DAKSHINA KANNADA
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆಯಿಲ್ಲ-ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ: ರಾಜೇಶ್ ಪವಿತ್ರನ್
ಮಂಗಳೂರು: ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಹಾಗಾಗಿ ನಾವು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿದ್ದೇವೆ ಎಂದು ಹಿಂದೂ ಮಹಾ ಸಭಾ ಸಂಘಟನೆಯ ರಾಜ್ಯ ಅಧ್ಯಕ್ಷ ರಾಜೇಶ್ ಪವಿತ್ರನ್ ತಿಳಿಸಿದ್ದಾರೆ.
ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ನೀವೇ ನಾಯಕರಾಗಿ, ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸಿ ಕೊಳ್ಳಿ’ ಎಂಬುದಾಗಿ ಸ್ಪರ್ಧಾಕಾಂಕ್ಷಿಗಳಿಗೆ ಕರೆ ನೀಡುತ್ತಿದ್ದೇವೆ.
ಎಲ್ಲಾ 224 ಕ್ಷೇತ್ರಗಳ ಬಗ್ಗೆ ಗಮನ ಹರಿಸುತ್ತಿದ್ದೇವೆ. ಈಗಾಗಲೇ ಹಲವಾರು ಸ್ಪರ್ಧಾಕಾಂಕ್ಷಿಗಳಿಂದ ಅರ್ಜಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯ ಕ್ಷೇತ್ರ ಹೊರತು ಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಿಂದ ಅರ್ಜಿಗಳು ಬಂದಿವೆ. 83 ಮಂದಿ ಸ್ಪರ್ಧಿಗಳ ಮೊದಲ ಪಟ್ಟಿ ಮುಂದಿನ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಹಿಂದೂ ಮಹಾ ಸಭಾ ಪುನಶ್ಚೇತನ ಸಂಕಲ್ಪ ಸಮಾವೇಶದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಹಿಂದೂ ಮಹಾ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವುದರಿಂದ ನಮ್ಮನ್ನು ತಡೆಯಲು ರಾಜ್ಯದ ಬಿಜೆಪಿ ನಾಯಕರಿಂದ ಮತ್ತು ಸರಕಾರದಿಂದ ಪ್ರಯತ್ನಗಳು ನಡೆಯುತ್ತಿವೆ. ನನ್ನ ಮೇಲೆ ಬೇರೆ ಬೇರೆ ಕೇಸು ಹಾಕಿ ಆರೇಳು ಬಾರಿ ಜೈಲಿಗೆ ಹಾಕುವ ಪ್ರಯತ್ನ ನಡೆದಿದೆ.
ಚುನಾವಣೆಯಲ್ಲಿ ಗೆದ್ದು, ಅಧಿಕಾರಕ್ಕೆ ಬರುವ ತನಕ ನಮ್ಮನ್ನು ಬಳಸಿಕೊಂಡು ಬಳಿಕ ಕಸದ ತೊಟ್ಟಿಗೆ ಮತ್ತು ಜೈಲಿಗೆ ಹಾಕಲು ಯತ್ನ ನಡೆಯುತ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ಹಿಂದೂಗಳು ತಂಡೋಪತಂಡವಾಗಿ ನಮ್ಮ ಜತೆ ಬರುತ್ತಿದ್ದಾರೆ. ಎಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸಿ ಸ್ಪರ್ಧಿಸುತ್ತಿದ್ದೇವೆ.
