LATEST NEWS
ಕೃಷ್ಣನಗರಿ ಉಡುಪಿಯಲ್ಲಿ ರಸ್ತೆ ಅವ್ಯವಸ್ಥೆ ಖಂಡಿಸಿ ಮಧ್ಯ ರಸ್ತೆಯಲ್ಲಿ ಹೊರಳಾಡಿದ ಬಾಬಾ ನಿತ್ಯಾನಂದ..!
ಉಡುಪಿ: ರೈಲ್ವೇ ಸೇತುವೆಯ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಇಂದು ಹೊಂಡ ಹಾಗೂ ಕೆಸರು ತುಂಬಿದ ರಸ್ತೆಯಲ್ಲಿ ಉರುಳು ಸೇವೆಯನ್ನು ನಡೆಸುವ ಮೂಲಕ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದ ಘಟನೆ ಉಡುಪಿ-ಮಣಿಪಾಲ ರಸ್ತೆಯ ಇಂದ್ರಾಳಿ ಬಳಿ ನಡೆದಿದೆ.
ಕಾಮಗಾರಿಯು ಕಳೆದ ಐದು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಇನ್ನೂ ಪೂರ್ತಿಗೊಂಡಿಲ್ಲ. ಇಲ್ಲಿ ರಸ್ತೆಯು ಹೊಂಡ ಗುಂಡಿಗಳಿಂದ ಕೂಡಿದ್ದು, ಆಗಿಂದಾಗ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಇದರಿಂದಾಗಿ ವಾಹನ ಚಾಲಕರು ಮತ್ತು ಪ್ರಯಾಣಿಕರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಳೆ ಬಂದರಂತೂ ಪರಿಸ್ಥಿತಿ ಹೇಳಲಾಗದು. ದ್ವಿಚಕ್ರ ವಾಹನ ಸವಾರರು ಹೈರಾಣ ಆಗುತ್ತಿದ್ದಾರೆ.
ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ.
ಇದೆಲ್ಲವನ್ನು ಗಮನಿಸಿ ಸಾಮಾಜಿಕ ಕಾರ್ರ್ಯಕರ್ತ ಉಡುಪಿ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಅವರು ಇಂದು ಉರುಳುಸೇವೆ ಇಂದ್ರಾಳಿ ಹಳೆ ಸೇತುವೆಯ ಮೇಲೆ ಉರುಳು ಸೇವೆ ನಡೆಸಿ ಕೇಂದ್ರ ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹನುಮಂತ ಮತ್ತು ರಾಷ್ಟ್ರೀಯ ಹೆದ್ದಾರಿ 167A ಗೆ ಆರತಿ ಎತ್ತಿ ಪೂಜೆ ಸಲ್ಲಿಸಿ ಬಳಿಕ ಉರುಳು ಸೇವೆ ಆರಂಭಿಸಿದ ಅವರು ಮಳೆ ಮತ್ತು ಟ್ರಾಫಿಕ್ ಜಾಮ್ ನಡುವೆ ಸುಮಾರು 150 ಮೀಟರ್ ಹೊಂಡ ಗುಂಡಿ ರಸ್ತೆಯಲ್ಲಿ ಉರುಳು ಸೇವೆ ನಡೆಸಿದರು.
DAKSHINA KANNADA
ಬಜಪೆ: ಶ್ರೀ ಸೋಮನಾಥೇಶ್ವರ ಗುಹಾಲಯ, ಗುಹಾತೀರ್ಥ ಸ್ನಾನಕ್ಕೆ ಚಾಲನೆ
ಬಜಪೆ: ಜಾಬಾಲಿ ಮಹರ್ಷಿಗಳ ತಪೋವನವೆಂದೆ ಪ್ರಖ್ಯಾತಿಯಾಗಿರುವ ತುಳುನಾಡಿನ ಪ್ರಸಿದ್ದ ಗುಹಾಲಯ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದಲ್ಲಿ ಪವಿತ್ರ ಗುಹಾಪ್ರವೇಶ ಗುಹಾತೀರ್ಥ ಸ್ನಾನ ಕಾರ್ಯಕ್ರಮಕ್ಕೆ ಗುರುವಾರದಂದು ತುಲಾ ಸಂಕ್ರಮಣದ ಸಂದರ್ಭ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿಗಳೊಂದಿಗೆ ಕ್ಷೇತ್ರದ ತಂತ್ರಿ ಬಗ್ಗಮಜಲು ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ಶ್ರೀಜಗದ್ಗುರು ಮಧ್ವಾಚಾರ್ಯ ಸಂಸ್ಥಾನ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ ದೀಪ ಪ್ರಜ್ವಲನೆಯೊಂದಿಗೆ ಚಾಲನೆ ನೀಡಿದರು.
