ?
ಎಸ್.ಎಂ.ಎಸ್ ಮೂಲಕ ಮಾಹಿತಿ :
ಎಲ್ಲಾ ಏರ್ಲೈನ್ ಚೆಕ್-ಇನ್ ಕೌಂಟರ್ಗಳು, ಬೋರ್ಡಿಂಗ್ ಗೇಟ್ಗಳಲ್ಲಿ ವಿಮಾನದ ಮಾಹಿತಿಯನ್ನು ವೀಕ್ಷಿಸ ಬಹುದು. ಬೋರ್ಡಿಂಗ್ ಗೇಟ್ ಬದಲಾವಣೆಗಳು/ ವಿಮಾನ ಮರು ವೇಳಾಪಟ್ಟಿ ವಿವರಗಳನ್ನು ಎಸ್.ಎಂ.ಎಸ್. ಮೂಲಕ ಪ್ರಯಾಣಿಕರ ನೋಂದಾಯಿತ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯಲ್ಲೂ ಕೂಡಾ ಏರ್ಲೈನ್ ಹಂಚಿಕೊಳ್ಳಲಿದೆ ಎಂದು ವಿವರಿಸಿದ್ದಾರೆ.
Ancient Mangaluru
ನೀರಿನ ಅಭಾವ ತಪ್ಪಿಸಲು ಟ್ಯಾಂಕರ್ ಮಾನಿಟರಿಂಗ್ ಆಪ್ ಅನುಷ್ಠಾನ-ಯು.ಟಿ ಖಾದರ್
ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಅಭಾವ ತಪ್ಪಿಸಲು ಟ್ಯಾಂಕರ್ ಮಾನಿಟರಿಂಗ್ ಆಪ್ನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು. ತಾಂತ್ರಿಕ ತೊಂದರೆಗಳಾಗದಂತೆ ಪೂರ್ವಭಾವಿಯಾಗಿ ಅಧಿಕಾರಿಗಳಿಗೆ, ಪಿಡಿಓಗಳಿಗೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಹೇಳಿದ್ದಾರೆ.
ಅವರು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧಿಕಾರಿಗಳು , ಅಧ್ಯಕ್ಷರು, ಉಪಾಧ್ಯಕ್ಷರು , ಉಳ್ಳಾಲ ತಾಲೂಕು ತಹಶೀಲ್ದಾರ್ಸಮ್ಮುಖದಲ್ಲಿ ಹಮ್ಮಿಕೊಂಡ ಕುಡಿಯುವ ನೀರು ಕುರಿತ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು “ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಮಂಗಳೂರು ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಯೋಜನೆಗೆ ತೊಂದರೆಯಾಗದಂತೆ ಅಧಿಕಾರಿಗಳು, ಪಿಡಿಓ, ಸೆಕ್ರೆಟರಿಗಳು ಪಂಚಾಯಿತಿ ಅಧ್ಯಕ್ಷರು , ಗ್ರಾಮದ ಹಿರಿಯರನ್ನು ಕ್ರೂಢೀಕರಿಸಿಕೊಂಡು ಟಾಸ್ಕ್ಫೋರ್ಸ್ ರಚಿಸಲಾಗಿದೆ. ಕಳೆದ ವರ್ಷ ಯಾವ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ ಅನ್ನುವ ಕುರಿತು ವರದಿಯನ್ನು ಅಧಿಕಾರಿಗಳಿಂದ ಪಡೆಯಲಾಗಿದೆ.
ಆ ಭಾಗಗಳಲ್ಲಿ ಪ್ರಸಕ್ತ ವರ್ಷ ತೊಂದರೆಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಹಾಗೂ ಅಧಿಕಾರಿಗಳು ಪೂರ್ವಭಾವಿಯಾಗಿ ತಯಾರಿರಬೇಕು ಅನ್ನುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಮೊದಲ ಪ್ರಯತ್ನವಾಗಿ ಕುಡಿಯುವ ನೀರಿನ ಟ್ಯಾಂಕರುಗಳಿಗೆ ಮಾನಿಟರಿಂಗ್ಆಪ್ ಯೋಜನೆಯನ್ನು ರೂಪಿಸಲಾಗಿದೆ. ಅದರ ಸಾಧಕ ಬಾಧಕ ಹಾಗೂ ತಾಂತ್ರಿಕ ವಿಚಾರಗಳ ಕುರಿತು ಅಧಿಕಾರಿ ವರ್ಗದವರಿಗೆ ಅರಿಯಲು ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲು ಸೂಚಿಸಲಾಗಿದೆ. ಕ್ಷೇತ್ರದಲ್ಲಿ ಸಮಗ್ರವಾಗಿ ಜಾರಿಯಾದಲ್ಲಿ ರಾಜ್ಯದಲ್ಲಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ರಾಜ್ಯದಾದ್ಯಂತ ನೀರಿನ ಅಭಾವ ತಪ್ಪಿಸಲು ಪ್ರಾಮಾಣಿಕ ಪ್ರಯತ್ನವನ್ನು ಕೈಗೊಳ್ಳಲಾಗುವುದು. ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ 200 ಕೋಟಿ ರೂ. ಅನುದಾನ ಬಿಡುಗಡೆಯಾಗುವ ಕೊನೆಯ ಹಂತದಲ್ಲಿದೆ.