‘ನಿಮ್ಮ ಅಖಾಡ ನೇರವಾಗಿರಲಿ. ಹಿಂದಿನಿಂದ ಚೂರಿ ಹಾಕುವುದು ಬೇಡ’ ಎಂದು ತಿಳಿಸ ಬಯಸುತ್ತೇವೆ ಎಂದರು. ಕಾರ್ಕಳ ಕ್ಷೇತ್ರದಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧೆ ವಿಚಾರದ ಬಗ್ಗೆ ಕೇಳಿದಾಗ, ಮುತಾಲಿಕ್ ಅವರು ಇದುವರೆಗೆ ನಮ್ಮ ಜತೆ ಚರ್ಚಿಸಿಲ್ಲ. ಅವರು ಬೆಂಬಲ ಯಾಚಿಸಿದರೆ ಬೆಂಬಲ ನೀಡುವ ಸಾಧ್ಯತೆ ಬಗ್ಗೆ ಪರಿಶೀಲಿಸುತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಮಹಾ ಸಭಾ ರಾಜ್ಯ ಪ್ರಭಾರಿ ರಾಜೇಶ್ ಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ಮುರಳಿ ಅವರು ಉಪಸ್ಥಿತರಿದ್ದರು.
DAKSHINA KANNADA
ಹಳ್ಳ ಹಿಡಿದ ಸ್ಮಾರ್ಟ್ ಸಿಟಿಯ ಕಾಮಗಾರಿ; ಕುಂಟುತ್ತಾ ಸಾಗಿದ ಮಹಾಕಾಳಿ ಪಡ್ಪು ಅಂಡರ್ ಪಾಸ್
ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಮಹಾಕಾಳಿ ಪಡ್ಪುವಿನ ರೈಲ್ವೇ ಅಂಡರ್ ಪಾಸ್ ಕಾಮಗಾರಿ ಸದ್ಯಕ್ಕಂತು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಈ ಕಾಮಗಾರಿ ಕೈಗೆತ್ತಿಕೊಂಡು ವರ್ಷಗಳೇ ಕಳೆದರೂ ಕಾಮಗಾರಿ ಮುಗಿಸಬೇಕು ಅನ್ನೋ ಇಚ್ಚೆ ಸ್ಮಾರ್ಟ್ ಸಿಟಿ ಯೋಜನೆಯವರಿಗೂ ಇದ್ದಂತಿಲ್ಲ.
ಕೆಲ ತಿಂಗಳ ಹಿಂದೆ ಕಳಪೆ ಕಾಮಗಾರಿಯಿಂದಾಗಿ ಇಲ್ಲಿ ಕಾಮಗಾರಿ ಕುಸಿತ ಕೂಡಾ ಉಂಟಾಗಿತ್ತು. ಇದೀಗ ಕೆಲ ದಿನಗಳಿಂದ ಯಾವುದೇ ಕಾಮಗಾರಿ ನಡೆಸದೆ ಕಾರ್ಮಿಕರು ಕೂಡಾ ಕೆಲಸ ಇಲ್ಲದೆ ಸುಮ್ಮನೆ ಕುಳಿತಿರುವ ದೃಶ್ಯ ಇಲ್ಲಿ ಮಾಮೂಲಾಗಿದೆ. ಮಾರ್ಗನ್ ಗೇಟ್ ಮೂಲಕವಾಗಿ ಜೆಪ್ಪಿನ ಮೊಗೆರು ಹೈವೆ ಸಂಪರ್ಕಿಸುವ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದೆ. ಸದ್ಯ ಈ ಕಾಮಗಾರಿ ಆರಂಭವಾದ ಬಳಿಕ ಇಲ್ಲಿ ದ್ವಿಚಕ್ರ ವಾಹನಕ್ಕಷ್ಟೇ ಓಡಾಡಲು ವ್ಯವಸ್ಥೆ ಮಾಡಲಾಗಿದೆ.
ಉಪ್ಪಳದಲ್ಲಿ 3.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ; ಓರ್ವ ಬಂಧನ
ಹೀಗಾಗಿ ಈ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕಾಮಗಾರಿ ಯಾವಾಗ ಮುಗಿಸ್ತೀರಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ನಡಿಯುತ್ತಿರುವ ಕಾಮಗಾರಿಯ ವೇಗ ನೋಡಿದರೆ ಇದು 2024 ರಲ್ಲಿ ಪೂರ್ಣಗೊಳ್ಳುವ ಯಾವುದೇ ಲಕ್ಷಣ ಇಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ. ಹೀಗಾಗಿ ತಕ್ಷಣ ಅಂಡರ್ ಪಾಸ್ ಕೆಲಸ ಮಗಿಸಿ ಅಂತ ಜನ ಒತ್ತಾಯಿಸಿದ್ದಾರೆ.