ಶ್ರೀ ಸೋಮನಾಥೇಶ್ವರ ಶ್ರೀ ಮಹಾಗಣಪತಿ ದೇವರು ಹಾಗೂ ಶ್ರೀ ಜಾಬಾಲಿ ಮಹರ್ಷಿ ಅವರ ಸನ್ನಿಧಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ವಸಂತ ಭಟ್ ನೆಲ್ಲಿತೀರ್ಥ, ದೇಗುಲದ ಅರ್ಚಕ ಗಣಪತಿ ಭಟ್, ಅನಂತಕೃಷ್ಣ ಅಡಿಗ ಪುತ್ತಿಗೆ,ಎನ್ ವಿ ವೆಂಕಟರಾಜ ಭಟ್,ಎನ್ ವಿ ಜಿ ಕೆ ಭಟ್,ಪ್ರಸನ್ನ ಭಟ್ ನೆಲ್ಲಿತೀರ್ಥ,ಆನಂದ ಕಾವ ಸಾಂತ್ರಬೈಲು,ಕೃಷ್ಣಪ್ಪ ಪೂಜಾರಿ,ಸುಂದರ ಪೂಜಾರಿ, ಹನುಮಂತ ಕಾಮತ್ ಸ್ಥಳೀಯ ಪ್ರಮುಖರು,ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
ಗುಹಾಪ್ರವೇಶಕ್ಕೆ ಮುಂಚಿತವಾಗಿ ಕ್ಷೇತ್ರದ ನಾಗಪ್ಪ ಕೆರೆಯಲ್ಲಿ ಮಿಂದು ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಗುಹಾಪ್ರವೇಶ ಆರಂಭ ಮಾಡಲಾಯಿತು. ಆ.17 ತುಲಾ ಸಂಕ್ರಮಣದಂದು ಪ್ರಾರಂಭಗೊಂಡ ಗುಹಾಪ್ರವೇಶ – ಗುಹಾ ತೀರ್ಥ ಸ್ನಾನ ಏಪ್ರೀಲ್ ತಿಂಗಳ ಮೇಷ ಸಂಕ್ರಮಣದವರೆಗೂ ಪ್ರತಿದಿನ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಗುಹಾತೀರ್ಥ ಸ್ನಾನಕ್ಕೆ ಅವಕಾಶವಿದೆ.ಹುಣ್ಣಿಮೆಯ ಸಂದರ್ಭ ಹುಣ್ಣಿಮೆ ತೀರ್ಥ ಸ್ನಾನ ಇಲ್ಲಿ ವಿಶೇಷ.
LATEST NEWS
ಉಡುಪಿ: ವಾಯು ಭಾರ ಕುಸಿತ, ಗಾಳಿ, ಕಡಲ ಅಲೆಗಳ ಅಬ್ಬರ
ಉಡುಪಿ: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ವಾಯು ಭಾರ ಕುಸಿತದಿಂದಾಗಿ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ, ಗಾಳಿಯ ತೀವ್ರತೆ ಕಳೆದೆರಡು ದಿನಗಳಿಂದ ಜಾಸ್ತಿಯಾಗಿದ್ದು, ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು, ಗುಜ್ಜಾಡಿ ಗ್ರಾಮದ ಸನ್ಯಾಸಿಬಲೆ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, 7-8 ಮನೆಗಳು ಅಪಾಯದಲ್ಲಿವೆ. ಕಂಚುಗೋಡಿನಲ್ಲಿ ಈ ವರ್ಷದ ಮುಂಗಾರು ಋತುವಿನಲ್ಲಿ ಇದುವರೆಗೆ ಸುಮಾರು 500 ಮೀ. ನಷ್ಟು ಕಡಲ್ಕೊರೆತ ಸಂಭವಿಸಿದೆ.
