DAKSHINA KANNADA
‘ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿಯ ಸರ್ಕಾರದ ಆಳ್ವಿಕೆ’-ಯು.ಟಿ ಖಾದರ್
ಮಂಗಳೂರು: ಮಡಿಕೇರಿಯಲ್ಲಿ ಪೊನ್ನಂಪೇಟೆಯಲ್ಲಿ ಭಜರಂಗದಳ ಕಾರ್ಯಕರ್ತರಿಗೆ ಆಯುಧ ತರಬೇತಿ ಹಾಗೂ ತ್ರಿಶೂಲ ದೀಕ್ಷೆ ನೀಡಿರುವ ವಿಹೆಚ್ಪಿ ಯ ಕಾರ್ಯಕ್ರಮಕ್ಕೆ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯುಟಿ ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದುಪರ ಸಂಘಟನೆಯ ಕಾರ್ಯಕರ್ತರಿಗೆ ಬಂದೂಕು ಚಲಾಯಿಸುವ ತರಬೇತಿ ಹಾಗೂ ತ್ರಿಶೂಲ ದೀಕ್ಷೆಯನ್ನು ನೀಡುವ ಮೂಲಕ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ನೇರವಾಗಿ ಕುಮ್ಮಕ್ಕು ನೀಡುತ್ತಿದ್ದು ತಾಲಿಬಾನ್ ಸಂಸ್ಕೃತಿಯನ್ನು ಹುಟ್ಟು ಹಾಕಿದೆ ಎಂದು ಆರೋಪಿಸಿದರು.
ಶಾಲೆಗಳಲ್ಲಿ ಮಕ್ಕಳಿಗೆ ಪೆನ್ನು ಪುಸ್ತಕ ನೀಡಿ ಉತ್ತಮವಾದ ಶಿಕ್ಷಣವನ್ನು ಕೊಟ್ಟು ದೇಶದ ಸತ್ಪ್ರಜೆಗಳನ್ನಾಗಿ ಮಾಡುವ ಬದಲು ಮಕ್ಕಳಿಗೆ ಶಸ್ತ್ರಾಸ್ತ್ರವನ್ನು ಕಲಿಸುವ ಹಾಗೂ ರೈಫಲ್ ಟ್ರೈನಿಂಗ್ ಕಲಿಸುವುದರ ಹಿಂದಿರುವ ಉದ್ದೇಶವೇನು ಎಂಬುದಕ್ಕೆ ಗೃಹ ಸಚಿವರು ಹಾಗೂ ಶಿಕ್ಷಣ ಸಚಿವರು ರಾಜ್ಯದ ಜನತೆಗೆ ಉತ್ತರ ನೀಡಬೇಕು.
ಈ ಬಗ್ಗೆ ಯಾರೋ ಶಿಕ್ಷಣ ಸಂಸ್ಥೆಗಳಲ್ಲಿ ಎನ್ಸಿಸಿ ಹಾಗೂ ಬೇರೆ ಬೇರೆ ಸೇನಾ ಶಿಕ್ಷಣವನ್ನು ನೀಡುತ್ತಾರಲ್ವ ಅದೇ ರೀತಿ ಇದು ಎನ್ನುತ್ತಾರೆ. ಆದರೆ ಅದಕ್ಕೆ ಸರ್ಕಾರದ ಅಥಾರಿಟಿ ಇದೆ. ಸಂಸ್ಥೆಗಳು ಸರ್ಕಾರದ ಪರ್ಮಿಷನ್ ತೆಗೆದುಕೊಂಡಿರುತ್ತದೆ.
ಇಂತಹ ಶಿಕ್ಷಣವನ್ನು ಕಲಿಸುವ ಶಿಕ್ಷಣ ಸಂಸ್ಥೆಗಳ ಹಿಂದೆ ಮಕ್ಕಳಲ್ಲಿ ದೇಶ ಪ್ರೇಮವನ್ನು ಬಿತ್ತರಿಸುವ ಉದ್ದೇಶವಿರುತ್ತದೆ. ಇದಕ್ಕೆ ಏನು ಅಥಾರಿಟಿ ಇದೆ? ಅದೇ ಒಂದು ವೇಳೆ ನಾವು ಯೂತ್ ಕಾಂಗ್ರೆಸ್ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾದಳದವರಿಗೆ ಇಂತಹ ತರಬೇತಿ ನೀಡಿದರೆ ಅದನ್ನು ಭಯೋತ್ಪಾದನೆ ಎಂದು ಕರೆಯುತ್ತಾರೆ. ದಲಿತ ಸಂಘಟನೆ ಮಾಡುತ್ತಿದ್ದರೆ ಏನೆಲ್ಲಾ ವಿಚಾರಗಳು ಬರುವ ಸಾಧ್ಯತೆ ಇರುತ್ತಿತ್ತು.
