DAKSHINA KANNADA
ಕೊನೆಗೂ ಕಾನೂನಿಗೆ ತಲೆ ಬಾಗಿ ಠಾಣೆಗೆ ಹಾಜರಾದ ಶಾಸಕ, ಜಾಮೀನು
ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಶಾಸಕ ಹರೀಶ್ ಪೂಂಜರ ವಿರುದ್ಧ, ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ, ಆರೋಪಿ ಹರೀಶ್ ಪೂಂಜರನ್ನು, ವಿಚಾರಣೆಗಾಗಿ ಠಾಣೆಗೆ ಕರೆತರಲು, ಬೆಳ್ತಂಗಡಿ ಠಾಣಾ ಪೊಲೀಸರು ಪೂಂಜಾ ಅವರ ಮನೆಗೆ ತೆರಳಿದ್ದ ವೇಳೆ ನಿನ್ನೆ ಉದ್ವಿಗ್ನ ಸ್ಥಿತಿ ನಿರ್ಮಾಣ ವಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳೀನ್ ಕುಮಾರ್ ಕಟೀಲ್ ತಾನೇ ಖುದ್ದಾಗಿ ಹರೀಶ್ ಪೂಂಜಾರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ವಿನಂತಿಸಿದ ಹಿನ್ನೆಲೆಯಲ್ಲಿ ಬಳಿಕ ಹರೀಶ್ ಪೂಂಜಾರನ್ನು ಪೊಲೀಸರೊಂದಿಗೆ ಠಾಣೆ ಕರೆದುಕೊಂಡು ಬಂದಿದ್ದು, ಠಾಣೆಯಲ್ಲಿ ವಿಚಾರಣೆ ಮಾಡಲಾಗಿದೆ.
ಬೆಳ್ತಂಗಡಿ ಠಾಣಾ 58/2024 , ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರನ್ನು, ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್ ಜಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ. ಮುಂಜಾನೆಯಿಂದ ಶಾಸಕ ಹರೀಶ್ ಪೂಂಜಾ ಮನೆ ಮುಂದೆ ಹೈಡ್ರಾಮ ನಡೆದು ರಾತ್ರಿ ವೇಳೆ ಪೊಲೀಸರು ವಾಪಾಸಾಗಿದ್ದರು. ಬಿಜೆಪಿ ಶಾಸಕರು, ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಶಾಸಕರ ಬಂಧನ ವಿರೋಧಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅವರನ್ನು ಬಂಧಿಸಿದರೆ ಜಿಲ್ಲೆ ಬಂದ್ ಮಾಡುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು.
Read More..; ಶಾಸಕನ ಬಂಧನಕ್ಕೆ ಮುಂದಾದ ಪೊಲೀಸರು…! ಎಚ್ಚರಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ…!
ಇದೇ ವೇಳೆ ಘಟನೆಯ ವಿಚಾರವಾಗಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಹರಿಹಾಯ್ದು ಡಿಜಿಪಿ ಶಂಕರ್ ಬಿದರಿಯ ಕಾಲರ್ ಪಟ್ಟಿಯನ್ನು ಹಿಡಿದ ವಿಚಾರ ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ್ರು. ನಾನು ವಿನಾ ಕಾರಣ ಪ್ರಕರಣದಲ್ಲಿ ಸಿಲುಕಿಸಿದ ನಮ್ಮ ಪಕ್ಷದ ಮೋರ್ಚಾದ ಅಧ್ಯಕ್ಷನ ಪರವಾಗಿ ಮಾತನಾಡಲು ಹೋಗಿದ್ದೆ ಹೊರತು ಯಾರದೇ ಕಾಲರ್ ಪಟ್ಟಿ ಹಿಡಿದಿಲ್ಲ ಎಂದು ತಮ್ಮ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಸ್ಫೋಟಕ ಪ್ರಕರಣದಲ್ಲಿ ಬಿಜೆಪಿ ಯುವಮೋರ್ಚ ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧಿತನಾಗಿದ್ದಾನೆ. ಆತನ ಪರ ಪ್ರತಿಭಟನೆ ಮಾಡಿ ಶಾಸಕ ಹರೀಶ್ ಪೂಂಜಾ ಕೂಡಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅರೆಸ್ಟ್ ನಿಂದ ತಪ್ಪಿಸಿಕೊಂಡು ಬಿಜೆಪಿ ಪ್ರಮುಖರ ಜೊತೆಯಲ್ಲಿ ಪೊಲೀಸ್ ಠಾಣೆಗೆ ಬಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದು, ಸ್ಟೇಷನ್ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ.