DAKSHINA KANNADA
ಮನೆಯಲ್ಲಿ ಹಲ್ಲಿ ಕಾಟವೇ? ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ
ಮಂಗಳೂರು: ಹಲ್ಲಿಗಳು ಯಾವಾಗಲೂ ನಮಗಿಂತ ಹೆಚ್ಚಾಗಿ ನಮ್ಮ ಮನೆಯಲ್ಲಿ ಸುತ್ತಾಡುತ್ತಿರುತ್ತವೆ. ಕೆಲವರ ಮನೆಯಲ್ಲಿ ಹಲ್ಲಿಗಳಿದ್ದರೆ ಇನ್ನು ಹಲವರಿಗೆ ನಡುಕ, ಹಲ್ಲಿ ಹತ್ತಿರ ಬಂದರೆ ಬಹಳ ದೂರ ಓಡಿ ಹೋಗುತ್ತಾರೆ. ಹಲ್ಲಿಯಿಂದ ಓಡಿಹೋಗುವ ಭಯವನ್ನು ಹರ್ಪಿಟೋಫೋಬಿಯಾ ಎಂದು ಕರೆಯಲಾಗುತ್ತದೆ. ಮತ್ತೊಂದೆಡೆ, ಅಡುಗೆ ಮನೆಯಲ್ಲಿ ಹಲ್ಲಿ ಇದ್ದರೆ, ಅಡುಗೆ ಮಾಡುವಾಗ ಅದರೊಳಗೆ ಬೀಳುವ ಭಯವಿದೆ. ಆದ್ದರಿಂದ, ಮನೆಯಿಂದ ಹಲ್ಲಿಗಳನ್ನು ತೊಡೆದುಹಾಕುವ ಸಿಂಪಲ್ ಮನೆಮದ್ದು ಇಲ್ಲಿ ತಿಳಿದುಕೊಳ್ಳಿ.
ಈರುಳ್ಳಿ:
ಈರುಳ್ಳಿಯನ್ನು ಅಡುಗೆಗೆ ಮಾತ್ರ ಬಳಸಲಾಗುವುದಿಲ್ಲ, ಬದಲಾಗಿ ಅಡಿಗೆಮನೆಗಳಿಂದ ಹಲ್ಲಿಗಳನ್ನು ಹಿಮ್ಮೆಟ್ಟಿಸಬಹುದು. ಈರುಳ್ಳಿಯಿಂದ ಹೊರಹೊಮ್ಮುವ ಕಟುವಾದ ವಾಸನೆಯು ಹಲ್ಲಿಗಳನ್ನು ಓಡಿಸುತ್ತದೆ. ಈರುಳ್ಳಿಯನ್ನು ಕತ್ತರಿಸಿ, ಹಲ್ಲಿ ಬರುವ ಸ್ಥಳದಲ್ಲಿ ತುಂಡರಿಸಿ ಇಡಿ. ಅದರಿಂದ ಬರುವ ವಾಸನೆಯಿಂದ ಹಲ್ಲಿ ಮನೆಯೊಳಗೆ ಬರುವುದಿಲ್ಲ. ಹಾಗೆಯೇ ಹಲ್ಲಿಗಳನ್ನು ಗೋಡೆಯಿಂದ ಓಡಿಸಲು ಈರುಳ್ಳಿಯನ್ನು ಸುಲಿದು ಅದರ ತುಂಡುಗಳನ್ನು ದಾರದಿಂದ ಕಟ್ಟಿ ಗೋಡೆಗೆ ನೇತು ಹಾಕಿ.