ಆದರೆ ಯಾರು ಯಾರನ್ನೋ ಕರೆದುಕೊಂಡು ಎಲ್ಲೆಲ್ಲೋ ಈ ಥರ ತರಬೇತಿ ನೀಡಿದ್ರೆ ಇದಕ್ಕೆ ಯಾರ ಪರ್ಮಿಷನ್ ಆಗಿದೆ. ಇದನ್ನು ಸರ್ಕಾರ ಶೀಘ್ರವಾಗಿ ಗಣನೆಗೆ ತೆಗೆದುಕೊಳ್ಳಬೇಕು. ಇದನ್ನು ಮಾಡಿಸುತ್ತಿರುವ ಸಂಘಟನೆಯ ಉದ್ದೇಶವೇನು ಎಂಬುವುದರ ಬಗ್ಗೆ ಹಾಗೆಯೇ ಸರ್ಕಾರ ಭವಿಷ್ಯದ ಉದ್ದೇಶದಲ್ಲಿ ತನಿಖೆ ಮಾಡಬೇಕಾದ್ದು ಕರ್ತವ್ಯ.
ಆದರೆ ಇದನ್ನು ಮೌನವಾಗಿ ಕೂತು ನೋಡುತ್ತಿರುವ ಶಿಕ್ಷಣ ಇಲಾಖೆಯ ಸಚಿವರು, ಗೃಹಸಚಿವರು ಪರೋಕ್ಷವಾಗಿ ಇದಕ್ಕೆ ಬೆಂಬಲ ಕೊಟ್ಟಂತಹ ರೀತಿಯಲ್ಲಿ ಕಾಣುತ್ತಿದೆ ಎಂದು ಕಿಡಿಕಾರಿದರು.
ಪ್ರಸ್ತುತ ಇರುವ ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿ ‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಒಂದೇ ಒಂದು ಶಾಲೆ ನಿರ್ಮಾಣ ಆಗಿಲ್ಲ. ಅದೇ ರೀತಿ ಜಿಲ್ಲೆಯಲ್ಲಿ ಪ್ರೈಮರಿ ಬಿಡಿ ಅಂಗನವಾಡಿ ಕೂಡಾ ಆಗಿಲ್ಲ. ಅದೇ ರೀತಿ ರಾಜ್ಯದಲ್ಲಿ ಒಂದೇ ಒಂದು ಡಿಗ್ರಿ ಕಾಲೇಜು ನಿರ್ಮಾಣ ಆಗಿಲ್ಲ, ವಿದ್ಯಾರ್ಥಿಗಳಿಗೆ ಬೇಕಾಗುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೂಡಾ ಸರಿಯಾಗಿ ಆಗ್ತಾ ಇಲ್ಲ.
ಸಮವಸ್ತ್ರದ ಬಗ್ಗೆ ಸರಿಯಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಅದೇ ರೀತಿ ಪಠ್ಯ ಪುಸ್ತಕಗಳು ಕೂಡಾ ಸರಿಯಾಗಿ ಬರ್ತಾ ಇಲ್ಲ. ಮಕ್ಕಳ ಶಿಕ್ಷಣಕ್ಕೆ ಪೂರಕವಾದದ್ದು ಏನೂಮಾಡದೆ ಬರೀ ಇಂತಹ ಕೆಲಸ ಮಾಡುತ್ತಿರುವುದು ಎಷ್ಟು ಸರಿ? ಉದ್ಯೋಗ ಸಿಕ್ಕಿಲ್ಲ ಎಂದು ಒಬ್ಬ ಸೋದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಅಂದ್ರೆ ಇದಕ್ಕೆ ಏನು ಕಾರಣ. ಸರ್ಕಾರ ಜನ ವಿರೋಧಿ ನೀತಿ ಜಾರಿಗೆ ತಂದಿದೆ ಈ ಬಗ್ಗೆ ಸರ್ಕಾರ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.