ಉಳ್ಳಾಲ ನಗರ ವ್ಯಾಪ್ತಿಯ ಕೆಲಸ ಪೂರ್ಣಗೊಂಡರೂ, ಗ್ರಾಮೀಣ ಮಟ್ಟಕ್ಕೆ ಎರಡು ವರ್ಷಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ. ಟೆಂಡರ್ಪ್ರಕ್ರಿಯೆ ನಡೆದು ಎರಡು ವರ್ಷ ಬೇಕಾಗುತ್ತದೆ. ಆನಂತರ ನೀರಿನ ವ್ಯವಸ್ಥೆ ಆಗಲಿದೆ. ಗ್ರಾಮ ಪಂಚಾಯತ್ ನವರು ವರ್ಷಕ್ಕೆ 12 ಲಕ್ಷ ನೀರಿಗಾಗಿ ಗ್ರಾ.ಪಂ.ನಿಂದ ಕೊಡುವ ಬದಲು ಟ್ಯಾಂಕರ್ ಖರೀದಿಗೆ ಕೇಳಿಕೊಂಡಿದ್ದಾರೆ. ಆದರೆ ಸರಕಾರದಿಂದ ಟ್ಯಾಂಕರ್ ಬಾಡಿಗೆ ಪಡೆಯಲು ಮಾತ್ರ ಅವಕಾಶವಿದೆ. ಕರಾರು ಪತ್ರದಂತೆ ಟ್ಯಾಂಕರ್ಅನ್ನು ಸದ್ಯಕ್ಕೆ ನೀಡಬಹುದು. ಮುಂದೆಯೂ ಸಮಸ್ಯೆ ಮುಂದುವರಿದಲ್ಲಿ ರಾಜ್ಯದ ಸಚಿವರುಗಳನ್ನು ಚರ್ಚಿಸಲಾಗುವುದು ಎಂದರು.ಜಲಯೋಜನೆ, ಕಂದಾಯ , ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನಾ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ಫೋರ್ಸ್ಕುಡಿಯುವ ನೀರಿನ ಯೋಜನೆಯಲ್ಲಿ ಕಾರ್ಯಾಚರಿಸಲಿದೆ. ಇಲಾಖೆಗಳ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ತಹಶೀಲ್ದಾರ್ಪುಟ್ಟರಾಜು ಡಿ, ಉಪತಹಶೀಲ್ದಾರ್ನವನೀತ್ಮಾಳವ, ಕಂದಾಯ ನಿರೀಕ್ಷಕ ಪ್ರಮೋದ್ಕುಮಾರ್, ಕೃಷಿ ಇಲಾಖೆ ಅಧಿಕಾರಿ ವೀಣಾ ರೈ, ಮಂಗಳೂರು ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾ.ಪಂ ಅಧ್ಯಕ್ಷರು ಭಾಗವಹಿಸಿದ್ದರು.
Ancient Mangaluru
ಕುಂದಾಪುರ: 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ
ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ ಬಿ.ಮಂಜುನಾಥ್ ಪೂಜಾರಿ ಬಂಧಿತ ಆರೋಪಿ.
ಅರಣ್ಯ ಇಲಾಖೆ ವಶದಲ್ಲಿದ್ದ ಆಲೂರಿನ ಆದಿತ್ಯ ಎಂಬವರ ವಾಹನ ಬಿಡುಗಡೆಗಾಗಿ ಮಂಜುನಾಥ್ ಪೂಜಾರಿ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಲಂಚ ನೀಡಲು ನಿರಾಕರಿಸಿದ ಆದಿತ್ಯ ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆದಿತ್ಯ ಅವರಿಂದ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಮಂಜುನಾಥ್ ಪೂಜಾರಿಯನ್ನು ಬಂಧಿಸಿದರು. ಲೋಕಾಯುಕ್ತ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಸಿ. ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಮತ್ತು ರಫೀಕ್ ಹಾಗೂ ಸಿಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
- FILM7 days ago
“ನಿತ್ಯಾಮೆನನ್” ಚಿತ್ರರಂಗದಿಂದ ‘ಬ್ಯಾನ್’ ಆಗಲು ಕಾರಣವೇನು ಗೊತ್ತಾ? ಈ ಬಗ್ಗೆ ನಿತ್ಯಾ ಹೇಳಿದ್ದೇನು?
- DAKSHINA KANNADA7 days ago
ನಮ್ಮ ಮಾತುಗಳಿಗೆ ಅಸ್ತು ಅನ್ನುವ ಅಶ್ವಿನಿ ದೇವತೆಗಳು – ಯಾರಿವರು?
- LATEST NEWS7 days ago
ಕಾಲಿನ ಮೂಲಕವೇ ಕಾರು ಚಲಾಯಿಸಿ, ಡ್ರೈವಿಂಗ್ ಲೈಸೆನ್ಸ್ ಪಡೆದ ಏಷ್ಯಾದ ಮೊದಲ ಮಹಿಳೆ!
- DAKSHINA KANNADA6 days ago
ಪತ್ನಿ ಮಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪದ್ಮರಾಜ್ ಪೂಜಾರಿ