ಬುಧವಾರ (ಅ.16) ರಾತ್ರಿ ಇಲ್ಲಿನ 3 ಮನೆಗಳ ಒಳಗೆ ನೀರು ನುಗ್ಗಿದೆ. ಗುರುವಾರವೂ ಕಡಲ್ಕೊರೆತ ತೀವ್ರ ಗೊಂಡಿತ್ತು. ಸುಮಅರು 20-30 ಮೀ. ದೂರದಲ್ಲಿರುವ ನಾಗರಾಜ ಖಾರ್ವಿ, ಬಿಕ್ಕ ಖಾರ್ವಿ, ಚಂದು ಖಾರ್ವಿ, ಸಂಜೀವ ಖಾರ್ವಿ, ನಾಗೇಶ್ ಖಾರ್ವಿ ಹಾಗೂ ಮೋಹನ್ ಖಾರ್ವಿ ಅವರ ಮನೆಗಳಿದ್ದು, ಅಲ್ಲಿನ ನಿವಾಸಿಗಳು ಆತಂಕದಲ್ಲಿದ್ದಾರೆ.
ದಡದಲ್ಲಿದ್ದ ದೋಣಗಳಿಗೂ ಅಲೆಗಳು ಅಪ್ಪಳಿಸುತ್ತಿದ್ದು, ಕೆಲವರ ಬಲೆಗಳು ಮರಳಿನಡಿಗೆ ಬಿದ್ದಿವೆ. ದೋಣಿಗಳನ್ನು ಸುರಕ್ಷಿತವಾಗಿ ಇಡುವುದೇ ಸವಾಲಾಗಿ ಪರಿಣಮಿಸಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯು ಭಾರ ಕುಸಿತದ ಪರಿಣಾಮ ಅರಬ್ಬಿ ಸಮುದ್ರದಲ್ಲೂ ಸಣ್ಣ ಪ್ರಮಾಣದ ತೂಫಾನ್ ಆರಂಭವಾಗಿದೆ ಎಂಬ ಮಾಹಿತಿ ಇದೆ.
ಕೇರಳದಿಂದ ಆರಂಭವಾಗಿ ಕರ್ನಾಟಕದ ಕರಾವಳಿ, ಗೋವಾ, ರತ್ನಾಗಿರಿಯವರೆಗೂ ಇದರ ಪರಿಣಾಮವಿದೆ. ಇನ್ನೆರಡು ದಿನ ಇದು ಮುಂದು ವರಿಯುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
LATEST NEWS
ಉಡುಪಿ: ಬೈಂದೂರಿನ ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ
ಉಡುಪಿ: ಬೈಂದೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಒತ್ತಿನೆಣೆ ತಿರುವಿನಲ್ಲಿ ಗುಡ್ಡದ ಮಣ್ಣು ಕುಸಿದ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆ ಸುರಿಯುತ್ತಿದ್ದು, ರಾತ್ರಿ ಅಧಿಕ ಮಳೆ ಸುರಿದ ಪರಿಣಾಮ ಗುಡ್ಡ ಕುಸಿತ ಸಂಭವಿಸಿದೆ.
ಗುಡ್ಡದ ಮೇಲ್ಭಾಗದಲ್ಲಿ ಮಣ್ಣು ಅಪಾಯಕಾರಿ ಸ್ಥಿತಿಯಲ್ಲಿದೆ. ಕೆಲವು ತಿಂಗಳ ಹಿಂದೆ ಅಗ್ನಿಶಾಮಕ ವಾಹನದ ಮೂಲಕ ನೀರು ಸಿಂಪಡಿಸಿ ಕುಸಿಯುವ ಭೀತಿಯಲ್ಲಿರುವ ಗುಡ್ಡದ ಮಣ್ಣನ್ನು ಸಮತಟ್ಟು ಮಾಡಲಾಗಿತ್ತು. ಈ ಹಿಂದೆಯೂ ಈ ಭಾಗದಲ್ಲಿ ಗುಡ್ಡ ಕುಸಿಯುವ ಸಂಭವವಿದ್ದಾಗ ಮಣ್ಣು ತೆರವುಗೊಳಿಸಿ ಮುಂಜಾಗ್ರತೆ ವಹಿಸಲಾಗಿತ್ತು. ಆದರೆ ಕಳೆದೆರಡು ದಿನದಿಂದ ಮಳೆಯ ಪ್ರಮಾಣ ಅಧಿಕವಾದ ಕಾರಣ ಗುಡ್ಡದ ಮಣ್ಣು ಕುಸಿದಿದೆ.