ಇನ್ನು ರೈಫಲ್ ಶಿಕ್ಷಣದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಾ ಕಲಿಕೆಯ ಹಂತದಲ್ಲಿ ರೈಫಲ್ ಟ್ರೈನಿಂಗ್ ಕೊಡ್ಲಿಕ್ಕೆ, ಗನ್ ಹಿಡಿದುಕೊಂಡು ಸುತ್ತಾಡಿಕೊಂಡು ಹೋಗಲು ಇದೇನು ಬಿಹಾರವೋ ಅಥವಾ ಗುಜರಾತ್ ರಾಜ್ಯವೋ..? . ನಾಳೆ ಇನ್ನೊಬ್ಬರು ಬರುತ್ತಾರೆ, ಹೀಗೇ ಮಾಡುತ್ತಾರೆ. ಒಂದು ವೇಳೆ ಆತ್ಮ ರಕ್ಷಣೆ ಉದ್ದೇಶದಲ್ಲಿ ಕೊಡುವುದಾದರೆ ಇಡೀ ಸ್ಕೂಲ್ ಸೆಲೆಬಸ್ನಲ್ಲಿ ಎಲ್ಲರಿಗೂ ಕೊಡ್ಲಿ. ಅದಕ್ಕಂತಲೇ ಸೀಮಿತ ಅವಧಿ ಇಡಲಿ.
ಆಯ್ದ ಮಕ್ಕಳಿಗೆ ಮಾತ್ರ ಯಾಕೆ. ಬಡವರ ಮಕ್ಕಳಿಗೆ ಕೂಡಾ ಇರಲಿ. ಅದ್ಯಾಕೆ ಬೇಡ ಇದನ್ನೆಲದಲ ಕೇಳೋರು ಯಾರೂ ಇಲ್ಲವೇ ಎಂದು ಪ್ರಶ್ನಿಸಿದರು.
ಗೃಹಸಚಿವರಿಗೂ ಕಂಟ್ರೋಲ್ ಇಲ್ಲ, ಶಿಕ್ಷಣ ಸಚಿವರಿಗೂ ಕಂಟ್ರೋಲ್ ಇಲ್ಲ. ಸ್ವಸ್ಥ ಸಮಾಜದ ಉದ್ದೇಶವನ್ನಿಟ್ಟುಕೊಂಡು ಸರ್ಕಾರ ತಾಯಿ ಹೃದಯದಿಂದ ಎಲ್ಲರನ್ನು ಒಂದೇ ರೀತಿಯಲ್ಲಿ ನೋಡಬೇಕು. ಈ ವಿಷಯಕ್ಕೆ ಸಂಬಂಧಿಸಿ ಸೂಕ್ತ ಕ್ರಮ ಕೈಗೆತ್ತಿಕೊಂಡು ಸರ್ಕಾರ ಜನರಿಗೆ ಸ್ಪಷ್ಟನೆ ನೀಡಬೇಕು’ ಎಂದು ಹೇಳಿದರು.
ಇನ್ನು ಮೊನ್ನೆ ತಾನೇ ಧಾರ್ಮಿಕ ಕಾರ್ಯಕ್ರಮದಲ್ಲಿ ‘ನನಗೆ ಮುಸ್ಲಿಂರ ಮತ ಬೇಡ, ಹಿಂದೂಗಳ ಮತವಷ್ಟೇ ಸಾಕು’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ಹೇಳಿಕೆ ಖಂಡಿಸಿ ಪ್ರತಿಕ್ರಿಯಿಸಿ ‘ಎಂಡೋಸಲ್ಫಾನ್ ಪೀಡಿತರನ್ನು ಮುಂದೆ ನಿಲ್ಲಿಸಿ ಚುನಾವಣೆ ಗೆದ್ದು, ಇದೀಗ ಎಂಡೋಸಲ್ಫಾನ್ ಪೀಡಿತರನ್ನು ಕೇಳುವ ಗತಿಯಿಲ್ಲದಂತಾಗಿದೆ.
ನಾನು ಆರೋಗ್ಯ ಸಚಿವನಾಗಿದ್ದಾಗ ತಂದಿರುವ ಯೋಜನೆ ಬಿಟ್ಟರೆ, ಅದಕ್ಕೆ ಹೊಸ ಯೋಜನೆ ಜೋಡಣೆಯಾಗಿಲ್ಲ. ಅಲ್ಲದೆ ನನ್ನ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನವೂ ಆಗಿಲ್ಲ. ಎಂಡೋಸಲ್ಫಾನ್ ಪೀಡಿತ ಮಕ್ಕಳನ್ನು ಫ್ರೀಡಂ ಪಾರ್ಕ್ ಗೆ ಕೊಂಡೊಯ್ದು ಪ್ರತಿಭಟನೆ ಮಾಡಿದ ಅವರು, ಶಾಸಕನಾದ ಬಳಿಕ ಅವರಿಗೇನಾದರೂ ಮಾಡಿದ್ದಾರೆಯೇ? ಪರಿಪಕ್ವವಲ್ಲದ ಇಂತಹ ಮಾತಿಗೆ ನಾನು ಪ್ರತಿಕ್ರಿಯೆ ಮಾಡೋದಿಲ್ಲ.
