ಕುಂದಾಪುರ: ಆರ್ಡಿ ಕೊಂಜಾಡಿ ಗಂಟುಬೀಳು ಚಕ್ಕರ್ಮಕ್ಕಿ ಸಮೀಪದ ಕುಂಟುಹೊಳೆ ಕುಪ್ಪರಿಗೆಗುಂಡಿಯ ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮುಳುಗಿ ಮೃತಪಟ್ಟ ಘಟನೆ ನಿನ್ನೆ ಸಂಜೆ ನಡೆದಿದೆ.
ಮೋಹನ ನಾಯ್ಕ (21) ,ಸುರೇಶ (19) ಎಂದು ಗುರುತಿಸಲಾಗಿದೆ. ಇವರಿಬ್ಬರು ಸಹೋದರ ಸಂಬಂಧಿಗಳಾಗಿದ್ದಾರೆ.
ಇಬ್ಬರೂ ಕೊಂಜಾಡಿ ಗಂಟುಬೀಳು ಪರಿಸರಕ್ಕೆ ಸೋಮವಾರ ಕೂಲಿ ಕೆಲಸಕ್ಕೆ ಹೋಗಿದ್ದರು. ತಡರಾತ್ರಿಯ ವರೆಗೂ ಇವರು ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾಗ ಕುಂಟುಹೊಳೆ ಕುಪ್ಪರಿಗೆಗುಂಡಿ ಸಮೀಪ ಇಬ್ಬರ ಚಪ್ಪಲಿ ಕಾಣಸಿಕ್ಕಿದೆಯೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ಸಮೀಪದಲ್ಲಿ ಹರಿಯುತ್ತಿದ್ದ ಕುಂಟುಹೊಳೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.