ಭೂ ಕುಸಿತದಿಂದ ಚರಂಡಿಗೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಮಾಡಲಾಗಿದೆ. ಗುಡ್ಡದ ಮಣ್ಣು ಕುಸಿತದಿಂದ ಹೆದ್ದಾರಿ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಸ್ಥಳಕ್ಕೆ ತೆರಳಿದ ಐಆರ್ಬಿ ಅಧಿಕಾರಿಗಳು ಮಣ್ಣು ತೆರವುಗೊಳಿಸಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಒತ್ತಿನೆಣೆ ತಿರುವಿನ ರಾಘವೇಂದ್ರ ಮಠದ ಬಳಿ ಕುಸಿತ ಸಂಭವಿಸುವ ಆತಂಕ ಇರುವ ಕಾರಣ ಹೆದ್ದಾರಿ ಇಲಾಖೆ ಮತ್ತು ಐಆರ್ಬಿ ಕಂಪೆನಿ ಪ್ಲಾಸ್ಟರಿಂಗ್ ಮೂಲಕ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿದೆ.
ಉತ್ತರ ಕನ್ನಡದ ಶಿರೂರು ಗುಡ್ಡ ಕುಸಿತ ಬಳಿಕ ದಿಲ್ಲಿಯಿಂದ ಹಿರಿಯ ಭೂ ವಿಜ್ಞಾನಿಗಳು ಈ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇದರ ಹೊರತಾಗಿ, ಸಮೀಪದಸೋಮೇಶ್ವರ ಗುಡ್ಡ ಕೂಡಾ ಮಳೆಯ ಅಬ್ಬರದಿಂದಾಗಿ ಕುಸಿಯುತ್ತಿದೆ.ಗುಡ್ಡ ಭಾಗದಲ್ಲಿ ಖಾಸಗಿ ವ್ಯಕ್ತಿಗಳು ರೆಸಾರ್ಟ್ ನಿರ್ಮಿಸಲು ಅನಧಿಕೃತವಾಗಿ ರಸ್ತೆ ನಿರ್ಮಿಸಿದ ಕಾರಣ ಮಳೆಗಾಲದಲ್ಲಿ ಗುಡ್ಡದ ಮಣ್ಣು ನೀರಿನಲ್ಲಿ ಕೊಚ್ಚಿಹೋಗಿ ಆತಂಕ ಉಂಟು ಮಾಡಿತ್ತು.
ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಇದುವರಗೆ ಯಾವುದೆ ಕ್ರಮ ಕೈಗೊಂಡಿಲ್ಲ. ಎರಡು ದಿನಗಳ ಹಿಂದೆ ಮಳೆಗೆ ಗುಡ್ಡ ಇನ್ನಷ್ಟು ಕುಸಿದಿದ್ದು, ಗುಡ್ಡದ ಮೇಲ್ಭಾಗದಲ್ಲಿರುವ ಕ್ಷಿತಿಜ ನೇಸರ ಧಾಮ ಕೂಡಾ ಅಪಾಯದಲ್ಲಿದೆ.ಈ ಬಗ್ಗೆ ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ಥಳೀಯ ಜನರು ತಿಳಿಸಿದ್ದಾರೆ.
- FILM6 days ago
ಮಾಲ್ಡೀವ್ಸ್ ದ್ವೀಪದಲ್ಲಿ ಹನಿಮೂನ್..! ಜಾಲಿ ಮೂಡ್ನಲ್ಲಿ ತರುಣ್ ಸುಧೀರ್ ದಂಪತಿ
- LATEST NEWS5 days ago
‘ಸೆಕ್ಸ್’ ಗೆ ಅಡ್ಡಿಯಾದ ಇಬ್ಬರು ಮಕ್ಕಳನ್ನೇ ಹತ್ಯೆ ಮಾಡಿದ ಪಾಪಿ ತಾಯಿ.!
- FILM7 days ago
ಮಗುವಿನ ಮುಖ ರಿವೀಲ್ ಮಾಡಿದ ಕವಿತಾ-ಚಂದನ್ ದಂಪತಿ
- BIG BOSS5 days ago
ಯಾರೂ ಊಹಿಸದ ವ್ಯಕ್ತಿಗೆ ಈ ವಾರ ಕಿಚ್ಚನ ಚಪ್ಪಾಳೆ, ಬಿಗ್ಬಾಸ್ ಮನೆಯಲ್ಲಿ ಇದೇ ಮೊದಲು