DAKSHINA KANNADA
ಇನ್ಮುಂದೆ ಪರೀಕ್ಷೆಗಳಲ್ಲಿ ಅಕ್ರಮ, ಪೇಪರ್ ಲೀಕ್ ಮಾಡಿದ್ರೆ 1 ಕೋಟಿ ರೂ ದಂಡ..!
ನವದೆಹಲಿ: National Eligibility Test (NET) ಹಾಗೂ National Eligibility cum Entrance Test (NEET) ಪರೀಕ್ಷೆ ಪತ್ರಿಕೆಗಳು ಸೋರಿಕೆ ಆಗಿರೋದು ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಈ ಸಂಬಂಧ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಕಾಯ್ದೆ ಜಾರಿಗೆ ತಂದಿದ್ದು, ಕಠಿಣ ಶಿಕ್ಷೆಯ ಜೊತೆಗೆ 1 ಕೋಟಿ ರೂಪಾಯಿ ದಂಡ ಇರುತ್ತದೆ ಎಂದು ಕಾಯ್ದೆ ಹೇಳುತ್ತದೆ.
ನೀಟ್-ಯುಜಿ ಹಾಗೂ ಯುಜಿಸಿ-ನೆಟ್ ಪರೀಕ್ಷೆಗಳನ್ನು ಮೇ 5ರಂದು ನಡೆಸಲಾಗಿತ್ತು. ಈ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ. ನೀಟ್-ಯುಜಿ ಹಾಗೂ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಸದ್ಯ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತವೆ.
ಬೆನ್ನಲ್ಲೇ ಕೇಂದ್ರ ಸರ್ಕಾರ ಕಠಿಣ ಕಾಯ್ದೆಯನ್ನು ಜಾರಿ ಮಾಡಿದೆ. ಕಾಯ್ದೆ ಪ್ರಕಾರ ಅಪರಾಧಿಗಳಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ.ವರೆಗೆ ದಂಡ ವಿಧಿಸಲು ಅವಕಾಶ ಇರುತ್ತದೆ ಎಂದು ಕಾಯ್ದೆ ಹೇಳುತ್ತದೆ. ಇದೇ ಕಾಯ್ದೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ), ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ), ರೈಲ್ವೇಸ್, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಇಂತಹ ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ ಎಂದು ಹೇಳಲಾಗುತ್ತಿದೆ.
ಪರೀಕ್ಷೆಯ ಪತ್ರಿಕೆಗಳನ್ನು ಸೋರಿಕೆ ಮಾಡುವ ಅಥವಾ ಉತ್ತರ ಪತ್ರಿಕೆಗಳನ್ನು ತಿದ್ದುವ ಅಪರಾಧಿಗಳಿಗೆ 3 ವರ್ಷಗಳಿಂದ 5 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ಕಾಯ್ದೆ ಸೂಚಿಸುತ್ತದೆ. 10 ಲಕ್ಷ ರೂಪಾಯಿವರೆಗೆ ದಂಡ ಕೂಡ ಕಟ್ಟಬೇಕಾಗುತ್ತದೆ.
ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಗೊತ್ತಾದರೆ ಪೊಲೀಸರು ವಾರಂಟ್ ಇಲ್ಲದೆ ವ್ಯಕ್ತಿಗಳನ್ನು ಬಂಧಿಸಬಹುದು. ಅಕ್ರಮ ನಡೆದಿರುವುದು ಸತ್ಯವೆಂದು ತಿಳಿದರೆ ಕೋರ್ಟ್ನಲ್ಲಿ ತಪ್ಪಿತಸ್ತರಿಗೆ ಜಾಮೀನು ಕೂಡ ಸಿಗುವುದಿಲ್ಲ. ಪ್ರಸ್ತುತ ಅಪರಾಧದ ಬಗ್ಗೆ ಗೊತ್ತಿದ್ದರು ಆದರೆ ಅದನ್ನು ವರದಿ ಮಾಡಲು ವಿಫಲರಾಗುವ ಪರೀಕ್ಷಾ ಸೇವಾ ಪೂರೈಕೆದಾರರಿಗೆ ಹಾಗೂ ದುಷ್ಕೃತ್ಯದಲ್ಲಿ ತೊಡಗುವ ಪರೀಕ್ಷಾ ಅಧಿಕಾರಿಗಳು 1 ಕೋಟಿ ರೂ.ಗಳವರೆಗೆ ದಂಡ ವಿಧಿಸಬಹುದು. ಜೊತೆಗೆ ಇವರಿಗೆ 5 ವರ್ಷದಿಂದ 10 ವರ್ಷದವರೆಗೆ ಶಿಕ್ಷೆ ನೀಡಲಾಗುತ್ತದೆ ಎಂದು ಕಾಯ್ದೆ ಹೇಳುತ್ತದೆ.
chikkamagaluru
ಇವೆರಡೂ ತಾಣದಲ್ಲಿ ಟ್ರಕ್ಕಿಂಗ್ ನಿರ್ಬಂಧ..!
ಮಂಗಳೂರು : ಮಳೆಗಾಲದಲ್ಲಿ ಮಲೆನಾಡಿಗೆ ಹೋದಾಗ ಸಿಗುವ ಅನುಭವವೇ ಬೇರೆ ಆದ ಕಾರಣ ಮಲೆನಾಡಿನ ಟೂರಿಸ್ಟ್ ಹಾಟ್ಸ್ಪಾಟ್ ಮಳೆಗಾಲದಲ್ಲಿ ಫುಲ್ ಆಗುತ್ತದೆ. ಇನ್ನು ಹಾಟ್ ಫೇವರೇಟ್ ಸ್ಪಾಟ್ ಆಗಿರುವ ಮುಳ್ಳಯ್ಯನಗಿರಿ, ಎತ್ತಿನಭುಜ ಸೇರಿದಂತೆ ಹಲವಾರು ಪ್ಲೇಸ್ಗಳು ಪ್ರವಾಸಿಗರಿಗೆ ಸ್ವರ್ಗವೇ ಸರಿ. ಹೀಗಾಗಿ ಕಳೆದ ಭಾನುವಾರ ( ಜೂನ್ 16 ) ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಳ್ಳಯ್ಯನಗಿರಿ ಹಾಗೂ ಎತ್ತಿನಭುಜ ಟೂರಿಸ್ಟ್ ಸ್ಪಾಟ್ಗೆ ಸಾವಿರಾರು ಜನ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಳೆದ ಭಾನುವಾರ 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಎತ್ತಿನಭುಜಕ್ಕೆ ಟ್ರಕ್ಕಿಂಗ್ ಮಾಡಿದ್ದರು. ಆದ್ರೆ ಇದೀಗ ಸರ್ಕಾರ ಈ ಎರಡೂ ತಾಣಗಳಿಗೆ ಪ್ರವಾಸಿಗರು ಹೋಗದಂತೆ ನಿಷೇಧ ಹೇರಿದೆ.
ಚಿಕ್ಕಮಗಳೂರು ಜಿಲ್ಲೆಗೆ ಹೋಗುವ ಪ್ರವಾಸಿಗರಿಗೆ ಎತ್ತಿನಭುಜ ಹಾಗೂ ಮುಳ್ಳಯ್ಯನಗಿರಿ ಎರಡೂ ಕೂಡಾ ಹಾಟ್ ಫೇವರೇಟ್ ಜಾಗ. ಆದ್ರೆ ಸರ್ಕಾರ ಈ ಎರಡೂ ಪ್ರವಾಸಿತಾಣಕ್ಕೆ ಹೋಗದಂತೆ ತಾತ್ಕಾಲಿಕ ನಿಷೇಧ ಹೇರಿದೆ. ಈ ಹಿಂದೆಯೇ ರಾಜ್ಯದ ಚಾರಣ ಪಥಗಳಿಗೆ ಆನ್ಲೈನ್ ಬುಕ್ಕಿಂಗ್ ಮಾಡಿ ನಿಯಮಿತ ಸಂಖ್ಯೆಯ ಪ್ರವಾಸಿಗರಿಗೆ ಮಾತ್ರ ಹೋಗಲು ಅನುಮತಿ ನೀಡಿತ್ತು. ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕಾರಣ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಹೇಳಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ಪ್ಲಾಸ್ಟಿಕ್ , ಸೇರಿದಂತೆ ತ್ಯಾಜ್ಯಗಳು ಅರಣ್ಯ ವ್ಯಾಪ್ತಿಯಲ್ಲಿ ಸಂಗ್ರಹ ಆಗುವ ಕಾರಣ ಈ ನಿಯಮ ಜಾರಿಗೆ ತಂದಿರುವುದಾಗಿ ಹೇಳಿದ್ದರು.
