ಮಂಗಳೂರು : 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶದ ಪ್ರಧಾನಮಂತ್ರಿಗಳು 2021ರ ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ “ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿ ಈ ವರ್ಷ ಹಲವಾರು ಕಾರ್ಯಕ್ರಮಗಳ ಮೂಲಕ ಆಚರಿಸಲು ನಿರ್ದೇಶನ ನೀಡಿದ್ದರು, ಆ ಹಿನ್ನಲೆಯಲ್ಲಿ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯು ಕರ್ನಾಟಕದಲ್ಲಿ 13ನೇ ಅಕ್ಟೋಬರ್ 2021ರಿಂದ ರಾಜ್ಯದ 20 ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಅದರ ಅಂಗವಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳು, ಪ್ರಾದೇಶಿಕ ಬ್ಯಾಂಕು, ಡಿಸಿಸಿಬಿ, ಎಂಎಫ್ಗಳು, ಎಸ್ಬಿಎಫ್ಸಿಗಳು, ನಬಾರ್ಡ್ ಮತ್ತು ಕೆ.ವಿ.ಐ.ಸಿ, ಕೆ.ವಿ.ಐ.ಬಿ.ಡಿ.ಐ.ಸಿ ಮೀನುಗಾರಿಕೆ, ಪಶುಸಂಗೋಪನೆ ಸೇರಿದಂತೆ ಇತರೆ ಸರ್ಕಾರಿ ಇಲಾಖೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಂಟ್ವಾಳದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು, ಸಾಲದ ಅರ್ಜಿಗಳನ್ನು ಸ್ವೀಕರಿಸಲು, ಮಂಜೂರಾತಿ ಅಥವಾ ತಾತ್ವಿಕ ಮಂಜೂರಾತಿ ಪತ್ರಗಳನ್ನು ವಿತರಿಸಲು, ಸರಕಾರದ ವಿವಿಧ ಯೋಜನೆಗಳ ಮಾಹಿತಿ ನೀಡಲು, ಸಾಲ ಸೌಲಭ್ಯಗಳ ಮಾಹಿತಿ ಕಾರ್ಯಾಗಾರವನ್ನು ಇದೇ ಅ.30 ರಂದು ಬಿಸಿ ರೋಡಿನ ಬಂಟರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಪಿ.ಎಂ.ಎಂ.ವೈ (ಮುದ್ರಾ), ಸ್ಟ್ಯಾಂಡ್ ಆಪ್ ಇಂಡಿಯಾ, ಪಿ.ಎಂ.ಸ್ವನಿಧಿ, ಇ.ಸಿ.ಎಲ್.ಜಿ.ಎಸ್, ಪಿ.ಎಂ.ಇ.ಜಿ.ಪಿ, ಕೃಷಿ ಮೂಲಸೌಕರ್ಯ ವಿಧಿ ಯೋಜನೆ (ಎ.ಐ.ಎಫ್), ಪಶು ಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ ಯೋಜನೆ (ಎ.ಎಚ್.ಐ.ಡಿ.ಎಸ್), ಕೃಷಿ ಎಂ.ಎಸ್.ಎಂ.ಇ ಚಿಕ್ಕರೆ, ಶಿಕ್ಷಣ, ವಸತಿ ಸಾಲಗಳು ಮತ್ತು ಇತರ ಆತ್ಮನಿರ್ಭರ ಭಾರತ್ ಯೋಜನೆಗಳಾದ ಪಿ.ಎಂ.ಎಸ್.ಬಿ.ವೈ, ಪಿ.ಎಂ.ಜೆ.ಜೆ.ಬಿ.ವೈ, ಎ.ಪಿ.ವೈನಂತಹ ವಿವಿಧ ಪಿ.ಎಂ ಆತ್ಮ ಸುರಕ್ಷಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಹಾಗೂ ಸಾಲ ಮಂಜೂರಾತಿಗಳ ಪತ್ರಗಳನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವರಾದ ಭಗವಂತ್ ಖೂಬಾ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್.ಯು, ಅಧ್ಯಕ್ಷತೆ ವಹಿಸುವರು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಅಂಗಾರ.ಎಸ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಭಾಗವಹಿಸಲಿದ್ದಾರೆ, ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ವಿವಿಧ ಬ್ಯಾಂಕುಗಳ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.