ಬೆಳ್ಳುಳ್ಳಿ:
ಮನೆಯಲ್ಲಿ ಹಲ್ಲಿಗಳನ್ನು ಬರದಂತೆ ತಡೆಯಲು ಬೆಳ್ಳುಳ್ಳಿಯನ್ನು ಬಳಸಬಹುದು. ಮನೆಯಲ್ಲಿ ಹಲ್ಲಿಗಳು ಓಡಾಡುವ ಕಿಟಕಿ, ಬಾಗಿಲು ಮುಂತಾದ ಸ್ಥಳಗಳಲ್ಲಿ ಬೆಳ್ಳುಳ್ಳಿಯನ್ನು ಕತ್ತರಿಸಿ ಇಡಿ. ಬೆಳ್ಳುಳ್ಳಿಯ ಬಲವಾದ ವಾಸನೆಯು ಹಲ್ಲಿಗಳನ್ನು ಹಿಮ್ಮೆಟ್ಟಿಸುತ್ತದೆ. ಇದಲ್ಲದೇ ಹಲ್ಲಿ ಬರುವ ಜಾಗದಲ್ಲಿ ಬೆಳ್ಳುಳ್ಳಿಯನ್ನು ಪುಡಿ ಮಾಡಿ ಸ್ವಲ್ಪ ನೀರು ಚಿಮುಕಿಸಿದರೆ ಮತ್ತೆ ಬರುವುದಿಲ್ಲ.
ಪೆಪ್ಪರ್ ಸ್ಪ್ರೇ:
ಪೆಪ್ಪರ್ ಸ್ಪ್ರೇ ಮತ್ತು ಚಿಲ್ಲಿ ಸ್ಪ್ರೇ ಬಳಸಿ ಮನೆಗಳ ಸುತ್ತ ತಿರುಗುವ ಹಲ್ಲಿಗಳನ್ನು ಸಹ ಹಿಮ್ಮೆಟ್ಟಿಸಬಹುದು. ಸ್ಪ್ರೇನಿಂದ ಬಲವಾದ ವಾಸನೆಯು ಹಲ್ಲಿಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುತ್ತದೆ. ನೀವು ಮಾರುಕಟ್ಟೆಯಲ್ಲಿ ಪೆಪ್ಪರ್ ಸ್ಪ್ರೇ ಖರೀದಿಸಲು ಬಯಸದಿದ್ದರೆ, ನೀವು ಮನೆಯಲ್ಲಿಯೇ ಪೆಪ್ಪರ್ ಸ್ಪ್ರೇ ತಯಾರಿಸಬಹುದು. ಮೊದಲು ಸ್ವಲ್ಪ ಮೆಣಸು ತೆಗೆದುಕೊಂಡು ಪುಡಿ ಮಾಡಿ. ಈಗ ಅದನ್ನು ನೀರಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಈಗ ಹಲ್ಲಿಗಳು ಇರುವ ಸ್ಥಳಗಳಲ್ಲಿ ಸ್ಪ್ರೇ ಮಾಡಿದರೆ ಮತ್ತೆ ತೊಂದರೆ ಆಗುವುದಿಲ್ಲ.
DAKSHINA KANNADA
ಕನ್ನಡದಲ್ಲಿ ಔಷಧ ಚೀಟಿ ಬರೆದು ಗಮನ ಸೆಳೆದ ಕಾಸರಗೋಡು ಜಿಲ್ಲೆಯ ದಂತ ವೈದ್ಯ..!