ಚೀಪ್ ಪಾಲಿಟಿಕ್ಸ್, ಅವರವರ ರಾಜಕೀಯ ಅವರವರದ್ದು. ಬೆಳ್ತಂಗಡಿಯ ಜನತೆ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ. ಯಾರು ಅವರಿಗೆ ಓಟ್ ಕೊಟ್ಟಿದ್ದಾರೆ ಅವರ ಕೆಲಸವಾದರೂ ಹರೀಶ್ ಪೂಂಜಾ ಮಾಡಲಿ ಎಂದು ಖಾರವಾಗಿ ನುಡಿದರು.
DAKSHINA KANNADA
ಪತ್ನಿ ಮಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪದ್ಮರಾಜ್ ಪೂಜಾರಿ
ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಮಂಗಳೂರಿನಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಮಂಗಳೂರಿನ ಕಪಿತಾನಿಯೋ ಶಾಲೆಯ ಮತಗಟ್ಟೆಗೆ ತನ್ನ ಪತ್ನಿ ಹಾಗೂ ಮಗಳ ಜೊತೆ ಆಗಮಿಸಿ ಮತ ಚಲಾಯಿಸಿದ್ದಾರೆ.
ಮುಂಜಾನೆ ಏಳುಗಂಟೆಗೆ ಮತಗಟ್ಟೆಗೆ ಆಗಮಿಸಿದ ಪದ್ಮರಾಜ್ ಅವರು ಬರುವ ವೇಳೆಗೆ ಜನರು ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು. ಹೀಗಾಗಿ ಪದ್ಮರಾಜ್ ಹಾಗೂ ಅವರ ಪತ್ನಿ ಮತ್ತು ಮಗಳು ಸರತಿ ಸಾಲಿನಲ್ಲಿ ನಿಂತೇ ಮತ ಚಲಾಯಿಸಿದ್ದಾರೆ. ಪದ್ಮರಾಜ್ ಆಗಮಿಸುವ ವೇಳೆ ಅವರ ಸಾಕಷ್ಟು ಅಭಿಮಾನಿಗಳು ಮತಗಟ್ಟೆಯ ಹೊರಗೆ ನಿಂತು ಅವರಿಗೆ ಶುಭ ಕೋರಿದ್ದಾರೆ.
ಮತದಾನ ಮಾಡಿದ ಪದ್ಮರಾಜ್ ಬಳಿಕ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ವೀಕ್ಷಣೆಗೆ ತೆರಳಿದ್ದಾರೆ.
DAKSHINA KANNADA
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ
ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮೊದಲನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದಲೇ ಆರಂಭಗೊಂಡಿದೆ.
ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇದಾಗಿದ್ದು, ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನವಾಗಿದೆ. ಮತದಾರರು ತಮ್ಮ ತಮ್ಮ ಮತ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ಮತದಾನ ಮಾಡುತ್ತಿದ್ದಾರೆ.
ಅದರಂತೆ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ತುಮಕೂರು, ಕೋಲಾರ, ಹಾಸನ, ಉಡುಪಿ-ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
DAKSHINA KANNADA
ನರ್ಸ್ಗೆ ಶಾಕ್ ನೀಡಿದ ಅಂಬ್ಯುಲೆನ್ಸ್..! ಇದು ಮನಕಲಕುವ ಘಟನೆ..!
ನಿರಂಜಿನಿ… ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿರೋ ಆಸ್ಪತ್ರೆಯ ತುರ್ತು ಸೇವಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯುವತಿ. ಮುಂಜಾನೆ ಆಸ್ಪತ್ರೆಗೆ ಬಂದ್ರೆ ಡ್ಯೂಟಿ ಮುಗಿಸಿ ಮತ್ತೆ ಮನೆಗೆ ವಾಪಾಸಾಗೋದು ಸಂಜೆಯ ವೇಳೆಗೆ. ಆಸ್ಪತ್ರೆಯಲ್ಲಿರೋ ಆಕೆಗೆ ಸಾವು ನೋವು ಎಲ್ಲವನ್ನೂ ನೋಡಿ ಅಭ್ಯಾಸ ಆಗಿದೆ. ಆದ್ರೆ ಇಂದು ಮಾತ್ರ ಅಂಬ್ಯುಲೆನ್ಸ್ನಲ್ಲಿ ಬಂದಿರೋ ಮೃತ ದೇಹ ನೋಡಿ ಆಕೆಯ ಆಕ್ರಂದನ ಮುಗಿಲು ಮುಟ್ಟಿದೆ. ಆಕೆಯ ಆಕ್ರಂದನ ನೋಡಿ ಶಾಕ್ ಆದ ಇತರ ಸಿಬ್ಬಂದಿ ವಿಚಾರ ತಿಳಿದ ಬಳಿಕ ತಾವೂ ಕಂಬನಿ ಮಿಡಿದಿದ್ದಾರೆ.