ಕಳೆದ ಭಾನುವಾರ ಈ ನಿಯಮ ಉಲ್ಲಂಘಿಸಿ ಸಾವಿರಾರು ಜನರು ಎತ್ತಿನಭುಜ ಹಾಗೂ ಮುಳ್ಳಯ್ಯನಗಿರಿಗೆ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೆ ಅಲ್ಲಿನ ಅರಣ್ಯ ಅಧಿಕಾರಿಗಳೇ ಕಾರಣವಾಗಿದ್ದು , ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ಅರಣ್ಯ ಸಚಿವರು ನೀಡಿ ಈ ಎರಡೂ ಪ್ರವಾಸಿತಾಣಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದಾರೆ. ಪ್ರವಾಸಿಗರು ಪ್ರಕೃತಿಯ ವೀಕ್ಷಣೆ ಮಾಡುವುದಕ್ಕೆ ಯಾವುದೇ ಆಕ್ಷೇಪ ಇಲ್ಲವಾದ್ರೂ ಪರಿಸರವನ್ನು ಹಾಳು ಮಾಡುವ ಬಗ್ಗೆ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದೆ ಚಾರಣಿಗರಿಂದ ಆಗುವ ಪರಿಸರ ಹಾನಿಯನ್ನು ತಪ್ಪಿಸಲು ಕೆಲವೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಚಾರಣಗರಿಂದ ಮುಂಗಡ ಹಣ ಪಡೆದುಕೊಂಡು ಪ್ಲಾಸ್ಟಿಕ್ ಹಾಗೂ ಇತರ ಏಕಬಳಕೆಯ ವಸ್ತುಗಳನ್ನು ವಾಪಾಸು ತಂದಲ್ಲಿ ಮುಂಗಡ ಹಣ ವಾಪಾಸು ನೀಡಲಾಗುತ್ತದೆ. ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆಯಾಗಿ ಈ ರೀತಿಯ ಕಠಿಣ ಕ್ರಮದ ಅಗತ್ಯ ಇದೆ ಎಂದು ಈ ಬಗ್ಗೆ ಚಿಂತಿಸಲಾಗಿದೆ.
BANTWAL
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ.
ವಿಟ್ಲ: ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನದ ವಿದ್ಯಾರ್ಥಿಗಳಾದ ಸಂಜನಾ ರಜಪೂತ ಹಾಗೂ ಪಿ ಕೆ ವಿಕಾಸ್ ಯೋಗ ಮಾರ್ಗದರ್ಶಕರಾಗಿ ಆಗಮಿಸಿ, ಹಲವಾರು ಯೋಗದ ಆಸನಗಳನ್ನು ಪ್ರದರ್ಶಿಸಿ ಅದರ ಮಹತ್ವವನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ್ ಶೆಟ್ಟಿ ಜೆ,ಶಾಲಾ ಪ್ರಾಂಶುಪಾಲರಾದ ರವೀಂದ್ರ ದರ್ಬೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಸ್ಥೆಯ ಸಹ ಶಿಕ್ಷಕಿಯರಾದ ಶೋಭಾ ಎಂ ಶೆಟ್ಟಿ ಹಾಗೂ ಜಯಶೀಲ ಕಾರ್ಯಕ್ರಮ ನಿರ್ವಹಿಸಿದರು.