ಗುನಾ: ಅಪರೂಪದ ಕೃಷ್ಣ ಮೃಗವನ್ನು ಬೇಟೆಯಾಡಲು ಬಂದ ಕಿಡಿಗೇಡಿಗಳಿಂದ ಅವರನ್ನು ಪತ್ತೆಹಚ್ಚಲು ಹೋದ ಮೂವರು ಪೊಲೀಸರು ಅಮಾನುಷವಾಗಿ ಗುಂಡಿಗೆ ಬಲಿಯಾದ ಆತಂಕಕಾರಿ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.
ನಿನ್ನೆ ಮುಂಜಾನೆ ವೇಳೆ ಗುನಾ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದ್ದು, ಗುನಾ ಜಿಲ್ಲೆಯ ನಿಷೇಧಿತ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಕೃಷ್ಣ ಮೃಗದ ಬೇಟೆಗೆ ಬಂದಿರುವ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ಧಾವಿಸಿದಾಗ ಶಸ್ತ್ರಾಸ್ತ್ರಧಾರಿ ಆರೋಪಿಗಳು ಮತ್ತು ಪೊಲೀಸರ ತಂಡ ಮುಖಾಮುಖಿಯಾಗಿದೆ.
ಈ ಸಂದರ್ಭ ಆರೋಪಿಗಳನ್ನು ಹಿಡಿಯಲು ಮುಂದಾದ ಪೊಲೀಸರ ಮೇಲೆ ಬೇಟೆಗಾರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಸಬ್ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿ ನಿಧನರಾಗಿದ್ದಾರೆ.
ವನ್ಯಜೀವಿ ಕಳ್ಳ ಬೇಟೆಗಾರರ ಗುಂಡಿನ ದಾಳಿಗೆ ಬಲಿಯಾದ ಪೊಲೀಸರನ್ನು ರಾಜ್ಕುಮಾರ್ ಜಾಟವ್, ನೀರಜ್ ಭಾರ್ಗವ್ ಮತ್ತು ಸಂತ್ರಾಮ್ ಎಂದು ಗುರುತಿಸಲಾಗಿದ್ದು, ಆರೋಪಗಳ ಮೇಲೆ ಪ್ರತಿದಾಳಿಗೆ ಪೊಲೀಸರು ಮುಂದಾದರಾದರೂ ಕಿಡಿಗೇಡಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಗುನಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ತಿಳಿಸಿದ್ದಾರೆ.
ಘಟನೆಯಲ್ಲಿ ಪೊಲೀಸ್ ವಾಹನದ ಚಾಲಕ ಕೂಡ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಶೀಘ್ರದಲ್ಲಿ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮೃತ ಪೊಲೀಸರನ್ನು ಹುತಾತ್ಮರೆಂದು ಪರಿಗಣಿಸಿ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಕುಟುಂಬದ ಓರ್ವ ಮಂದಿಗೆ ಸರ್ಕಾರಿ ಉದ್ಯೋಗ ಒದಗಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.