ಇಂದು ನಿರಂಜಿನಿ ಆಸ್ಪತ್ರೆಗೆ ಬಂದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಡ್ಯೂಟಿಯಲ್ಲಿದ್ದ ವೇಳೆ ಅಂಬ್ಯುಲೆನ್ಸ್ ಒಂದು ವೇಗವಾಗಿ ಬಂದು ಗಂಭೀರವಾಗಿದ್ದ ಇಬ್ಬರನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಶಿಫ್ಟ್ ಮಾಡಿದೆ. ದೇಹ ಜರ್ಜರಿತವಾಗಿದ್ದ ಒಂದು ದೇಹವನ್ನು ಅಂಬ್ಯುಲೆನ್ಸ್ನಿಂದ ಇಳಿಸಿದಾಗ ಅದಾಗಲೇ ಆ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮತ್ತೊಂದು ಮಹಿಳೆಯೂ ಗಂಭೀರವಾಗಿದ್ದು ತಕ್ಷಣ ಅವರನ್ನು ತುರ್ತು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಈ ವೇಳೆ ಮೃತ ದೇಹವನ್ನು ನೋಡಿದ ನಿರಂಜನಿ ಇದ್ದಕ್ಕಿದ್ದಂತೆ ಜೋರಾಗಿ ಅಳಲು ಆರಂಭಿಸಿದ್ದಾಳೆ. ಆಕೆಯ ಅಳುವಿಗೆ ಕಾರಣವಾಗಿದ್ದು ಅಲ್ಲಿದ್ದ ಮೃತ ದೇಹ ಆಕೆಯ ತಂದೆಯದೇ ಆಗಿದ್ದು.
ಮುಂಜಾನೆ ತಂದೆ ತಾಯಿ ಇಬ್ಬರೂ ಅಜ್ಜಾವರ ಗ್ರಾಮದಲ್ಲಿನ ಕೆಎಫ್ಡಿಸಿಗೆ ಕೆಲಸಕ್ಕೆ ಹೋಗಿ ವಾಪಾಸಾಗುವಾಗ ಜೀಪ್ ಒಂದು ಇವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಜೀಪ್ ಅಡಿಗೆ ಬಿದ್ದಿದ್ದ ತಂದೆ ವಿನಾಯಕ ಮೂರ್ತಿ ಮೃ*ತ ಪಟ್ಟಿದ್ದರೆ, ತಾಯಿ ಮಂಜುಳ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದ್ರೆ ಇದ್ಯಾವುದು ವಿಚಾರ ಗೊತ್ತಿಲ್ಲದ ನಿರಂಜಿನಿ ಎಂದಿನಂತೆ ಇದೂ ಒಂದು ಅಕ್ಸಿಡೆಂಟ್ ಕೇಸ್ ಅಂತ ಅಟೆಂಡ್ ಮಾಡಲು ಹೋಗಿದ್ದಾಳೆ. ಅಂಬ್ಯುಲೆನ್ಸ್ನಲ್ಲಿ ತಂದೆಯ ಮೃತ ದೇಹ ಹಾಗೂ ಪ್ರಜ್ಞಾ ಹೀನ ಸ್ಥಿತಿಯಲ್ಲಿ ತಾಯಿಯನ್ನ ನೋಡಿದ್ರೆ ಮಗಳ ಪರಿಸ್ಥಿತಿ ಹೇಗಿರಬಹುದು ಅನ್ನೋದು ಊಹಿಸಲೂ ಅಸಾದ್ಯ. ತಾಯಿ ಮಂಜುಳ ಪರಿಸ್ಥಿತಿ ಕೂಡಾ ಗಂಭೀರವಾಗಿದ್ದು, ಬೆನ್ನು ಮೂಳೆಗೆ ಗಾಯವಾದ ಮಾಹಿತಿ ಇದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.