ಮಂಜೇಶ್ವರ/ಮಂಗಳೂರು: ಈ ಹಿಂದೆ ವೈದ್ಯರೊಬ್ಬರು ಕನ್ನಡದಲ್ಲಿ ಔಷಧ ಚೀಟಿಯನ್ನು ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಬಳಿಕ ಕರ್ನಾಟಕದಲ್ಲಿ ವೈದ್ಯರು ಕನ್ನಡದಲ್ಲೇ ಔಷಧ ಚೀಟಿಯನ್ನು ಬರೆಯುವಂತೆ ಕನ್ನಡ ಪ್ರಾಧಿಕಾರ ಸೂಚನೆ ಕೂಡಾ ನೀಡಿತ್ತು. ಆದರೆ ಕರ್ನಾಟಕದಲ್ಲಿ ಈ ಸೂಚನೆ ಕಟ್ಟುನಿಟ್ಟಾಗಿ ಜಾರಿಯಾಗುವ ಮೊದಲೇ ಕೇರಳದ ಕಾಸರಗೋಡಿನಲ್ಲಿ ವೈದ್ಯರೊಬ್ಬರು ಕನ್ನಡದಲ್ಲಿ ಔಷಧ ಚೀಟಿ ಬರೆದು ಎಲ್ಲರ ಗಮನ ಸೆಳೆದಿದ್ದಾರೆ.
ಹೌದು, ಕಾಸರಗೋಡಿನ ಮಂಜೇಶ್ವರದಲ್ಲಿರುವ ಸುರಕ್ಷಾ ದಂತ ಚಿಕಿತ್ಸಾಲಯದ ಡಾ.ಮುರಳೀ ಮೋಹನ ಚೂಂತೂರು ರವರು ಕನ್ನಡ ಪ್ರೇಮ ಮೆರೆದಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿನೆಲೆ ಅವರು ಇತ್ತೀಚೆಗೆ ಮಂಗಳೂರು ಭೇಟಿ ನೀಡಿದ ವೇಳೆ ವೈದ್ಯರು ಕೂಡಾ ಕನ್ನಡದಲ್ಲಿ ಔಷಧ ಚೀಟಿಯನ್ನು ಜನರಿಗೆ ಅರ್ಥವಾಗುವಂತೆ ಬರೆಯಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.
ಹಾಗಾಗಿ ರಾಜ್ಯದಲ್ಲಿ ಒಬ್ಬ ವೈದ್ಯರು ಕನ್ನಡದಲ್ಲಿ ಔಷಧ ಚೀಟಿ ಬರೆಯುವ ಮೂಲಕ ಮೊದಲ ಸ್ಪಂದನ ನೀಡಿದ್ದರು. ಇದೀಗ ಕೇರಳ ರಾಜ್ಯದಲ್ಲಿ ವೈದ್ಯರೊಬ್ಬರು ಕನ್ನಡದಲ್ಲಿ ಔಷಧ ಚೀಟಿ ಬರೆಯುವ ಮೂಲಕ ತನ್ನ ಕನ್ನಡ ಪ್ರೇಮವನ್ನು ತೋರಿಸಿದ್ದಾರೆ.
ಸರ್ಕಾರಿ ವೈದ್ಯರು ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆದೇಶಿಸುವಂತೆ ಸಚಿವರಿಗೆ ಪ್ರಾಧಿಕಾರ ಪತ್ರ
ಅದಾದ ಬಳಿಕ ಆರೋಗ್ಯ ಸಚಿವರು ಪತ್ರಿಕಾ ಹೇಳಿಕೆ ಹೊರಡಿಸಿ, ಈ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಿ, ಮುಖ್ಯಮಂತ್ರಿಗಳೊಂದಿಗೂ ಚರ್ಚೆ ನಡೆಸಿ ಬಳಿಕ ಸಾಧಕ ಬಾಧಕ ನೋಡಿಕೊಂಡು ಅನುಷ್ಠಾನಕ್ಕೆ ತರವಲಾಗುವುದು ಎಂದಿದ್ದರು. ಈಗ ಗಡಿನಾಡಿನ ಕನ್ನಡಿಗ ವೈದ್ಯರು ಔಷಧ ಚೀಟಿಯನ್ನು ಕನ್ನಡದಲ್ಲಿ ಬರೆಯುವ ಮೂಲಕ ಇತರರಿಗೆ ಮಾರ್ಗದರ್ಶಿಯಾಗಿರುವುದನ್ನು ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.